ಅಮಿತ್ ಶಾ ಕುಮಾರ ಸ್ವಾಮಿ ಭೇಟಿಯಾಗಿದ್ದಾರೆ ಎಂಬ ಸಿಎಂ ಹೇಳಿಕೆಗೆ ಹೆಚ್.ಡಿ.ಕೆ‌.ತಿರುಗೇಟು.

ಮೈಸೂರು:ಏ-28: ನಾನೂ ಅಮಿಶ್ ಶಾ ಭೇಟಿ‌ಮಾಡಿದ್ದೇವೆ ಎಂದು ಸಿಎಂಗೆ ಕನಸು ಬಿದ್ದಿದ್ದೀಯಾ? ಸಿಎಂ ಕನಸಿನಲ್ಲಿ ಈ ಭೇಟಿ‌ನಡೆದಿರಬಹುದು.
ಜನರನ್ನು ದಿಕ್ಕು ತಪ್ಪಿಸಲು ಸಿಎಂ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಅಮಿತ್ ಶಾ ಭೇಟಿ‌ಮಾಡಿದ್ದಕ್ಕೆ ಸಿಎಂ ಬಳಿ ಸಾಕ್ಷಿ ಇದ್ದರೆ ತೋರಿಸಲಿ. ಅಮಿತ್ ಶಾ ಭೇಟಿ ಮಾಡಿ ನನಗೆ ಏನೂ‌ ಆಗ ಬೇಕಿಲ್ಲ. ಷಾ ಅವರನ್ನು ಭೇಟಿ ಮಾಡಲು ಅವರೇನು ನಮ್ಮ ಪಕ್ಷದವರೇ? ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಘನತೆ, ಗೌರವಕ್ಕೆ ತಕ್ಕಂತೆ ಮಾತನಾಡಲಿ. ಬಿಜೆಪಿ ಜತೆ ನಂಟು ಹೊಂದಿರುವುದು ನಾನಲ್ಲ ಸಿದ್ದರಾಮಯ್ಯ. ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ದು ಸಿಎಂ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದ ವಿಜಯೇಂದ್ರ ವರುಣ ಕ್ಷೇತ್ರದಲ್ಲಿ ಮನೆಯನ್ನೂ ಮಾಡಿಕೊಂಡಿದ್ದರು. ಇಷ್ಟೆಲ್ಲಾ ಮಾಡಿದ ಅವರಿಗೆ ಟಿಕೆಟ್ ತಪ್ಪಲು ಹೇಗೆ ಸಾಧ್ಯ? ಸಿದ್ದರಾಮಯ್ಯ ಬಿಜೆಪಿಯಲ್ಲಿ ಯಾರ ಜತೆ ಸಂಪರ್ಕ ಹೊಂದಿದ್ದಾರೆಂಬುದು ನನಗೆ ಗೊತ್ತಿದೆ. ಬಿಜೆಪಿಯೊಂದಿಗೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆಯೇ ಹೊರತು ಜೆಡಿಎಸ್ ಅಲ್ಲ. ಬಿಜೆಪಿ ಮತ್ತು ಕಾಂಗ್ರೆಸ್​ ಲೂಟಿಕೋರರ ಸರ್ಕಾರ ಎಂದು ಗುಡುಗಿದರು.

ಗುಪ್ತಚರ ವರದಿಯಲ್ಲಿ ಜೆಡಿಎಸ್ ಮುಂದಿದೆ ಎಂಬ ಮಾಹಿತಿ ಇದೆ. ಇದರಿಂದ ಸಿದ್ದರಾಮಯ್ಯ ಕಂಗಾಲಾಗಿದ್ದಾರೆ. ಹೀಗಾಗಿ‌ ಪದೇ ಪದೇ ಸಿದ್ದರಾಮಯ್ಯ ಜೆಡಿಎಸ್ ನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆಗೆ ಕುರಿತು ಪ್ರತಿಕ್ರಿಯೆ ನೀಡಿದ ಹೆಚ್‌ಡಿಕೆ ಇದು ಟೋಟಲಿ ಬೋಗಸ್ ಪ್ರಣಾಳಿಕೆ. ಇಷ್ಟು ದಿನ ಎಲ್ಲದರಲ್ಲೂ ಲೂಟಿ‌ ಮಾಡಿ ಸಾಕಾಗಿದೆ. ಈಗ ಮತ್ತೆ ಹೊಸ ಲೂಟಿಗೆ ಪ್ಲಾನ್ ಮಾಡಿದ್ದಾರೆ‌. ಅದಕ್ಕೆ ಬೇಕಾದ ಭಾಗ್ಯಗಳನ್ನು ಸೃಷ್ಟಿ ಮಾಡಿದ್ದಾರೆ. ಇಲ್ಲಿ ಲೂಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಗೆ ಕೊಡ್ತಾರೆ. ಬಿಜೆಪಿಯನ್ನು ಲೂಟಿ ಎನ್ನುವ ರಾಹುಲ್‌ಗಾಂಧಿ ತಮ್ಮವರ ಲೂಟಿ ಬಗ್ಗೆ ಅರ್ಥ ಮಾಡಕೊಳ್ಳಲಿ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಈ ವಿಚಾರದಲ್ಲಿ ಸಮಾನರು ಎಂದು ವಾಗ್ದಾಳಿ ನದೆಸಿದರು.

Karnataka Assembly Election,Mysore,H D Kumaraswamy,Amit Shah

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ