ವಿಜಯಪುರದಲ್ಲಿ ಪ್ರಧಾನಿ ಮೋದಿ ಚುನಾವಣ ಪ್ರಚಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದುವರೆದ ವಾಗ್ದಾಳಿ

ವಿಜಯಪುರ:ಮೇ-8: ಕಾಂಗ್ರೆಸ್ ಮಹಿಳೆಯರ ಸುರಕ್ಷಣೆಗಾಗಿ ಏನೂ ಮಾಡುತ್ತಿಲ್ಲ. ಸುಮ್ಮನೇ ಸುಳ್ಲು ಹೇಳುತ್ತಿದೆ. ಇದೇ ವಿಜಯಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಯಿತು. ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಕ್ರಮ ಕೈಗೊಂಡಿತು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಅತ್ಯಾಚಾರದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿ ಮಾಡಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ಕಾನೂನು ಜಾರಿ ಮಾಡಿದ್ದೇವೆ. ಹೆಣ್ಣುಮಕ್ಕಳು ಹಿಂದೂ–ಮುಸ್ಲಿಂ–ಕ್ರಿಶ್ಚಿಯನ್ ಯಾರೇ ಆಗಿರಲಿ. ಅವರು ನಮ್ಮ ಮಕ್ಕಳು ಎಂದರು.

ಹೆಣ್ಣುಮಕ್ಕಳು ಅಂದರೆ ಹೆಣ್ಣುಮಕ್ಕಳು ಅಷ್ಟೇ. ಅವರ ಬದುಕನ್ನು ರಾಜಕೀಯ ವಿಷಯ ಮಾಡಬಾರದು. ಹಾಗೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಅವರು ಯಾವುದೇ ಧರ್ಮ, ಸಂಪ್ರದಾಯದವರು ಅದರೂ ಅವರಿಗೆ ಸಿಗುವಷ್ಟು ಮನ್ನಣೆ ಸಿಗಲೇಬೇಕು. ಮುಸ್ಲಿಂ ಮಹಿಳೆಯರಿಗೆ ಮೂರು ಬಾರಿ ತಲಾಖ್ ಹೇಳಿ ಹೊರಗೆ ಹಾಕುತ್ತಿದ್ದರು. ಮುಸ್ಲೀಂ ಮಹಿಳೆಯರ ರಕ್ಷಣೆಗಾಗಿ ನಾವು ತಲಾಖ್ ಕಾನೂನು ಮಂಡಿಸಿದೆವು. ಆದರೆ ಕಾಂಗ್ರೆಸ್ ಅದಕ್ಕೂ ಅಡ್ಡಗಾಲು ಹಾಕಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಗೆ ಕರ್ನಾಟಕ ರಾಜ್ಯದಲ್ಲಿ ಬಹುಮತ ಬರುವುದಿಲ್ಲ ಎಂದು ಎಸಿ ರೂಮಿನಲ್ಲಿ ಕುಳಿತ ಜನರು ಮಾತನಾಡುತ್ತಾರೆ. ಆ ಮಾತುಗಳನ್ನು ನಂಅಬೇಕಿಲ್ಲ. ಕಾರಣ ಅದಕ್ಕೆ ಇಲ್ಲಿಗೆ ಬಂದಿರುವ ನೀವೇ ಸಾಕ್ಷಿ. ಕರ್ನಾಟಕದಲ್ಲಿ ಸ್ಪಷ್ಟ ಸರ್ಕಾರ ಬರುತ್ತದೆ. ಇಲ್ಲಿನ ಜನ ಬದಲಾವಣೆ ಬಯಸಿದ್ದಾರೆ. ಇದಕ್ಕೆ ನೀವೇ ಸಾಕ್ಷಿ ಎಂದು ಹೇಳಿದ್ದಾರೆ. ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷವನ್ನು ಕೇವಲ ಅಧಿಕಾರದಿಂದ ಮಾತ್ರವೇ ಕೆಳಗಿಳಿಸುವುದಿಲ್ಲ. ಬದಲಿಗೆ 5 ವರ್ಷಗಳ ಕಠಿಣ ಶಿಕ್ಷೆಯನ್ನೂ ನೀಡಲಿದೆ ಎಂದರು.

ವಿಜಯಪುರ ಭಗವಾನ್ ಬಸವೇಶ್ವರರ ಜನ್ಮಭೂಮಿ, ಯಾರನ್ನೂ ಜಾತಿ, ಧರ್ಮದ ಆಧಾರದ ಮೇಲೆ ಬೇರೆ ಮಾಡಬೇಡಿ ಎಂಬ ಸಂದೇಶವನ್ನು ನೀಡಿದೆ. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ಬಸವಣ್ಣ ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಎಲ್ಲರನ್ನೂ ವಿಭಜನೆ ಮಾಡಿ, ಸಮುದಾಯಗಳ ನಡುವೆ ಕಿಚ್ಚನ್ನು ಹೆಚ್ಚಿಸುತ್ತಿದೆ. ಜಾತಿ, ಧರ್ಮ, ಮತಗಳ ಆಧಾರದ ಮೇಲೆ ವಿಭಜನೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಬಸವಣ್ಣ ಅವರ ಇವನಾರವ…ಇವನಾರವ ಎಂದೆನಸದಿರಯ್ಯ… ಇವ ನಮ್ಮವ… ಇವ ನಮ್ಮವ ಎಂದೆನಿಸಯ್ಯ ವಚನವನ್ನು ಕನ್ನಡದಲ್ಲಿಯೇ ಹೇಳಿದ ಅವರು, ವಿಜಯಪುರ ಬಸವಣ್ಣನವರು ಜನಿಸಿದ ಪವಿತ್ರ ಭೂಮಿಯಿದು ಎಂದು ನೆನಪಿಸಿಕೊಂಡರು.

ರಾಜ್ಯದಲ್ಲಿ ಬಿಜೆಪಿಗೆ ಸಿಗುತ್ತಿರುವ ಬೆಂಬಲ ನೋಡಿ ಕಾಂಗ್ರೆಸ್ ಭೀತಿಗೊಳಗಾಗಿದೆ. ಹೀಗಾಗಿ ಮೇ.15ರ ಫಲಿತಾಂಶದ ಬಳಿಕ ತಮ್ಮ ಸೋಲಿಗೆ ಇವಿಎಂ ಮೇಲೆ ತಪ್ಪು ಹೊರಿಸಲು ಸಿದ್ದತೆ ನಡೆಸುತ್ತಿದೆ.

ಕಳೆದ 3 ವರ್ಷಗಳಿಂದ ನೀರಿನ ಅಭಾವ ತಲೋದಿರೆ. ಶಿಕ್ಷಕರಿಲ್ಲದ ಶಿಕ್ಷಣ ಹಿಂದುಳಿದಿದೆ. ಇನ್ನು ಮರಳು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ. ಈ ಭಾಗಗಳನ್ನು ನೋಡಿಕೊಳ್ಳುತ್ತಿದ್ದ ಸಚಿವರು ತಮ್ಮ ಖಾತೆ ನಿರ್ವಹಿಸುವುದನ್ನು ಬಿಟ್ಟು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಭಗವಾನ್ ಬಸವಣ್ಣ, ಅಲ್ಲಮ್ಮ ಪ್ರಭು, ಅಕ್ಕಮಹಾದೇವಿ ಯಾರು ಎಂದು ಗೊತ್ತಿಲ್ಲದವರು, ನಾಮ್ದಾರ್ ಜೊತೆಗೂಡಿ ಧರ್ಮ ಒಡೆಯುವ ಕೆಲ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಳಿತು ಧರ್ಮ, ಜಾತಿಯನ್ನು ಒಡೆಯಲು ಯೋಜನೆ ರೂಪಿಸಿದ್ದಾರೆ.

ಬಸವೇಶ್ವರರ ಭಾವಚಿತ್ರವನ್ನು ಅಟಲ್ ಬಿಹಾರಿ ವಾಜಪೇಯಿಯವರು ಅಧಿಕಾರಕ್ಕೆ ಬಂದ ಮೇಲೆ ಸಂಸತ್ತಿನಲ್ಲಿ ಹಾಕಲಾಗಿತ್ತು. 50 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ಅಲ್ಲಿಯವರೆಗೂ ಏನು ಮಾಡಿತು?… ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಸವೇಶ್ವರರ ನೀತಿಗಳನ್ನು ದೇಶದಾದ್ಯಂತ ಪಸರಿಸುವ ಕೆಲಸ ಮಾಡಿದ್ದೇವೆ. ಲಂಡನ್ ನಲ್ಲಿ ನಿರ್ಮಿಸಲಾದ ಬಸವೇಶ್ವರರಮೂರ್ತಿ ಅನಾವರಣ ಮಾಡುವ ಸೌಭಾಗ್ಯ ಸಿಕ್ಕಿತು. ಮೊನ್ನೆ ಮೊನ್ನೆಯಷ್ಟೇ ಬಸವೇಶ್ವರ ದರ್ಶನ ಮಾಡಿಕೊಂಡು ಬಂದಿದ್ದೇನೆಂದು ತಿಳಿಸಿದರು.

ಕರ್ನಾಟಕದಲ್ಲಿ ಹಲವು ಪಠಾಧೀಶರು ತ್ರಿವಿಧ ದಾಸೋಹದ ಪರಂಪರೆಯನ್ನು ರಾಜ್ಯದಲ್ಲಿ ಬೆಳೆಸಿದರು. ತ್ರಿವಿಧ ದಾಸೋಹ ಎಂದರೆ ಅನ್ನ, ಅಕ್ಷರ, ಆರೋಗ್ಯ. ಬಿಜೆಪಿಯೂ ತ್ರಿವಿಧ ದಾಸೋಹ ತತ್ವದಲ್ಲಿ ನಂಬಿಕೆ ಇಟ್ಟಿದೆ. ಮಕ್ಕಳಿಗೆ ಶಿಕ್ಷಣ, ಯುವಕರಿಗೆ ಕೆಲಸ, ವೃದ್ಧರಿಗೆ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ತ್ರಿವಿಧ ದಾಸೋಹಕ್ಕೆ ಆದ್ಯತೆ ನೀಡಿದೆ.

ಮುದ್ರಾ ಯೋಜನೆಯಲ್ಲಿ ರೂ.12 ಕೋಟಿ ಯುವಕರಿಗೆ ನಮ್ಮ ಸರ್ಕಾರ ಸಾಲ ಸೌಲಭ್ಯ ನೀಡಿದೆ. ಇದರಿಂದಾಗಿ ಅವರು ಸ್ವಂತ ಉದ್ಯೋಗವನ್ನು ಮಾಡಲು ಸಾಧ್ಯವಾಗಿದೆ. ಆಯುಷ್ಮನ್ ಭಾರತ ಎಂಬ ಯೋಜನೆ ಜಾರಿಗೆ ತರಲಾಗಿದೆ. ಗಂಭೀರ ರೋಗಗಳಿಗೆ ತುತ್ತಾದ ಜನರಿಗೆ ಚಿಕಿತ್ಸೆಗೆ ಹಣವಿಲ್ಲದಿದ್ದರೆ ಸರ್ಕಾರದಿಂದ ರೂ.5 ಲಕ್ಷ ಸಿಗಲಿದೆ. ಕರ್ನಾಟಕ ಸರ್ಕಾರ ದೊಡ್ಡ ದೊಡ್ಡ ಮಾತನಾಡುತ್ತದೆ. ಆದರೆ, ರಾಜ್ಯ 6 ಲಕ್ಷ ಕುಟುಂಬಗಳು ಇನ್ನೂ ವಿದ್ಯುತ್ ವ್ಯವಸ್ಥೆಯನ್ನು ಪಡೆದಿಲ್ಲ. ನಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲರಿಗೂ ವಿದ್ಯುತ್ ದೊರಕಿಸಿಕೊಡಲಾಗಿದೆ. ಅಡುಗೆ ಮನೆಯಲ್ಲಿ ನಮ್ಮ ಮಾತೆಯರು ಅಡುಗೆ ಮಾಡಲು ಒದ್ದಾಡುತ್ತಿದ್ದರು. ಇದೂವರೆಗೂ 13 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕವನ್ನು ಇತ್ತು. ನಮ್ಮ ಸರ್ಕಾರ ಬಂದ ಬಳಿಕ 10 ಕೋಟಿ ಜನರಿಗೆ ಗ್ಯಾಸ್ ಸಂಪರ್ಕವನ್ನು ನೀಡಲಾಗಿದೆ. ಕರ್ನಾಟಕದಲ್ಲಿ 10 ಲಕ್ಷ ಕುಟುಂಬಗಳಿಗೆ ಪ್ರೀ ಗ್ಯಾಸ್ ಸಂಪರ್ಕ ನೀಡಿದ್ದೇವೆ.

ಕಾಂಗ್ರೆಸ್ ವಂಶಪಾರಂಪರ್ಯವನ್ನು ಮುಂದುವರೆಸಲು ಮತ ಕೇಳುತ್ತಿದ್ದಾರೆ. ಆದರೆ ನಾವು ವಿಕಾಸಕ್ಕಾಗಿ ಮತ ಕೇಳುತ್ತಿದ್ದೇವೆ. ಮೇ.15ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಅಧಿಕಾರಕ್ಕೆ ಬಂದ ಕೂಡಲೇ ರೈತ ಬಂಧು ಇಲಾಖೆ ಸ್ಥಾಪನೆಯಾಗಲಿದೆ ರೂ.1.5 ಲಕ್ಷ ವೆಚ್ಚದಲ್ಲಿ ನೀರಾವರಿ ಯೋಜನೆ ಜಾರಿಗೆ ಬರಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

Karnataka assembly election,PM Modi,Vijayapura

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ