ಕಾಂಗ್ರೆಸ್‍ನಲ್ಲಿ 3 ಕಾರ್ಯಾಧ್ಯಕ್ಷ ಸ್ಥಾನ ಸಿದ್ದರಾಮಯ್ಯ ಹೊಸ ಗೇಮ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಗಾದಿಗೆ ರೇಸ್ ಜೋರಾಗಿ ನಡೆಯುತ್ತಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ದಾಳವೊಂದನ್ನು ಪ್ರಯೋಗಿಸಿದ್ದಾರೆ.

ಸಿದ್ದರಾಮಯ್ಯ ಬಣ, ಮೂಲ ಕಾಂಗ್ರೆಸ್ ಬಣ, ಜೊತೆ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದೆ. ನಿನ್ನೆ ಕೂಡಾ ಕೆಪಿಸಿಸಿ ಸೇರಿದಂತೆ ಹಲವು ಹುದ್ದೆಗಳಿಗೆ ಸಾರಥಿ ನೇಮಕ ಸಂಬಂಧ ಪರಮೇಶ್ವರ್ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ಬಣ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಲಿಂಗಾಯತರಿಗೆ ಕೊಡಬೇಕು ಅಂತ ದಾಳ ಉದುರಿಸಿದೆ. ಅದರಲ್ಲೂ ತಮ್ಮ ಶಿಷ್ಯ, ಮಾಜಿ ಸಚಿವ ಎಂಬಿ ಪಾಟೀಲ್ ಪರ ಸಿದ್ದರಾಮಯ್ಯ ಪ್ರಬಲವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಮೂಲ ಕಾಂಗ್ರೆಸ್ ನಾಯಕರು ಮೂಲ ಕಾಂಗ್ರೆಸ್ ನಲ್ಲಿ ಯಾರಿಗಾದ್ರು ಅಧ್ಯಕ್ಷ ಸ್ಥಾನ ಕೊಡಿ ಅಂತ ಹೈಕಮಾಂಡ್ ಗೆ ಬೇಡಿಕೆ ಇಟ್ಟಿದ್ದೆ. ಮತ್ತೊಂದು ಕಡೆ ಕನಕಪುರ ಬಂಡೆ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಅಧ್ಯಕ್ಷ ಸ್ಥಾನ ಪಡೆಯೋಕೆ ಕಸರತ್ತು ಮಾಡುತ್ತಿದ್ದಾರೆ. ಈಗ ಹೊಸ ವಿಷಯ ಅಂದ್ರೆ ಅಧ್ಯಕ್ಷ ಸ್ಥಾನದ ಲಾಬಿ ಮಾಡ್ತಿರೋ ಸಿದ್ದರಾಮಯ್ಯ ಬಣ 3 ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿಗೆ ಹೊಸ ಗೇಮ್ ಶುರು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಅಧ್ಯಕ್ಷ ಸ್ಥಾನ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಹೋದರೆ ತಮ್ಮ ಅಸ್ಥಿತ್ವಕ್ಕೆ ಧಕ್ಕೆ ಅನ್ನೋದು ಅರಿತಿರುವ ಸಿದ್ದರಾಮಯ್ಯ ತಮ್ಮ ಶಿಷ್ಯರ ಮೂಲಕ 3 ಕಾರ್ಯಾಧ್ಯಕ್ಷ ಸ್ಥಾನದ ಪ್ರಸ್ತಾಪ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಮೂರು ಕಂದಾಯ ವಲಯಗಳಿಗೆ ಮೂವರು ಕಾರ್ಯಾಧ್ಯಕ್ಷ ನೇಮಕ ಮಾಡಿದರೆ ಅನುಕೂಲ ಆಗುತ್ತೆ. ಪಕ್ಷ ಸಂಘಟನೆಗೆ ಅನುಕೂಲ ಆಗುತ್ತೆ ಅನ್ನೋ ಮೂಲಕ ಕಾರ್ಯಾಧ್ಯಕ್ಷ ಸ್ಥಾನದ ದಾಳ ಉದುರಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿ ಆದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಮಹತ್ವ ಇರೋದಿಲ್ಲ. ಆಗ ಅನುಕೂಲ ಆಗುತ್ತೆ ಅನ್ನೋದು ಸಿದ್ದರಾಮಯ್ಯ ಪ್ಲಾನ್. ಹೀಗಾಗಿ ಹೈಕಮಾಂಡ್ ಮೇಲೆ ಕಾರ್ಯಾಧ್ಯಕ್ಷ ಸ್ಥಾನದ ಒತ್ತಡ ಹಾಕೋಕು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಸಿದ್ದರಾಮಯ್ಯ ತಂತ್ರ ಫಲಿಸುತ್ತಾ? ಹೈಕಮಾಂಡ್ ಸಿದ್ದರಾಮಯ್ಯ ಮಾತಿಗೆ ಓಕೆ ಅನ್ನುತ್ತಾ ಅನ್ನೋದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ