ಜಿ20 ಶೃಂಗಸಭೆ: 9 ಅಂಶಗಳ ಕಾರ್ಯಸೂಚಿ ಮುಂದಿಟ್ಟ ಭಾರತ

ಬ್ಯೂನಸ್ ಎರೆಸ್: ಆರ್ಥಿಕ ಅಪರಾಧಿಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಮತ್ತು ಸಕ್ರಿಯ ಸಹಕಾರಕ್ಕೆ ಜಿ 20 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿರುವ ಭಾರತ, 9 ಅಂಶಗಳ ಕಾರ್ಯಸೂಚಿ ಸಲಹೆಯನ್ನು ಮುಂದಿಟ್ಟಿದೆ.

ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಎರೆಸ್ ನಲ್ಲಿ ನಡೆಯುತ್ತಿರುವ ಜಿ 20 ದೇಶಗಳ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, 9 ಅಂಶಗಳ ಕಾರ್ಯಸೂಚಿಯನ್ನು ಮುಂದಿಟ್ಟಿದ್ದಾರೆ. ಈ ಮೂಲಕ ಆರ್ಥಿಕ ಅಪರಾಧಿಗಳನ್ನು ತಮ್ಮ ದೇಶಕ್ಕೆ ಸುಗಮವಾಗಿ ಪ್ರವೇಶಿಸಿ ನಿಶ್ಚಿಂತೆಯಿಂದ ನೆಲೆಸಲು ತಡೆಯಲು ಒಂದು ವ್ಯವಸ್ಥಿತ ಕಾರ್ಯತಂತ್ರದ ರಚನೆ ಮಾಡಲು ಒಟ್ಟಾಗಿ ಪ್ರಯತ್ನಿಸುವಂತೆ ಜಿ -20 ದೇಶಗಳಿಗೆ ಪ್ರಧಾನಿ ಕರೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ವ್ಯಾಪಾರ, ಅಂತಾರಾಷ್ಟ್ರೀಯ ಹಣಕಾಸು ಮತ್ತು ತೆರಿಗೆ ವ್ಯವಸ್ಥೆ, ಆರ್ಥಿಕ ಅಪರಾಧಗಳನ್ನು ಮಟ್ಟಹಾಕಲು ಕಾನೂನು ಪ್ರಕ್ರಿಯೆಯಲ್ಲಿ ಸಹಕಾರ, ಅಪರಾಧಿಗಳನ್ನು ಬೇಗನೆ ಪತ್ತೆಹಚ್ಚುವುದು, ಅಪರಾಧಿಗಳ ವಿಚಾರಣೆ ಪ್ರಕ್ರಿಯೆಯಲ್ಲಿ ದಕ್ಷತೆ ತೋರುವುದು ಮೊದಲಾದವುಗಳು ಭಾರತ ಮುಂದಿಟ್ಟಿರುವ ಅಂಶಗಳಲ್ಲಿ ಸೇರಿವೆ.

ತಮ್ಮ ದೇಶದಲ್ಲಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆರ್ಥಿಕ ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಕೂಡ ಜಿ20 ರಾಷ್ಟ್ರಗಳಿಗೆ ಭಾರತ ಒತ್ತಾಯಿಸಿದೆ.

ಭ್ರಷ್ಟಾಚಾರ ವಿರುದ್ಧ ವಿಶ್ವಸಂಸ್ಥೆಯ ಸಭೆಯ ತತ್ವಗಳು(ಯುಎನ್ ಸಿಎಸಿ), ಬಹುರಾಷ್ಟ್ರೀಯ ಸಂಘಟಿತ ಅಪರಾಧಗಳ ವಿರುದ್ಧ ವಿಶ್ವಸಂಸ್ಥೆಯ ಹೋರಾಟ(ಯುಎನ್ಒಟಿಸಿ)ವನ್ನು ಪರಿಣಾಮಕಾರಿಯಾಗಿ ಮತ್ತು ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ಭಾರತ ಒತ್ತಾಯಿಸಿದೆ.

ಸ್ಪರ್ಧಾತ್ಮಕ ಅಧಿಕಾರಿಗಳು ಮತ್ತು ಹಣಕಾಸು ಜಾಗೃತ ಘಟಕಗಳ ನಡುವೆ ಸರಿಯಾದ ಸಮಯಕ್ಕೆ ಮತ್ತು ಸವಿಸ್ತಾರವಾಗಿ ಮಾಹಿತಿಗಳ ವಿನಿಮಯಕ್ಕೆ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಆದ್ಯತೆ ಮತ್ತು ಗಮನ ನೀಡಲು ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಕರೆಯಬೇಕು ಎಂದು ಕೂಡ ಭಾರತ ಸಲಹೆ ನೀಡಿದೆ.

ದೇಶಭ್ರಷ್ಟ ಆರ್ಥಿಕ ಅಪರಾಧಿಗಳಿಗೆ ಒಂದು ಸರಿಯಾದ ವ್ಯಾಖ್ಯಾನವನ್ನು ಎಫ್ಎಟಿಎಫ್ ನೀಡಬೇಕು. ಜಿ-20 ರಾಷ್ಟ್ರಗಳಲ್ಲಿ ಆಯಾ ದೇಶಗಳ ಸ್ಥಳೀಯ ಕಾನೂನುಗಳಿಗೆ ಸಂಬಂಧಪಟ್ಟಂತೆ ಮಾರ್ಗದರ್ಶನ ಮತ್ತು ನೆರವು ನೀಡಲು ಆರ್ಥಿಕ ಅಪರಾಧಿಗಳ ಬಗ್ಗೆ ಗಮನಹರಿಸಲು ಗುರುತಿಸುವಿಕೆ, ಹಸ್ತಾಂತರ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಿಗೆ ಎಫ್ಎಟಿಎಫ್ ಒಂದು ಸಾಮಾನ್ಯ ಒಪ್ಪಿಗೆಯ ಪ್ರಮಾಣಿತ ವಿಧಾನಗಳನ್ನು ಬೆಳೆಸಬೇಕು ಎಂದು ಹೇಳಿದೆ.

G20 summit,India presents 9-point agenda,PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ