ಮೇಕೆದಾಟು ವಿಚಾರದಲ್ಲಿ ರಾಜ್ಯ ಸರ್ಕಾರ ಬಿಜೆಪಿ ಹೈಕಮಾಂಡ್ ಹೇಳಿದಂತೆ ಕೇಳುತ್ತಿದೆ: ಅಲ್ಲದೆ ಹೈಕಮಾಂಡ್ ಈ ಯೋಜನೆಯ ವಿರುದ್ಧವಿದೆ – ಕುಮಾರಸ್ವಾಮಿ

ಬೆಂಗಳೂರು, ಜು.20-ಮೇಕೆದಾಟು ಯೋಜನೆ ಆರಂಭವಾಗದು ಎಂದು ಪ್ರಧಾನಿ, ಜಲಶಕ್ತಿ ಸಚಿವ ಭರವಸೆ ಕೊಟ್ಟಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಹಾಗಿದ್ದರೆ, ಯೋಜನೆ ವಿಚಾರದಲ್ಲಿ ಕೇಂದ್ರವು ಕರ್ನಾಟಕಕ್ಕೆ ಅಭಯ ನೀಡಿದೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ಹೇಳಿಕೆಗಳು ಸುಳ್ಳೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರ-ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಆಗುವ ಲಾಭ ಇದೇನಾ ಎಂದು ಟೀಕಿಸಿದ್ದಾರೆ.

ಮೇಕೆದಾಟು ವಿಚಾರದಲ್ಲಿ ರಾಜ್ಯ ಸರ್ಕಾರ ಬಿಜೆಪಿ ಹೈಕಮಾಂಡ್ ಹೇಳಿದಂತೆ ಕೇಳುತ್ತಿದೆ. ಅಲ್ಲದೆ ಬಿಜೆಪಿ ಈ ಯೋಜನೆಯ ವಿರುದ್ಧವಿದೆ. ಯೋಜನೆ ತಡೆಯಲು ತಮಿಳುನಾಡು ನಡೆಸುತ್ತಿರುವ ಸಾಂಘಿಕ ಹೋರಾಟದಂತೆ, ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕಾರ್ಯತಂತ್ರ ರೂಪಿಸುತ್ತಿಲ್ಲ. ಆದರೆ, ಯೋಜನೆ ಜಾರಿ ಶತಸಿದ್ಧ ಎನ್ನುವ ಮೂಲಕ ಕನ್ನಡಿಗರ ಮೂಗಿಗೆ ತುಪ್ಪ ಸವರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮೇಕೆದಾಟಿನ ಡ್ಯಾಂನಿಂದ ತಮಿಳುನಾಡಿಗೆ ಯಾವ ನಷ್ಟವೂ ಇಲ್ಲ. ಆದರೂ ಡ್ಯಾಂ ನಿರ್ಮಾಣ ಆಗದಂತೆ ತಡೆಯಲು ಶತಪ್ರಯತ್ನ ಮಾಡುತ್ತಿದೆ. ಸರ್ವಪಕ್ಷ ಸಭೆ ಮಾಡಿ ಮುಂದಿನ ಕಾರ್ಯತಂತ್ರ ರೂಪಿಸಿದೆ, ಪ್ರಧಾನಿ, ಸಚಿವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಒತ್ತಡ ಹಾಕಿದೆ. ಆದರೆ, ಯೋಜನೆಯಿಂದ ಅನುಕೂಲ ಪಡೆಯಲಿರುವ ರಾಜ್ಯ ಸರ್ಕಾರ ಈವರೆಗೆ ಏನೇನು ಮಾಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಹೆಚ್ಚುವರಿ ನೀರಿನ ಮೇಲೆ ಕಣ್ಣಿಟ್ಟು ತಮಿಳುನಾಡು 6 ತಿಂಗಳ ಹಿಂದೆ ನದಿ ಜೋಡಣೆ ಆರಂಭಿಸಿತು. ತಮಿಳುನಾಡಿನ ಈ ಯೋಜನೆ ವಿರುದ್ಧ ಕರ್ನಾಟಕ ಆಕ್ಷೇಪಣೆ ಸಲ್ಲಿಸಿದ್ದು ಮಾತ್ರ ನೆನ್ನೆ. ಈ ಹೆಚ್ಚುವರಿ ನೀರು ಈಗ ಡ್ಯಾಂ ನಿರ್ಮಾಣಕ್ಕೆ ತೊಡಕಾಗಿದೆ. ಇದರ ಆಧಾರದಲ್ಲಿ ರೂಪಿತವಾದ ನದಿ ಜೋಡಣೆ ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ವಿಳಂಬ ಮಾಡಿತ್ತು ಎಂದು ಅವರು ಆರೋಪಿಸಿದ್ದಾರೆ.

ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರ ತನ್ನಿಷ್ಟದಂತೆ ನಡೆದುಕೊಳ್ಳುವುದನ್ನು ಬಿಟ್ಟು ಎಲ್ಲರ ಅಭಿಪ್ರಾಯ ಸಂಗ್ರಹಿಸಲಿ. ಕಗ್ಗಂಟಾಗುತ್ತಿರುವ ಈ ಯೋಜನೆಯನ್ನು ದಕ್ಕಿಸಿಕೊಳ್ಳಲು ಸಾಂಘಿಕವಾಗಿ ಹೋರಾಡಬೇಕು. ಇಲ್ಲವಾದರೆ ಕಾವೇರಿ ನೀರಿನ ವ್ಯಾಜ್ಯದಂತೆ, ಮೇಕೆದಾಟಿನಲ್ಲಿ ಡ್ಯಾಂ ನಿರ್ಮಾಣ ಮಾಡುವುದೂ ಒಂದು ವ್ಯಾಜ್ಯವಾಗಿ ಉಳಿದು ಹೋಗಲಿದೆ ಎಂದಿದ್ದಾರೆ.

ರಾಜ್ಯದ ಜನರು ಗಮನಿಸಬೇಕಾದ ಒಂದು ಸಂಗತಿ ಇದೆ. ದಶಕಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಅಲ್ಲ. ಅನುಮೋದನೆ ಸಿಕ್ಕ ಯೋಜನೆಗೆ ವಿವಿಧ ಇಲಾಖೆಗಳ ಅನುಮತಿ ಬೇಕು. ರಾಷ್ಟ್ರೀಯ ಪಕ್ಷವಿದ್ದರೂ ಅನುಮತಿ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿಗೆ ತಮಿಳುನಾಡಿನಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವ ತವಕ. ಹೀಗಾಗಿ ಬಿಜೆಪಿ ತಮಿಳುನಾಡಿನ ಹಿತಾಸಕ್ತಿ ಕಾಯುತ್ತಿದೆ. ಯೋಜನೆ ತಡೆಯುವ ಪ್ರಯತ್ನದ ವಿರುದ್ಧ ಹೋರಾಡಬೇಕಿದ್ದ ಕಾಂಗ್ರೆಸ್ ತಮಿಳುನಾಡು ಸರ್ಕಾರದ ಪಾಲುದಾರ ಪಕ್ಷ. ಹೀಗಾಗಿ ಜೆಡಿಎಸ್ ಒಂದೇ ಈಗ ಮೇಕೆದಾಟು ಯೋಜನೆಗೆ ಪರಿಹಾರ ಎಂದು ಹೆಚ್‍ಡಿಕೆ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ