ಬಸವನಗೌಡ ಪಾಟೀಲ್ ಯತ್ನಾಳ್, ಮಲ್ಲಿಕಾರ್ಜುನ ಖೂಬಾ, ಬಸವರಾಜ ಪಾಟೀಲ್ ಅನ್ವರಿ, ನಾಗಪ್ಪ ಸಾಲೋಣಿ ಬಿಜೆಪಿ ಸೇರ್ಪಡೆ

ಬೆಂಗಳೂರು:ಏ-4: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ ಮತ್ತು ಮಾಜಿ ಸಚಿವ ನಾಗಪ್ಪ ಸಾಲೋಣಿ ಇಂದು ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಎಲ್ಲಾ ನಾಯಕರಿಗೂ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಇದೇ ವೇಳೆ ಈ ನಾಯಕರ ಹಲವಾರು ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಪಕ್ಷಕ್ಕೆ ಇಂದು ಒಳ್ಳೆಯ ದಿನ. ಬಿಜೆಪಿಗೆ ಹಲವರು ಸೇರ್ಪಡೆಯಾದವರನ್ನು ತಾವು ಸ್ವಾಗತಿಸುತ್ತೇವೆ. ಈ ನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದ್ದು, ಆಯಾ ಭಾಗದಲ್ಲಿ ಪಕ್ಷಕ್ಕೆ ಬಲ ಹೆಚ್ಚಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇವರ ಬಲದಿಂದ ನಾವು ಆ ಭಾಗದಲ್ಲಿ ಪಕ್ಷದ ಗೆಲುವಿನ ವರ್ಚಸ್ಸನ್ನು ಪಡೆಯುತ್ತೇವೆ. ಟಾರ್ಗೆಟ್ 150 ಗುರಿ ತಲುಪಲು ಇವರ ಸೇರ್ಪಡೆ ಕೂಡ ಸಹಕಾರಿಯಾಗಿದೆ ಎಂದರು.

ಏ.8ರಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಅಂದು ಅವರು ತಮ್ಮೊಂದಿಗೆ ಇನ್ನೂ ನಾಲ್ವರು ಶಾಸಕರನ್ನು ಕರೆತಂದು ಬಿಜೆಪಿಗೆ ಸೇರ್ಪಡೆ ಮಾಡುವುದಾಗಿ ತಿಳಿಸಿದ್ದಾರೆ. ಇದರ ಜತೆ ಜೆಡಿಎಸ್ ಕೆಲ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ವಿಜಯಪುರದ ಬಸವಕಲ್ಯಾಣದಲ್ಲಿ ಅಂದು ಬೃಹತ್ ಸಮಾವೇಶ ನಡೆಯಲಿದ್ದು, ಅಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಎಸ್‌ವೈ ತಿಳಿಸಿದರು.
assembly election,yatnal,khooba,joins-bjp

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ