ಖಾತೆ ಹಂಚಿಕೆ ಮಾಡಿದ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ; ಎನ್​ಸಿಪಿಗೆ ಸಿಂಹ ಪಾಲು

ನವದೆಹಲಿ: ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ತಿಂಗಳ ನಂತರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಖಾತೆ ಹಂಚಿಕೆ ಮಾಡಿದೆ. ಯರ್ಯಾರಿಗೆ ಯಾವ ಯಾವ ಖಾತೆ ನೀಡಲಾಗಿದೆ ಎನ್ನುವ ಬಗ್ಗೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಿದರು.

ಎನ್​ಸಿಪಿ ನಾಯಕ ಹಾಗೂ ಉಪಮುಖ್ಯಮಂತ್ರಿ ಅಜಿತ್​ ಪವಾರ್​ಗೆ ಹಣಕಾಸು ಖಾತೆ ನೀಡಲಾಗಿದೆ. ಆದಿತ್ಯ ಠಾಕ್ರೆಗೆ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಎನ್​ಸಿಪಿ ನಾಯಕ ಅನಿಲ್​ ದೇಶಮುಖ್​ಗೆ ಗೃಹ ಖಾತೆ, ಶಿವಸೇನೆಯ ಎಕಾಂತ್​ ಶಿಂಧೆಗೆ ನಗರಾಭಿವೃದ್ಧಿ ಖಾತೆ ನಿಡಲಾಗಿದೆ. ಹಿರಿಯ ಕಾಂಗ್ರೆಸ್​ ನಾಯಕ ಬಾಲಾಸಾಹೇಬ್​ ಥೊರಾಟ್​ಗೆ ಕಂದಾಯ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಖಾತೆ ಹಂಚಿಕೆ ಆಗಿರಲಿಲ್ಲ. ಯಾರಿಗೆ ಯಾವ ಖಾತೆ ಹಂಚಿಕೆ ಆಗಲಿದೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಇಂದು ಈ ಬಗ್ಗೆ ಉದ್ಧವ್​ ಅಧಿಕೃತ ಮಾಹಿತಿ ನೀಡಿದ್ದಾರೆ. ಸರ್ಕಾರ ರಚನೆಯಲ್ಲಿ ಎನ್​ಸಿಪಿ ಪ್ರಮುಖ ಪಾತ್ರವಹಿಸಿತ್ತು. ಹೀಗಾಗಿ, ಹಣಕಾಸು ಸೇರಿ ಪ್ರಮುಖ ಖಾತೆಗಳು ಎನ್​ಸಿಪಿ ಪಾಲಾಗಿದೆ. ಸಂಪೂರ್ಣ ಖಾತೆ ಹಂಚಿಕೆ ಇನ್ನಷ್ಟೇ ಆಗಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ