ಮದ್ಯಪಾನ ಸಂಯಮ ಮಂಡಳಿ ಹೆಸರು ಬದಲಿಗೆ ಚಿಂತನೆ

ಬೆಂಗಳೂರು: ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ನೂತನ ಅಧ್ಯಕ್ಷ ಹಣಮಂತ ಕೊಟಬಾಗಿ ಬುಧವಾರ ಧರ್ಮಸ್ಥಳ ಧರ್ಮಾಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಡಾ| ಡಿ. ವೀರೇಂದ್ರ ಹೆಗ್ಗಡೆ, ರಾಜ್ಯದಲ್ಲಿರುವ ಜನಜಾಗೃತಿ ವೇದಿಕೆಯ ಪದಾಕಾರಿಗಳ ಜೊತೆಯಲ್ಲಿ ಚರ್ಚಿಸಿ ತಾಲೂಕು ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಯುವಜನತೆಗೆ ನೀಡಬೇಕಾಗಿದೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕಿರುಚಿತ್ರಗಳನ್ನು ರಚಿಸಿದ್ದು, ವ್ಯಸನದ ಭೀಕರತೆಯನ್ನು ಜನಮಾನಸದಲ್ಲಿ ಬಿತ್ತರಿಸಿದಾಗ ಜಾಗೃತಿ ಬರಲು ಸಾಧ್ಯ. ಮಂಡಳಿಯ ಹೆಸರು ಬದಲಾವಣೆ ಪ್ರಸ್ತಾಪ ಸ್ವಾಗತಾರ್ಹವಾಗಿದ್ದು, ಸರಕಾರಕ್ಕೂ ಪತ್ರ ಬರೆಯುವೆ ಎಂದರು.
ಹಣಮಂತ ಕೊಟಬಾಗಿ ಮಾತನಾಡಿ, ಪ್ರಸ್ತುತ ಮಾದಕ ವಸ್ತುಗಳ ಹಾವಳಿ ಬಹಳಷ್ಟಿದೆ. ಸಮಾಜದಲ್ಲಿ ವಿವಿಧ ಪ್ರಕಾರದ ಮಾದಕ ವಸ್ತುಗಳನ್ನು ಬಳಕೆ ಮಾಡುವ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಮಂಡಳಿಯ ಹೆಸರನ್ನು ವ್ಯಸನಮುಕ್ತ ಸಲಹಾ ಮಂಡಳಿಯಾಗಿ ಮರುನಾಮಕರಣ ಮಾಡುವ ಚಿಂತನೆ ಇದೆ ಎಂದರು.
ಇದೇ ವೇಳೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಸಂಯಮ ಮಂಡಳಿಯ ಸಹಯೋಗದೊಂದಿಗೆ ಮದ್ಯ ವರ್ಜನ ಶಿಬಿರ ಸಂಯೋಜನೆಗೆ ಸರಕಾರದಿಂದ ಅನುಮೋದಿತ ಕ್ರಿಯಾಯೋಜನೆಯಲ್ಲಿ ನಿಗದಿಪಡಿಸಿದಂತೆ ರೂ.5 ಲಕ್ಷ ರೂ. ಮೊತ್ತವನ್ನು ವೇದಿಕೆಗೆ ನೀಡಲಾಯಿತು.
ವ್ಯಸನ ಮುಕ್ತ ಕುಟುಂಬ ಕಾರ್ಯಕ್ರಮ:
ಕೋವಿಡ್ ಸಮಸ್ಯೆಯಿಂದ ಕಳೆದ 9 ತಿಂಗಳಿನಿಂದ ಮದ್ಯ ವರ್ಜನ ಶಿಬಿರಗಳು ಸ್ಥಗಿತಗೊಂಡಿವೆ. ಮುಂದಿನ ದಿನಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸಿಕೊಂಡು ಶಿಬಿರ ನಡೆಸಲಾಗುವುದು. ಲಾಕ್ ಡೌನ್ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯಿಂದ ಸರ್ವೆ ನಡೆಸಿದಾಗ ಶೇ.85 ಮಂದಿ ಪಾನ ನಿಷೇಧದಿಂದ ಕುಟುಂಬಗಳಲ್ಲಿ ಸಂತೋಷ, ಸಮಾಜದಲ್ಲಿ ಶಾಂತಿ, ನೆಲಸಲಿದೆ ಎಂಬುದಾಗಿ ಹಲವು ತಿಳಿಸಿದ್ದಾರೆ. ಸದ್ಯದಲ್ಲೇ ವ್ಯಸನ ಮುಕ್ತ ಕುಟುಂಬ ನಿರ್ಮಾಣದ ಕಲ್ಪನೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲï.ಹೆಚ್. ಮಂಜುನಾಥ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ