![sriram](http://kannada.vartamitra.com/wp-content/uploads/2020/10/sriram-677x451.jpg)
ಉಡುಪಿ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಬುಧವಾರ ಕಂಚಿ ಕ್ಷೇತ್ರಕ್ಕೆ ತೆರಳಿ, ಶಂಕರಾಚಾರ್ಯ ಪೀಠಗಳಲ್ಲಿ ಒಂದಾದ ಶ್ರೀ ಕಂಚಿ ಕಾಮಕೋಟಿ ಪೀಠಾಪತಿ ಶ್ರೀವಿಜಯೇಂದ್ರ ಸರಸ್ವತೀ ಸ್ವಾಮೀಜಿ ಅವರನ್ನು ಭೇಟಿಯಾಗಿ ರಾಮಮಂದಿರ ನಿರ್ಮಾಣ ಕುರಿತು ಚರ್ಚಿಸಿದರು.
ಪೇಜಾವರ ಶ್ರೀಗಳನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಿದ ಕಂಚಿಶ್ರೀಗಳು, ಉಭಯ ಮಠಗಳೊಂದಿಗೆ ಮತ್ತು ವಿಶೇಷವಾಗಿ ಎರಡೂ ಮಠಗಳ ಹಿಂದಿನ ಗುರುಗಳಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀಜಯೇಂದ್ರ ಸರಸ್ವತೀ ಸ್ವಾಮೀಜಿಯವರ ಬಾಂಧವ್ಯ ಸ್ಮರಿಸಿಕೊಂಡರು.
ಅಯೋಧ್ಯೆ ರಾಮಮಂದಿರ ನಿರ್ಮಾಣದ ಬಗ್ಗೆ ಉಭಯ ಯತಿಗಳು ಸಮಾಲೋಚನೆ ನಡೆಸಿದರು. ಮುಂದೆ ನಡೆಯಲಿರುವ ನಿಸಂಗ್ರಹ ಅಭಿಯಾನ ಮತ್ತು ಇತರ ಕಾರ್ಯಗಳಲ್ಲಿ ವಿಶೇಷ ಸಹಕಾರ ಕೊಡಬೇಕೆಂದು ಪೇಜಾವರ ಶ್ರೀಗಳು ವಿಶೇಷ ಮನವಿ ಮಾಡಿಕೊಂಡರು.
ಇದಕ್ಕೂ ಮೊದಲು ಪೇಜಾವರ ಶ್ರೀಗಳು ಶಿಷ್ಯರ ಸಹಿತ ಶ್ರೀ ವರದರಾಜಸ್ವಾಮಿ, ಶ್ರೀ ಕಾಮಾಕ್ಷಿ ದೇವಿ ದರ್ಶನ ಪಡೆದು ಲೋಕದ ಒಳಿತಿಗೆ ಮತ್ತು ಶ್ರೀರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನತಾ ಸಿದ್ಧಿಗಾಗಿ ಪ್ರಾರ್ಥಿಸಿದರು.