ಪ್ರಶ್ನಾತೀತ ನಾಯಕರಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕತ್ವ

ಬೆಂಗಳೂರು,ಜು.24-ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕತ್ವ ಹುಟ್ಟುಹಾಕಲು ಹೈಕಮಾಂಡ್ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದೆ.

ಜನಸಮುದಾಯದ ನಾಯಕರೆಂದು ಗುರುತಿಸಿಕೊಂಡಿದ್ದ ಯಡಿಯೂರಪ್ಪನವರನ್ನು ಬದಲಾಯಿಸಿ ಅವರ ಸ್ಥಾನದಲ್ಲಿ ಬೇರೊಬ್ಬ ನಾಯಕನಿಗೆ ಅವಕಾಶ ನೀಡುವ ಹೈಕಮಾಂಡ್‍ನ ಯೋಜನೆ ಫಲಿಸುವುದೇ…? ಎಂಬ ಪ್ರಶ್ನೆ ಈಗ ಮೂಡಿದೆ.

ರಾಜಕೀಯ ಲೆಕ್ಕಾಚಾರಗಳೊಂದಿಗೆ ಬಹಳಷ್ಟು ಅಳೆದು ತೂಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆಗೆ ಹೈಕಮಾಂಡ್ ಮುಹೂರ್ತ ನಿಗದಿಪಡಿಸಿದೆ. ಜೊತೆ ಜೊತೆಗೆ ಪರ್ಯಾಯ ನಾಯಕನನ್ನೂ ಶೋಧಿಸುತ್ತಿದೆ.

ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಉತ್ತರಾಖಂಡ್ ರಾಜ್ಯಗಳಲ್ಲಿ ಮಾಸ್ ಲೀಡರ್‍ಗಳನ್ನು ಕಡೆಗಣಿಸಿ ಅಚ್ಚರಿಯ ಅಭ್ಯರ್ಥಿಗಳನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ಮಾದರಿಯಲ್ಲಿಯೇ ಕರ್ನಾಟಕಕ್ಕೂ ಸಿಎಂ ಆಯ್ಕೆಯಲ್ಲಿ ಅಚ್ಚರಿ ಮೂಡಿಸಲು ಪ್ರಧಾನಿ ಮೋದಿ – ಅಮಿತ್ ಷಾ ಜೋಡಿ ತಂತ್ರಗಾರಿಕೆ ರೂಪಿಸತೊಡಗಿದೆ.

ಬಹಳಷ್ಟು ವಿಭಿನ್ನ ರಾಜಕಾರಣ ಮತ್ತು ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕರ್ನಾಟಕದಲ್ಲಿ ಹೊಸ ಹೊಸ ರಾಜಕೀಯ ಪ್ರಯೋಗಗಳನ್ನು ಮಾಡುವುದು ಬಿಜೆಪಿ ಹೈಕಮಾಂಡ್‍ಗೆ ಅಂದುಕೊಂಡಷ್ಟು ಸುಲಭವಲ್ಲ.

ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಹೊಂದಿರುವ ಮಹಾನಾಯಕ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ನಿರ್ಲಕ್ಷಿಸಿ ಪರ್ಯಾಯ ನಾಯಕನನ್ನು ಬೆಳೆಸುವುದು ಸವಾಲಿನ ಕೆಲಸ ಎಂಬುದು ಅವರಿಗೂ ಗೊತ್ತು.

ಲಿಂಗಾಯತ ಮತ್ತು ಲಿಂಗಾಯೇತರ ಸಮುದಾಯಗಳಿಗೆ ಸೇರಿದ ನಾಯಕರಿಗೆ ಪಕ್ಷದಲ್ಲಿ ಮತ್ತು ಬಿಜೆಪಿ ಆಡಳಿತದ ಸರ್ಕಾರದಲ್ಲಿ ಅಧಿಕಾರ ಹಾಗೂ ಪ್ರೊ ನೀಡಿ ಪರ್ಯಾಯ ನಾಯಕನನ್ನು ಬೆಳೆಸಲು ತರಹೇವಾರಿ ಪ್ರಯೋಗ ನಡೆಸಿದರೂ ಯಡಿಯೂರಪ್ಪನವರಿಗಿದ್ದ ಜನ ಬೆಂಬಲದ ನಡುವೆ ಎಲ್ಲವೂ ಹೈಕಮಾಂಡ್‍ಗೆ ತಿರುಗು ಬಾಣವಾದವು.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬಿಜೆಪಿಯಲ್ಲಿ ಮಾಜಿ ಕೇಂದ್ರ ಸಚಿವ ದಿ.ಅನಂತಕುಮಾರ್, ಮಾಜಿ ಮುಖ್ಯಮಂತ್ರಿಗಳಾಗಿದ್ದ ಜಗದೀಶ ಶೆಟ್ಟರ್, ಡಿ.ವಿ. ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿಗಳಾಗಿದ್ದ ಸಚಿವ ಆರ್.ಅಶೋಕ, ಕೆ.ಎಸ್.ಈಶ್ವರಪ್ಪ, ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ, ಸಚಿವರಾದ ಮುರುಗೇಶ ನಿರಾಣಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರಮಾಜಿ ಸಚಿವರಾದ ಬಸನಗೌಡ ಯತ್ನಾಳ್, ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಹಲವು ನಾಯಕರಿಗೆ ಪಕ್ಷದ ಹೈಕಮಾಂಡ್ ಅಧಿಕಾರದ ಅವಕಾಶ ನೀಡಿದರೆ ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬೆಳೆಯಬಹುದೆ ಎಂಬುದನ್ನು ಪರೀಕ್ಷಿಸಲಾಯಿತಾದರೂ ಯಾರೊಬ್ಬರೂ ಆ ಭರವಸೆ ಮೂಡಿಸಲಿಲ್ಲ.

ಜಗದೀಶ ಶೆಟ್ಟರ್: ಲಿಂಗಾಯತ ಸಮುದಾಯಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ, ಪ್ರತಿ ಪಕ್ಷ ನಾಯಕನ ಹುದ್ದೆ, ಮುಖ್ಯಮಂತ್ರಿ ಪದವಿಗಳನ್ನು ನೀಡಲಾಯಿತಾದರೂ ಬಿಎಸ್‍ವೈಗೆ ಪರ್ಯಾಯ ನಾಯಕನೆನ್ನುವ ಮಟ್ಟಕ್ಕೆ ಬೆಳೆಯಲು ಸಾದ್ಯವಾಗಿಲ್ಲ.

ಡಿ.ವಿ.ಸದಾನಂದಗೌಡ: ಹಿರಿಯ ನಾಯಕ, ಆರ್‍ಎಸ್‍ಎಸ್ ಬೆಂಬಲವಿದ್ದ ಡಿ.ವಿ.ಸದಾನಂದ ಗೌಡ ಅವರನ್ನು ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬೆಳೆಸಲು ಪಕ್ಷ ಸಾಕಷ್ಟು ಪ್ರಯತ್ನಿಸಿತು . ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನ , ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ ನೀಡಲಾದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ.

ಅನಂತಕುಮಾರ್: ಬಿಜೆಪಿಯ ಮತ್ತೋರ್ವ ನಾಯಕರಾಗಿದ್ದ ಅನಂತಕುಮಾರ್ ಅವರನ್ನು ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬೆಳೆಸಲು ಹೈಕಮಾಂಡ್ ಬಹಳ ಪ್ರಯತ್ನಿಸಿತು. ಒಂದು ಹಂತದಲ್ಲಿ ಅನಂತಕುಮಾರ್ ಅವರು ಯಡಿಯೂರಪ್ಪನವರ ನಂತರದ ಬಿಜೆಪಿ ಹಿರಿಯ ನಾಯಕರಾಗಿಯೂ ಹೊರಹೊಮ್ಮಿದರು.
ಆದರೆ ಬ್ರಾಹ್ಮಣರಾಗಿದ್ದ ಅನಂತಕುಮಾರ್ ಅವರಿಗೆ ಜಾತಿ ರಾಜಕಾರಣದಲ್ಲಿ ಜನಬೆಂಬಲ ಸಿಗುವುದು ಕಷ್ಟವೆಂದು ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ಈ ನಡುವೆ ಯಡಿಯೂರಪ್ಪನವರು ಸಹ ಬಿಜೆಪಿಯಲ್ಲಿ ತಮಗೆ ಪರ್ಯಾಯ ನಾಯಕನಾಗಿ ಸ್ಪರ್ಧೆ ಒಡ್ಡಬಲ್ಲರೆಂದು ತಿಳಿದು ರಾಜ್ಯ ರಾಜಕಾರಣದಲ್ಲಿ ಅನಂತಕುಮಾರ್ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ಅನಂತಕುಮಾರ್ ಹೆಗಡೆ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ, ಕಟ್ಟಾ ಹಿಂದುತ್ವವಾದಿಯಾಗಿದ್ದ ಅನಂತಕುಮಾರ್ ಹೆಗಡೆ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿ ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಬೆಳೆಸುವ ಪ್ರಯತ್ನವನ್ನೂ ಮಾಡಲಾಗಿತ್ತು. ಆದರೆ ಅನಂತಕುಮಾರ್ ಕುಮಾರ್ ಹೆಗಡೆ ಆಡಿದ ವಿವಾದಾತ್ಮಕ ಮಾತುಗಳಿಂದ ಪಕ್ಷ ಸಾಕಷ್ಟು ಮುಜುಗರ ಅನುಭವಿಸಬೇಕಾಯಿತು.

ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮಲಿ ಎಂದು ಮೂರು ಡಿಸಿಎಂ ಪೋಸ್ಟ್ಳನ್ನು ಸೃಷ್ಟಿಸಿ ಲಕ್ಷ್ಮಣ ಸವದಿ, ಡಾ.ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಯಿತಾದರೂ ಇಲ್ಲಿಯೂ ಈ ತಂತ್ರಗಾರಿಕೆ ಫಲ ನೀಡಲಿಲ್ಲ.

ಬಿಎಸ್‍ವೈ ಪಕ್ಷ ಬಿಟ್ಟಾಗಲೂ ಮೂಡದ ನಾಯಕತ್ವ:
ದೊಡ್ಡ ಆಲದ ಮರದ ಕೆಳಗೆ ಮತ್ತೊಂದು ಆಲದ ಮರ ಬೆಳೆಯುವುದಿಲ್ಲ ಎನ್ನುವ ಮಾತೊಂದಿದೆ. ಯಡಿಯೂರಪ್ಪನವರು ಪಕ್ಷದಲ್ಲಿ ಯಾವ ನಾಯಕರಿಗೂ ಬೆಳೆಯಲು ಬಿಡುವುದಿಲ್ಲ ಎಂಬ ಅಪವಾದವಿತ್ತು. ಪಕ್ಷದ ಹೈಕಮಾಂಡ್ ಜತೆಗಿನ ಭಿನ್ನಾಭಿಪ್ರಾಯಗಳಿಂದ ಯಡಿಯೂರಪ್ಪನವರು 2013ರಲ್ಲಿ ಬಿಜೆಪಿ ಬಿಟ್ಟು ತಮ್ಮದೇ ಹೊಸ ಪ್ರಾದೇಶಿಕ ಪಕ್ಷ ಕಟ್ಟಿದಾಗಲೂ ಬಿಜೆಪಿಯಲ್ಲಿ ಬಿಎಸ್‍ವೈಗೆ ಸರಿಸಮವಾದ ನಾಯಕ ಹುಟ್ಟಲಿಲ್ಲ. ಆಗ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 224 ರಲ್ಲಿ ಕೇವಲ 44 ಕ್ಷೇತ್ರ ಗೆದ್ದು ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎನ್ನುವ ಸಂದೇಶ ರವಾನೆಯಾಯಿತು. ಸುಮಾರು 20 ವರ್ಷಗಳಿಂದ ನಡೆಸಿದ ಪ್ರಯೋಗಗಳೆಲ್ಲವೂ ಫಲ ನೀಡದೆ ವಿಫಲವಾದ ಬಳಿಕವೂ ಹೈಕಮಾಂಡ್ ಈಗ ಮತ್ತೊಮ್ಮೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪರ್ಯಾಯ ನಾಯಕತ್ವ ಹುಟ್ಟು ಹಾಕುವ ಸಾಹಸಕ್ಕೆ ಕೈಹಾಕಿ ಯಶಸ್ಸಿನ ನಿರೀಕ್ಷೆಯಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ