ಭಾರತದ ಪೌರತ್ವ ತೊರೆದ ಬಹುಕೋಟಿ ವಂಚಕ ಮೆಹುಲ್​ ಚೋಕ್ಸಿ

ನವದೆಹಲಿ ಬಹುಕೋಟಿ ವಂಚನೆ ಪ್ರಕರಣದಿಂದ ದೇಶತೊರೆದಿರುವ ವಜ್ರದ ವ್ಯಾಪಾರಿ ಮೆಹುಲ್​ ಚೋಕ್ಸಿ ತಮ್ಮ ಭಾರತದ ನಾಗರೀಕತ್ವವನ್ನು ತೊರೆದಿದ್ದಾರೆ. ತಮಗೆ ಈ ಪೌರತ್ವ ಬೇಡ ಎಂದು ತಮ್ಮ ಪಾಸ್​ಪೋರ್ಟ್​ ಅನ್ನು ಆಂಟಿಗ್ಯೂನಲ್ಲಿ ಮರಳಿಸಿದ್ದಾರೆ. ಈ ನಡೆಯಿಂದಾಗಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕೆಲಸ ಇನ್ನು ಕಷ್ಟವಾಗಲಿದೆ.

ಆಂಟಿಗ್ಯೂನ ಭಾರತದ ಹೈ ಕಮಿಷನ್​ಗೆ ಚೋಕ್ಸಿ ತಮ್ಮ ಬಳಿಯಿಂದ ಪಾಸ್​ ಪೋರ್ಟ್​ ಹಾಗೂ 177 ಡಾಲರ್​ ಮರಳಿಸಿದ್ದಾರೆ.

ಮೆಹುಲ್​ ಚೋಕ್ಸಿ ಆಂಟಿಗ್ಯೂ ಹಾಗೂ ಬಾರ್ಬುಡಾ ಪೌರತ್ವವನ್ನು 2018ರಲ್ಲಿ ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ತಮ್ಮ ಭಾರತ ನಾಗರಿಕತ್ವವನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕಿಗೆ 12 ಸಾವಿರ ಕೋಟಿ ವಂಚಿಸಿರುವ ಪ್ರಕರಣದ ಆರೋಪಿಯಾಗಿರುವ ಉದ್ಯಮಿ ನೀರವ್​ ಮೋದಿಯ ಸಂಬಂಧಿಯಾಗಿರುವ ಮೆಹುಲ್​ ಚೋಕ್ಸಿ ಕೂಡ ಈ ಪ್ರಕರಣದ ಪ್ರಮುಖ ಆರೋಪಿ. ಈ ಹಗರಣದ 2 ಕೇಸುಗಳಲ್ಲಿ ಚೋಕ್ಸಿ ವಿರುದ್ಧ ಚಾರ್ಜ್​ಶೀಟ್​ ದಾಖಲಾಗಿದೆ. ಈ ಪ್ರಕರಣದಲ್ಲಿ ಚೋಕ್ಸಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ 7080 ಕೋಟಿ ರೂ. ವಂಚಿಸಿದ್ದರು. ಬಳಿಕ ದೇಶ ಬಿಟ್ಟು ಪರಾರಿಯಾಗಿದ್ದರು.

ಈಗಾಗಲೇ ಜೂನ್​ನಲ್ಲಿ ಸಿಬಿಐ ಚೋಕ್ಸಿಗೆ ರೆಡ್​ ಕಾರ್ನರ್​ ನೋಟಿಸ್​ ಜಾರಿಗೊಳಿಸುವಂತೆ ಇಂಟರ್​ಪೋಲ್​ ಮೊರೆಹೋಗಿತ್ತು. ಈ ರೀತಿ ರೆಡ್​ ಕಾರ್ನರ್​ ನೋಟಿಸ್​ ಜಾರಿಗೊಳಿಸಿದ ನಂತರ ಆ ವ್ಯಕ್ತಿ ಯಾವುದೇ ದೇಶದಲ್ಲಿದ್ದರೂ ಇಂಟರ್​ನ್ಯಾಷನಲ್​ ಪೊಲೀಸ್​ ಕೋಆಪರೇಷನ್​ ಏಜೆನ್ಸಿ ಆತನನ್ನು ಬಂಧಿಸಲು ಅಧಿಕಾರವಿರುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ