ಆಯುಷ್ಮಾನ್‌ ಭಾರತ’ ಯೋಜನೆಗೆ ಪ್ರಧಾನಿ ಚಾಲನೆ: ಆರೋಗ್ಯವಂತ, ಸಶಕ್ತ ನವ ಭಾರತ ನಿರ್ಮಾಣ ಇದರ ಉದ್ದೇಶ ಎಂದ ಮೋದಿ

ನವದೆಹಲಿ:ಏ-14: ‘ಆಯುಷ್ಮಾನ್‌ ಭಾರತ’ ಯೋಜನೆಯಡಿ ದೇಶದ ಮೊದಲ ಆರೋಗ್ಯ ಮತ್ತು ಕ್ಷೇಮಪಾಲನೆ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ಛತ್ತೀಸ್‌ಗಢದಲ್ಲಿ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ, ‘ಆಯುಷ್ಮಾನ್ ಭಾರತ ಯೋಜನೆ ಕೇವಲ ಒಂದು ಸೇವೆಯಲ್ಲ; ಬದಲಿಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಒಂದು ಆರೋಗ್ಯವಂತ, ಸಮರ್ಥ ಹಾಗೂ ಸಶಕ್ತ ನವ ಭಾರತವನ್ನು ನಿರ್ಮಿಸುವುದು ಇದರ ಉದ್ದೇಶ ಎಂದು ಹೇಳಿದರು.

ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯಾಗಿರುವ ಆಯುಷ್ಮಾನ್‌ ಭಾರತ್‌ ಎರಡು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದು- ಸಮುದಾಯಕ್ಕೆ ಹತ್ತಿರವಾಗಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಆರೋಗ್ಯ ಮತ್ತು ಕ್ಷೇಮಪಾಲನೆ ಕೇಂದ್ರಗಳ ಜಾಲ ನಿರ್ಮಿಸುವುದು. ಎರಡನೆಯದು- ದೇಶದ ಜನಸಂಖ್ಯೆಯ ಶೇ 40ರಷ್ಟು ಮಂದಿ ಸೌಲಭ್ಯ ವಂಚಿತರಿಗೆ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಗಳಿಗಾಗಿ ಆರೋಗ್ಯ ವಿಮಾ ಸೌಲಭ್ಯ ಒದಗಿಸುವುದು ಎಂದರು.

ದೇಶದ 10 ಕೋಟಿ ಬಡವರು ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ವರ್ಷ ಆಸ್ಪತ್ರೆ ವೆಚ್ಚವೂ ಸೇರಿದಂತೆ ಎರಡನೇ ಮತ್ತು ಮೂರನೇ ಹಂತದ ಚಿಕಿತ್ಸಾ ವೆಚ್ಚವಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳ ವಿಮಾ ಸೌಲಭ್ಯ ಒದಗಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಒಟ್ಟು 10,500 ಕೋಟಿ ರೂ.ಗಳ ಬಜೆಟ್‌ ಅನುದಾನದೊಂದಿಗೆ ಮಾರ್ಚ್‌ 21ರಂದು ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿತ್ತು.

ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಜನ್ಮದಿನಾಚರಣೆ ಸಂದರ್ಭದಲ್ಲೇ ಪ್ರಧಾನಿ ಮೋದಿ ಛತ್ತೀಸ್‌ಗಢಕ್ಕೆ ಭೇಟಿ ನೀಡಿದ್ದಾರೆ. ರಾಜ್ಯದ ಬುಡಕಟ್ಟು ಜಿಲ್ಲೆ ಬಿಜಾಪುರಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ ಅವರಾಗಿದ್ದಾರೆ. ಇದೇ ಸಂದರ್ಭದಲ್ಲಿ ಗುಡಂ ಮತ್ತು ಭಾನುಪ್ರತಾಪುರ್ ನಡುವೆ ಹೊಸ ರೈಲು ಮಾರ್ಗ ಹಾಗೂ ನೂತನ ರೈಲು ಸೇವೆಯನ್ನು ಪ್ರಧಾನಿ ಉದ್ಘಾಟಿಸಿದರು.

PM Modi,Ayushman Bharat scheme, inaugurates, first health centre

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ