ಅಣ್ಣನ ಸಮಾನ ಆನಂದ್​ ಸಿಂಗ್​ ಮೇಲೆ ಕೈ ಎತ್ತಿಲ್ಲ; ಅವರ ಕುಟುಂಬಕ್ಕೆ ಕ್ಷಮೆಯಾಚಿಸುತ್ತೇನೆ; ಕಂಪ್ಲಿ ಶಾಸಕ ಗಣೇಶ್ ಸ್ಪಷ್ಟನೆ

ಬೆಂಗಳೂರು: ನನ್ನ ಮತ್ತು ಆನಂದ್​ ಸಿಂಗ್​ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಆನಂದ್​ ಸಿಂಗ್​ ನನಗೆ ಅಣ್ಣನ ಸಮಾನ. ರೆಸಾರ್ಟ್​ನಲ್ಲಿ ನಾನು ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು ಎಂದು ಕಂಪ್ಲಿ ಶಾಸಕ ಜೆಎನ್​ ಗಣೇಶ್​ ಇಂದು ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ರಾತ್ರಿ ರೆಸಾರ್ಟ್​ನ ಹೊಸಪೇಟೆ ಶಾಸಕ ಆನಂದ್​ ಸಿಂಗ್​ ಹಾಗೂ ಕಂಪ್ಲಿ ಶಾಸಕರ ಹೊಡೆದಾಟ ನಡೆದಿತ್ತು. ಆನಂದ್​ ಸಿಂಗ್​ ಮೇಲೆ ಗಣೇಶ್​ ಹಲ್ಲೆ ನಡೆಸಿದ್ದರ ಪರಿಣಾಮ ಹೊಸಪೇಟೆ ಶಾಸಕರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದು ಸುಳ್ಳು. ಇಬ್ಬರು ನಾಯಕರು ಮಾಧ್ಯಮದ ಎದುರು ಬಂದು ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ ಎಂದು ಡಿಕೆ  ಶಿವಕುಮಾರ್​ ಹೇಳಿದ್ದರು. ಆದರೆ, ಕೆಲವು ನಾಯಕರು ಗಲಾಟೆ ಆಗಿರುವ ಬಗ್ಗೆ ತಿಳಿಸಿದ್ದರು.

ಈ ಕುರಿತು ಇಂದು ಈಗಲ್ಟನ್​ ರೆಸಾರ್ಟ್​ನಲ್ಲಿ ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ ಗಣೇಶ್, ನಾನು ಆನಂದ್​ ಸಿಂಗ್​ಗೆ  ಬಾಟಲಿಯಲ್ಲಿ ಹೊಡೆದಿದ್ದೇನೆ ಎಂಬುದು ಸುಳ್ಳು. ಗನ್​ ಮ್ಯಾನ್​ ಮೇಲೆ ಕೂಡ ನಾನು ಹಲ್ಲೆ ನಡೆಸಿಲ್ಲ. ಭೀಮಾ ನಾಯ್ಕ್​ ಹಾಗೂ ಆನಂದ್​ ಸಿಂಗ್​ ನಡುವೆ ಹೊಂದಾಣಿಕೆ ಮಾಡುವಾಗ ವಾಗ್ವಾದ ನಡೆಯಿತು. ಆದರೆ ಹೊಡೆದಾಟ ನಡೆದಿಲ್ಲ ಎಂದರು.

ಆನಂದ್​ ಸಿಂಗ್​ ಅವರಿಗೆ ಮೊದಲೇ ಆರೋಗ್ಯ ಸರಿಯಿರಲಿಲ್ಲ. ಅವರು ಬಿದ್ದ ಪರಿಣಾಮ ಹೀಗೆ ಆಗಿದೆ. ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು ನಿಜ. ಆದರೆ ಹಲ್ಲೆ ನಡೆದಿಲ್ಲ. ನಾನು ಇವರ ಮಧ್ಯೆ ಮಧ್ಯಸ್ಥಿಕೆ ನಡೆಸಿದ್ದೆ ಹೊರತು ಹಲ್ಲೆಗೆ ಮುಂದಾಗಿಲ್ಲ.

ಈ ಘಟನೆಯಿಂದ ಆನಂದ್​ ಸಿಂಗ್​ ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ.  ಹೈಕಮಾಂಡ್​ಗೆ ಮುಜುಗರ ಉಂಟು ಮಾಡಲು ಇಷ್ಟಪಡುವುದಿಲ್ಲ. ಹಾಗಾಗಿ ಮಾಧ್ಯಮದ ಮುಂದೆ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದರು.

ಇತ್ತ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್​​ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.  ಘಟನೆ ಕುರಿತು ವಿಚಾರಣೆ ನಡೆಸಲು ಬಿಡದಿ ಪೊಲೀಸರು ಆಸ್ಪತ್ರೆಗೆ ಆಗಮಿಸಲಿದ್ಧಾರೆ.  ಸಂಸದ ಡಿಕೆ ಸುರೇಶ್​ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆನಂದ್​ ಸಿಂಗ್​ ಆರೋಗ್ಯ ವಿಚಾರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ