ಮೇಕೆದಾಟು ಡಿಪಿಆರ್ ಸಿದ್ಧಪಡಿಸಲು ಕರ್ನಾಟಕಕ್ಕೆ ಅನುಮತಿ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್

ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕೇಂದ್ರ ಜಲ ಆಯೋಗವು ಕರ್ನಾಟಕ ಸರಕಾರಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಎಂದು ಕೇಂದ್ರ ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಸಂಸದರಾದ ಡಿ.ಕೆ. ಸುರೇಶ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ಮೇಘವಾಲ್, ‘ಕುಡಿಯುವ ಹಾಗೂ ವಿದ್ಯುತ್ ಉತ್ಪಾದನೆ ಉದ್ದೇಶದ ಮೇಕೆದಾಟು ಅಣೆಕಟ್ಟೆ ಯೋಜನೆ ಸಂಬಂಧ ಕರ್ನಾಟಕ ಸರಕಾರವು ಸಾಧ್ಯತಾ ವರದಿಯನ್ನು (ಪೀಸಿಬಿಲಿಟಿ ರಿಪೋರ್ಟ್) ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿ ಡಿಪಿಆರ್ ಸಿದ್ಧಪಡಿಸಲು ಅವಕಾಶ ನೀಡುವಂತೆಯೂ ಮನವಿ ಮಾಡಿಕೊಂಡಿತ್ತು. ಕೇಂದ್ರ ಜಲ ಆಯೋಗದ ಪರಿಶೀಲನಾ ಸಮಿತಿಯು ಕಳೆದ ಅಕ್ಟೋಬರ್ 24 ರಂದು ಕೆಲವು ಷರತ್ತುಗಳೊಂದಿಗೆ ಡಿಪಿಆರ್ ಸಿದ್ಧಪಡಿಸಲು ಕರ್ನಾಟಕಕ್ಕೆ ಒಪ್ಪಿಗೆ ನೀಡಿದೆ’ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವು ಡಿಪಿಆರ್ ಸಿದ್ಧಪಡಿಸುವಾಗ ಕಾವೇರಿ ಕಣಿವೆಯ ಇತರೆ ರಾಜ್ಯಗಳ ಅಭಿಪ್ರಾಯವನ್ನೂ ಪರಿಗಣಿಸಬೇಕು. ಇದರಿಂದ ಅಂತಾರಾಜ್ಯ ಜಲಸೌಹಾರ್ಧ ಸಾಧಿಸಬಹುದು. ಸಂಭವನೀಯ ಬಿಕ್ಕಟ್ಟು ಬಗೆಹರಿಸಬಹುದು ಎಂದೂ ಅವರು ಹೇಳಿದ್ದಾರೆ.

ಇನ್ನು ಕಾವೇರಿ ನೀರು ನಿರ್ವಹಣಾ ಮಂಡಳಿಯು ಒಪ್ಪಿರುವ ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿದ ಕಾವೇರಿ ಜಲವಿವಾದ ನ್ಯಾಯಾಧಿಕರಣ ನೀಡಿದ ತೀರ್ಪು ಅನುಷ್ಠಾನಕ್ಕೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯು ಕರ್ನಾಟಕದ ಡಿಪಿಆರ್ ಅನ್ನು ಪರಿಗಣಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕವು ಸಾಧ್ಯತಾ ವರದಿಯಲ್ಲಿ ಮನವಿ ಮಾಡಿದೆ ಎಂದು ಅವರು ಉತ್ತರದಲ್ಲಿ ವಿವರಿಸಿದ್ದಾರೆ.

lokasabhe,Mekedatu project,arjun ram meghwal

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ