ಕರ್ನಾಟಕದಲ್ಲಿ ಭಾಜಪ ಹವಾ ಅಲ್ಲ, ಬಿರುಗಾಳಿಯೇ ಇದೆ: ಪ್ರಧಾನಿ ಮೋದಿ

ಚಾಮರಾಜನಗರ:ಮೇ-1; ಚಾಮರಾಜನಗರ ಜಿಲ್ಲೆಗೆ ಬಂದರೆ ಅಧಿಕಾರ ಕಳೆದುಕೊಳ್ಳತ್ತಾರೆಂಬ ಮೂಢನಂಬಿಕೆಯನ್ನು ಬದಿಗೊತ್ತಿ ಚಾಮರಾಜನಗರಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ ಮೋದಿ ಸಮಾವೇಶಕ್ಕಾಗಿ ಸಂತೆಮರಹಳ್ಳಿ ಹೋಬಳಿ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಬೃಹತ್ ವೇದಿಕೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು..

ಕಾಂಗ್ರೆಸ್ ಭದ್ರಕೋಟೆಗೆ ನರೇಂದ್ರ ಮೋದಿ ತಂಡ ಲಗ್ಗೆ ಇಟ್ಟಿದ್ದು, ದೇಶದ ಪ್ರಧಾನಿಯೊಬ್ಬರು ಜಿಲ್ಲೆಗೆ ಆಗಮಿಸುತ್ತಿರುವುದು ಇದೇ ಮೊದಲಾಗಿದೆ.

ಈ ವೇಳೆ ಸಮಾವೇಶದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು. ಮಲೆ ಮಹದೇಶ್ವರ, ಹಿಮವದ್ ಗೋಪಾಲಸ್ವಾಮಿ, ಭಗವಾನ್ ಮಂಟೇಸ್ವಾಮಿ, ದೇವಿ ಮಾರವ್ವ, ಬಿಳಿಗಿರಿ ರಂಗ ಸೇರಿದಂತೆ ಎಲ್ಲ ದೇವರಿಗೆ ನನ್ನ ನಮಸ್ಕಾರಗಳು. ಮೈಸೂರು ಚಾಮರಾಜ ಒಡೆಯರ್, ಜಿ.ಪಿ.ರಾಜರತ್ನಂ, ಡಾ.ರಾಜ್​ಕುಮಾರ್​ ಅವರಿಗೆ ನನ್ನ ನಮಸ್ಕಾರಗಳು. ಸುತ್ತೂರು ಮಠ, ಕನಕಗಿರಿ ಸೇರಿದಂತೆ ಹಲವು ಮಠಗಳಿಗೆ ನಮಸ್ಕಾರ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಬಿಜೆಪಿ ಅಲೆಯಲ್ಲ ಬಿರುಗಾಳಿ ಎದ್ದಿದೆ ಎಂದು ತಿಳಿದುಬರುತ್ತಿದೆ. ಕರ್ನಾಟಕದಲ್ಲಿ ಭಾಜಪ ಹವಾ ಇದೆ ಎಂದು ದೆಹಲಿಯಲ್ಲಿ ಹೇಳುತ್ತಿದ್ದರು. ಆದರೆ ನನ್ನ ಪ್ರಥಮ ಪ್ರಚಾರ ಸಭೆ ಇದು. ಇಲ್ಲಿ ಭಾಜಪ ಹವಾ ಅಲ್ಲ ಬಿರುಗಾಳಿ ಇದೆ. ಹೊರಗಡೆ ಬಿಸಿಲಲ್ಲೂ ಜನರು ನಿಂತಿದ್ದಾರೆ. ನಿಮ್ಮ ತಪಸ್ಸನ್ನು ವ್ಯರ್ಥ ಮಾಡುವುದಿಲ್ಲ. ನಿಮ್ಮ ಕನಸು ಸಕಾರಗೊಳಿಸುತ್ತೇವೆ ಎಂದು ಹೇಳಿದರು.

ಭಾರತದ 1,800 ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ನೀಡವ ಕಾರ್ಯವನ್ನು ನಾವು ಮಾಡಿದ್ದೇವೆ. ಇದಕ್ಕೆ ನಾನು ದೇಶದ ಕಾರ್ಮಿಕರಿದೆ ಧನ್ಯವಾದಗಳನ್ನು ಹೇಳುತ್ತೇನೆ.
ಕಾಂಗ್ರೆಸ್ ಪಕ್ಷದ ಹೊಸ ಅಧ್ಯಕ್ಷರು ಉತ್ಸಾಹದಲ್ಲಿ ಏನೇನೋ ಮಾತನಾಡಿ ಬಿಡುತ್ತಾರೆ. ಹಳ್ಳಿಗಳಿಗೆ ವಿದ್ಯುತ್ ತಲುಪಿಸಲು ಸಹಾಯ ಮಾಡಿದ ಕಾರ್ಮಿಕರಿಗಾಗಿ ರಾಹುಲ್ ಅವರ ಬಾಯಿಂದ ಕೆಲವು ಒಳ್ಳೆಯ ಶಬ್ಧಗಳು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವರಿಂದ ಒಳ್ಳೆಯ ಮಾತುಗಳು ನಿರೀಕ್ಷೆ ಮಾಡುವುದೂ ಕೂಡ ವ್ಯರ್ಥ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ 60 ವರ್ಷ ಆಡಳಿತ ಮಾಡಿದರೂ ಕೋಟ್ಯಾಂತರ ಜನರನ್ನು ಕತ್ತಲಲ್ಲಿರುವಂತೆ ಮಾಡಿತು. ಅಷ್ಟು ವರ್ಷಗಳ ಆಡಳಿತದಲ್ಲಿ ಕಾಂಗ್ರೆವ್ಸ್ ಮಾಡಿದ್ದಾರೂ ಏನೆ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿಗೆ ದೇಶದ ಇತಿಹಾಸ ಗೊತ್ತಿಲ್ಲ. ಅವರಿಗೆ ವಂದೇ ಮಾತರಂ ಬಗ್ಗೆ ಗೌರವವಿಲ್ಲ. ಅವರಿಗೆ ಅವರದ್ದೇ ಪಕ್ಷದ ನಾಯಕರ ಬಗ್ಗೆಯೂ ಗೊತ್ತಿಲ್ಲ. ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಅವರು ಎಲ್ಲಾ ಹಳ್ಳಿಗಳಿಗೆ, ಎಲ್ಲಾ ಮನೆಗಳಿಗೆ ವಿದ್ಯುತ್ ಕೊಡುತ್ತೇವೆಂದು ಹೇಳಿದ್ದರು. ಆದರೆ, ಏಕೆ ಮಾಡಲಿಲ್ಲ? ಏಕೆ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡಿದರು?…
2014ರಲ್ಲಿ ಕರ್ನಾಟಕದ 39 ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ನಮ್ಮ ಯೋಜನೆಗಳಿಂದ ವಿದ್ಯುತ್ ತಲುಪಿದೆ. ಆದರೆ, ಕಾಂಗ್ರೆಸ್ ಉತ್ತರ ಕೊಡಬೇಕು. 2014ರ ಮುಂಚೆ 4 ವರ್ಷಗಳಲ್ಲಿ 2 ಹಳ್ಳಿಗಳಿಗೆ ಮಾತ್ರ ವಿದ್ಯುತ್ ತಲುಪಿತ್ತು. ಆದರೆ, ನೀವು ನಮ್ಮನ್ನು ಪ್ರಶ್ನೆ ಮಾಡುತ್ತೀರಿ ಎಂದರು.

ರಾಹುಲ್ ಗಾಂಧಿಯವರು ಇತ್ತೀಚೆಗೆ ನನಗೆ ಸವಾಲೊಂದನ್ನು ಹಾಕಿದ್ದರು. ನಾನು ಸಂಸತ್ ನಲ್ಲಿ 15 ನಿಮಿಷ ಮಾತನಾಡಿದರೆ, ನರೇಂದ್ರ ಮೋದಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು. ಇದು ನನಗೆ ನಗು ತರಿಸುವ ಸಂಗತಿ. ರಾಹುಲ್ ಗಾಂಧಿ 15 ನಿಮಿಷ ಮಾತನಾಡುವುದೇ ದೊಡ್ಡ ವಿಷಯ. ಹೀಗಿರುವಾಗ 15 ನಿಮಿಷ ನಾನು ಕುಳಿತುಕೊಳ್ಳುವುದು ಹೇಗೆ. ಇನ್ನು ಕಾಂಗ್ರೆಸ್ ನವರು ನಾಮ್ ದಾರ್ ರು ನಾವು ಕಾಮ್ ದಾರ್ ರು ಹೀಗಾಗಿ ಹೆಸರುಮಾಡಿದ ನುಮ್ಮ ಮುಂದೆ ಕೆಲಸಮಾಡುವ ನಾವು ಕುಳಿತುಕೊಲ್ಳುವುದು ಹೇಗೆ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದ ಪ್ರಧಾನಿ ಮೋದಿ, ಯಾವ ಪೇಪರ್ ಗಳೂ ಇಲ್ಲದೆಯೇ ಕರ್ನಾಟಕದಲ್ಲಿ ನೀವು ಮಾಡಿರುವ ಸಾಧನೆಗಳ ಬಗ್ಗೆ ಹಿಂದಿ, ಇಂಗ್ಲೀಷ್ ಅಥವಾ ನಿಮ್ಮ ತಾಯಿ ಭಾಷೆ, ಯಾವುದರೂ ಒಂದು ಭಾಷೆಯಲ್ಲಿಯಾದರೂ 15 ನಿಮಿಷಗಳ ಕಾಲ ನಿಂತು ಮಾತನಾಡಿ ಎಂದು ಹೇಳಿದ್ದಾರೆ.

ಇನ್ನು ಕರ್ನಾಟಕ ರಾಜ್ಯದಲ್ಲಿ 2+1 ರಾಜಕೀಯ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಸೋಲಿನ ಭಯದಿಂದ ಎರಡೂ ಕಡೆ ಚುನಾವಣೆಗೆ ನಿಂತಿದ್ದಾರೆ. ಕಳೆದ ಬಾರಿ ಗೆದ್ದಿದ್ದ ಕ್ಷೇತ್ರದಿಂದ ಅವರ ಮಗನನ್ನು ಬಲಿ ಕೊಡಲು ತಯಾರಿ ನಡೆಸಿದ್ದಾರೆ. ಮುಖ್ಯಮಂತ್ರಿಗಳಿಗೆ 2+1 ಸೂತ್ರ ನಡೆಯುತ್ತಿದ್ದರೆ, ಮಂತ್ರಿಗಳಿಗೆ 1+1 ಸೂತ್ರ ನಡೆಯುತ್ತಿದೆ ಎಂದ ಮೋದಿಯವರು ಕುಟುಂಬ ರಾಜಕೀಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೋಟು ನಿಷೇಧ ನಿರ್ಧಾರ ನಂತರ ಸಿಕ್ಕಿ ಹಾಕಿಕೊಂಡ ಹಣ ಹೆಸರಾಂತ ವ್ಯಕ್ತಿಗಳದ್ದೇ ಆಗಿತ್ತೇ ವಿನಃ ಕಾರ್ಮಿಕರದ್ದಲ್ಲ. ನಾನು ಗುಜರಾತ್ ರಾಜ್ಯದಲ್ಲಿದ್ದಾಗ ಕರ್ನಾಟಕದ ಬಗ್ಗೆ ಕೇಳಿದಾಗ ಹೆಮ್ಮೆಯಾಗುತ್ತಿತ್ತು. ಆದರೆ, ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವುದು ನೋಡಿದರೆ ಬೇಸರವಾಗುತ್ತದೆ, ಸಿಟ್ಟು ಬರುತ್ತದೆ. ಇಲ್ಲಿ ಮಹಿಳೆಯರು, ಮಕ್ಕಳು ಸುರಕ್ಷಿತರಲ್ಲ. ಇಲ್ಲಿ ಲೋಕಾಯುಕ್ತ ಕೂಡ ಸುರಕ್ಷಿತವಾಗಿಲ್ಲ ಎಂಬುದು ಸಾಬೀತಾಗಿದೆ ಎಂದು ಗುಡುಗಿದರು. ಮೇ.12 ರಂದು ನಿಮ್ಮ ಆಯ್ಕೆ, ನಿಮ್ಮ ನಿರ್ಧಾರ ಭ್ರಷ್ಟಾಚಾರಿಗಳಿಗೆ ಶಿಕ್ಷೆ ಕೊಡುವ ನನ್ನ ನಿರ್ಧಾರಕ್ಕೆ ಶಕ್ತಿ ನೀಡಲಿದೆ ಎಂದು ಹೇಳಿದರು.

karnataka assembly election,PM Nrendra Modi,Chamarajanagar

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ