ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ 13 ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತವಾಗಿವೆ

ಬೆಂಗಳೂರು,ಆ.4-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ 13 ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತವಾಗಿವೆ.

ಪ್ರಾದೇಶಿಕ ಸಮತೋಲನ, ಪ್ರದೇಶವಾರು, ಸಾಮಾಜಿಕ ನ್ಯಾಯ ಎಂದು ಮುಖ್ಯಮಂತ್ರಿಯವರು ಹೇಳಿಕೊಂಡರೂ ಈಗ ರಚನೆಯಾಗಿರುವ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾಶಸ್ತ್ಯ ಸಿಕ್ಕಿಲ್ಲ.

ಮೈಸೂರು, ಕಲಬುರಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೋಲಾರ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿಲ್ಲ. ಕೇವಲ 18 ಜಿಲ್ಲೆಗಳಿಗೆ ಮಾತ್ರ ಮಣೆ ಹಾಕಲಾಗಿದೆ.

ಬಿಜೆಪಿಯ ಭದ್ರಕೋಟೆ ಜಿಲ್ಲೆಗಳಾದ ಚಿಕ್ಕಮಗಳೂರಿನಲ್ಲಿ ನಾಲ್ವರು, ದಾವಣಗೆರೆ 5, ಬಳ್ಳಾರಿ 2, ಮೈಸೂರು 3, ಕೊಡಗು 2, ವಿಜಯಪುರ, ಯಾದಗಿರಿ ತಲಾ ಮೂವರು ಶಾಸಕರು ಇದ್ದರು ಕೂಡ ಈ ಜಿಲ್ಲೆಗಳಿಗೆ ಸ್ಥಾನಮಾನ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಅದರಲ್ಲೂ ಈ ಬಾರಿ ಸಂಪುಟದಲ್ಲಿ ಮಧ್ಯಕರ್ನಾಟಕ ರಾಜಧಾನಿ ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರಾಶಸ್ತ್ಯ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಇದೀಗ ನಿರೀಕ್ಷೆ ಹುಸಿಯಾಗಿದೆ.

ಉಳಿದಂತೆ 6 ಜಿಲ್ಲೆಗಳಿಂದ ತಲಾ ಇಬ್ಬರು ಶಾಸಕರಿಗೆ ಮಣೆ ಹಾಕಲಾಗಿದೆ. ಬೆಳಗಾವಿ, ಹಾವೇರಿ, ಶಿವಮೊಗ್ಗ, ತುಮಕೂರು, ಬಾಗಲಕೋಟೆ, ಉಡುಪಿ ಜಿಲ್ಲೆಗಳಿಗೆ ಎರಡು ಸ್ಥಾನವನ್ನು ಕೊಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ