ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರನ್ನು ಕಾಂಗ್ರೆಸ್ ಗಾರ್ಬೇಜ್ ಸಿಟಿಯನ್ನಾಗಿ ಮಾಡಿದೆ: ಬಿಜೆಪಿಗೆ ಅಧಿಕಾರ ನೀಡಿ ಸಿಲಿಕಾನ್ ಸಿಟಿಯ ಹಳೆ ವೈಭವ ಮರಳಿ ತರುತ್ತೇವೆ: ಪ್ರಧಾನಿ ಮೋದಿ

ಬೆಂಗಳೂರು:ಮೇ-3: ರಾಜ್ಯದ ಯುವ ಜನತೆ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಕಳೆದ 5 ವರ್ಷಗಳಲ್ಲಿ ಆ ಹೆಸರನ್ನು ತೆಗೆದು ತಾಪದ ಕಣಿವೆಯನ್ನಾಗಿ ಮಾಡಿದೆ. ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿಯನ್ನಾಗಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಇದೊಂದು ಅಭೂತಪೂರ್ವ ಕಾರ್ಯಕ್ರಮ. ರಾಜ್ಯದ ನಾಲ್ಕು ದಿಕ್ಕಿನಲ್ಲಿಯೂ ಸಹ ಇಂತಹದೇ ಸ್ವಾಗತ ಸಿಗುತ್ತಿದೆ. ಇಲ್ಲಿನಮೈದಾನ ತುಂಬಾ ಚಿಕ್ಕದಾಗಿ ಕಾಣುತ್ತಿದ್ದು, ಸುತ್ತಲಿನ ಹೊಲಗಳಲ್ಲಿಯೂ ಕಾರ್ಯಕ್ರಮ ಮಾಡುವಂತಾಗಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಸಿಲಿಕಾನ್ ಸಿಟಿಯಾಗಿದ್ದ ಬೆಂಗಳೂರನ್ನ ಕಾಂಗ್ರೆಸ್ ಸರ್ಕಾರ ತಾಪದ ಕಣಿವೆನ್ನಾಗುವಂತೆ ಮಾಡಿದೆ, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ನಗರವನ್ನು, ಗಾರ್ಬೇಜ್ ಸಿಟಿಯನ್ನಾಗಿ ಮಾಡಿದೆ; ಇಡೀ ವಿಶ್ವದಲ್ಲೇ ಕಂಪ್ಯೂಟರ್ ಕೆಪಿಟಲ್ ಆಗಿದ್ದ ಬೆಂಗಳೂರನ್ನು ಅಪರಾಧದ ನಗರವನ್ನಾಗಿ ಮಾಡಿದೆ; ಟ್ರಾಫಿಕ್ ಜಾಮ್ ನಿಂದ ನಗರವನ್ನು ಗೊಂದಲದ ಗೂಡನ್ನಾಗಿ ಮಾಡಿದೆ; ಇಲ್ಲಿನ ರಸ್ತೆಗುಂಡಿಗಳಲ್ಲಿ ಜನರು ಬಿದ್ದು ಸಾವನ್ನಪ್ಪಿದ ಘಟನೆಗಳು ನಡೆಯುತ್ತಿದೆ ಆದಾಗ್ಯೂ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ಜನಪರ ಕಾರ್ಯಗಳನ್ನಾಗಲಿ, ಅಭಿವೃದ್ಧಿ ಕಾರ್ಯಗಳನ್ನಾಗಲಿ ಮಾಡದೇ, ಭ್ರಷ್ಟಾಚಾರದಲ್ಲಿ ಸ್ಪರ್ಧೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬ ಮಂತ್ರಿಗಿಂತ ಇನ್ನೊಬ್ಬ ಭ್ರಷ್ಟರು. ಕರ್ನಾಟಕದ ಕಾಂಗ್ರೆಸ್ ಮಂತ್ರಿಗಳು ಒಬ್ಬರಿಗಿಂತ ಒಬ್ಬರು ರಾಜ್ಯದಲ್ಲಿ ಆಟ ಆಡಿದ್ದಾರೆ. ಇದನ್ನೆಲ್ಲಾ ಕರ್ನಾಟಕ ಜನತೆ ಅರ್ಥ ಮಾಡಿಕೊಂಡಿದೆ. ಈ ಬ್ರಿಡ್ಜ್ ಕೆಳಗೆ ಹಣದ ಹೊಳೆ ಹರಿಯುದಿತ್ತು. ಆದರೆ ಬೆಂಗಳೂರಿನ ಜನ ಅವಕಾಶ ನೀಡಲಿಲ್ಲ. ಹಾಗಾಗಿ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ

ದೇಶದಾದ್ಯಂತ ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯಗಳ ಅಭಿವೃದ್ದಿಗಾಗಿ 836 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ 12 ಕೋಟಿ ಯನ್ನು ಮಾತ್ರ ಖರ್ಚು ಮಾಡಿದ್ದು, ಉಳಿದ ಹಣವನ್ನು ಖರ್ಚು ಮಾಡೇ ಇಲ್ಲ , ಮಂತ್ರಿಗಳು ಹಾಗೂ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇಲಾಖೆ, ಇಲಾಖೆಗಳ ಮಧ್ಯೆಯ ಸ್ಪರ್ಧೆ ಏರ್ಪಟ್ಟಿದೆ ಎಂದು ಟೀಕಿಸಿದರು. ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಿಜೆಪಿ ಹೆಣ್ಣುಮಕ್ಕಳ ರಕ್ಷಣೆಗೆ ಸಂಪೂರ್ಣವಾಗಿ ಪಣ ತೊಟ್ಟಿದೆ. ಹಾಗಾಗಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ತಂದಿದ್ದೇವೆ ಎಂದರು.

ಕಾಂಗ್ರೆಸ್ ನ ಶಾಸಕನೊಬ್ಬನ ಮಗ ಗುಂಡಾಗಿರಿ ಮಾಡಿದ್ದರೂ, ಅವನ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ಬಿಬಿಎಂಪಿ ಕಛೇರಿಯಲ್ಲಿ ಬೆಂಕಿ ಹಾಕುವ ಪ್ರಯತ್ನ ವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಅಂದರೆ ಇಲ್ಲಿ ಯಾರಿಗೆ ರಕ್ಷಣೆ ಇದೆ.. ನಾಡಪ್ರಭು ಕಟ್ಟಿದ ಈ ನಗರ ಕೆರೆಗಳಿಂದ ಕೂಡಿತ್ತು. ಅದರಿಂದು ಇಲ್ಲಿ ಕೆರೆಗಳಿಗೆ ಬೆಂಕಿ ಬೀಳುತ್ತಿದೆ. ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಬಿಜೆಪಿಗೆ ಅಧಿಕಾರ ಕೊಡಿ. ಮತ್ತೆ ಈ ಕೆರೆಗಳನ್ನು ವಾಪಸ್ ಕೊಡುತ್ತೇವೆ. ಬೆಂಗಳೂರು ನಗರವನ್ನು ಸ್ವಚ್ಛ ನಗರ ಮಾಡಿ ತೋರಿಸುತ್ತೇವೆ ಎಂದರು.

ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲ್ಲುವುದಿಲ್ಲ. ಕುಂಟುತ್ತಾ ಕುಂಟುತ್ತಾ 3 ನೇ ಸ್ಥಾನಕ್ಕೆ ಒದ್ದಾಡುತ್ತೆ. ಜೆಡಿಎಸ್ ಗೆ ಗೊತ್ತಿದೆ ಜೆಡಿಎಸ್ ಗೆಲ್ಲಲ್ಲ ಎಂದು. ಹಾಗಾಗಿ ದೇಶದ ಮೂಲೆ ಮೂಲೆ ಯಿಂದ ಮತಾಂಧರನ್ನು ತಂದು ಪ್ರಚಾರಕ್ಕೆ ಮುಂದಾಗಿದೆ ಎಂದರು.

ಮುಂಬರುವ ಚುನಾವಣೆ ನಿಮಗೆ ಒಂದು ಸದಾವಕಾಶ. ದಯಮಾಡಿ ಮತದಾನ ಮಾಡಿ. ಕಾಂಗ್ರೆಸ್ ಪಕ್ಷವನ್ನು ಕಿತ್ತು ಬಿಸಾಕಿ ಎಂದು ಮನವಿ ಮಾಡಿದರು.

Karnataka assembly election,PM Modi,Bangalore

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ