ಲೋಕಸಭಾ ಚುನಾವಣೆಗೆ ಟಿಆರ್ ಎಸ್-ಬಿಜೆಪಿ ಮೈತ್ರಿ…!

ಹೈದರಾಬಾದ್‌:ಆ-5: 2019ರ ಲೋಕಸಭಾ ಚುನಾವಣೆಗೆ ಟಿಆರ್ ಎಸ್ (ತೆಲಂಗಾಣ ರಾಷ್ಟ್ರ ಸಮಿತಿ ) ಮತ್ತು ಬಿಜೆಪಿ ಮೈತ್ರಿಯತ್ತ ಹೆಜ್ಜೆ ಇಟ್ಟಿವೆ ಎನ್ನಲಾಗುತ್ತಿದೆ. ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, 2019ರ ಚುನಾವಣೆ ಕುರಿತು ಚರ್ಚ ನಡೆಸಿದ್ದಾರೆ.

ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದ ಕೆಸಿಆರ್, ಚುನಾವಣೋತ್ತರ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆಯಾದರೆ ಟಿಆರ್‌ಎಸ್‌ ಬೆಂಬಲಿಸಲು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಟಿಆರ್‌ಎಸ್‌ ಸದ್ಯಕ್ಕೆ ಎನ್‌ಡಿಎ ಪಾಲುದಾರ ಪಕ್ಷವಾಗಿಲ್ಲ. ಆದರೆ ಇತ್ತೀಚೆಗೆ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಮೋದಿ ಸರಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸಮತ ನಿರ್ಣಯದ ಮೇಲೆ ಮತದಾನದ ಸಂದರ್ಭದಲ್ಲಿ ಟಿಆರ್‌ಎಸ್‌ ಗೈರುಹಾಜರಾಗಿತ್ತು.

ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಎನ್‌ಡಿಎ ತೊರೆದ ಬಳಿಕ ಟಿಆರ್‌ಎಸ್‌ ಜತೆಗೆ ಬಿಜೆಪಿ ಮೈತ್ರಿ ಬಲವಾಗುತ್ತಿದೆ. ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಗೆ ಉತ್ತರಿಸುತ್ತ ಪ್ರಧಾನಿ ಮೋದಿ ಅವರು ನಾಯ್ಡು ಅವರನ್ನು ಟೀಕಿಸುತ್ತಲೇ, ಅಭಿವೃದ್ಧಿ ವಿಚಾರದಲ್ಲಿ ತೆಲಂಗಾಣವನ್ನು ಶ್ಲಾಘಿಸಿದ್ದರು.

50 ದಿನಗಳ ಅವಧಿಯಲ್ಲಿ ಕೆಸಿಆರ್ ಅವರ ಎರಡನೇ ಭೇಟಿ ಇದಾಗಿದೆ. ತೆಲಂಗಾಣ ಸರಕಾರದ ಕೆಲವು ಬೇಡಿಕೆಗಳನ್ನು ಕೇಂದ್ರ ಸರಕಾರ ಇನ್ನೂ ಒಪ್ಪಿಲ್ಲ. ಆದರೆ ಎರಡೂ ಪಕ್ಷಗಳ ನಡುವಣ ಸ್ನೇಹಕ್ಕೆ ಅದು ಅಡ್ಡಿಯಾಗಿಲ್ಲ.

‘ನಾವು ನಮ್ಮ ಬೇಡಿಕೆಗಳನ್ನು ಮುಂದುವರಿಸುತ್ತೇವೆ. ಕೇಂದ್ರ ಸರಕಾರ ಅವುಗಳನ್ನು ಈಡೇರಿಸಿದರೆ ತೆಲಂಗಾಣಕ್ಕೆ ಹೆಚ್ಚುವರಿ ಲಾಭವಾಗುತ್ತದೆ. ಇಲ್ಲವಾದರೆ ಯಾರನ್ನು ದೂಷಿಸಬೇಕು ಎಂಬುದು ನಮಗೆ ತಿಳಿದಿದೆ’ ಎಂದು ಟಿಆರ್‌ಎಸ್‌ ಸರಕಾರದ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ.

ಇನ್ನು ಲೋಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಅವಕಾಶ ಒದಗಿಸಿಕೊಡಲು ಟಿಆರ್‌ಎಸ್‌ ಗೆ ಪೂರ್ಣ ಮನಸ್ಸಿಲ್ಲ. ತೆಲಂಗಾಣದಲ್ಲಿ ಬಿಜೆಪಿಗೆ ಗೆಲ್ಲಬಹುದಾದ ಅಭ್ಯರ್ಥಿಗಳಿಲ್ಲ. ಹೀಗಾಗಿ ಹೆಚ್ಚೆಂದರೆ ಈಗಿರುವ ಐವರು ಬಿಜೆಪಿ ಶಾಸಕರ ವಿರುದ್ಧ ಟಿಆರ್‌ಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇರಬಹುದು ಅಷ್ಟೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಒಂದೊಮ್ಮೆ ಅಗತ್ಯ ಸಂಖ್ಯಾಬಲ ಪಡೆಯುವಲ್ಲಿ ವಿಫಲವಾದರೆ ಕೆಲವು ಪ್ರಾದೇಶಿಕ ಪಕ್ಷಗಳು ಬೆಂಬಲಿಸುವುದು ಖಚಿತ ಎಂಬ ನಿಲುವಿಗೆ ಕೆಸಿಆರ್‌ ಬಂದಿದ್ದಾರೆ ಎನ್ನಲಾಗಿದೆ.

Lok sabha election,TRS,BJP,K Chandrashekhar Rao,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ