‘ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ’; ರೆಫರಿ ಬಳಿ ಗೋಗರೆದಿದ್ದ ವಿರಾಟ್ ಕೊಹ್ಲಿ!

ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲೇ ಅತ್ಯಂತ ಕೆಟ್ಟ ರೀತಿಯಲ್ಲಿ ಎದುರಿಸಿದ್ದ ಮುಜುಗರ ಸನ್ನಿವೇಶವನ್ನು ಮತ್ತೆ ನೆನಪು ಮಾಡಿಕೊಂಡಿದ್ದು, ಅಂದು ಕೊಹ್ಲಿ ಮ್ಯಾಚ್ ರೆಫರಿ ಬಳಿ ‘ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ’ ಎಂದು ಕೇಳಿಕೊಂಡಿದ್ದರು.
ಇಷ್ಟಕ್ಕೂ ಭಾರತ ತಂಡದ ಅಕ್ರಮಣಕಾರಿ ನಾಯರ ವಿರಾಟ್ ಕೊಹ್ಲಿ ಈ ರೀತಿ ಮನವಿ ಮಾಡಿಕೊಂಡಿದ್ದು ಏಕೆ, ಯಾರ ಬಳಿ ಅವರು ಮನವಿ ಮಾಡಿದ್ದರು ಗೊತ್ತಾ..?
2012ರ ಸಿಡ್ನಿ ಟೆಸ್ಟ್ ವಿವಾದ ಬಹುಶಃ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆತಿರಬಹುದು. ಆದರೆ ಅಂದಿನ ಸನ್ನಿವೇಶವನ್ನು ಹಾಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮರೆಯಲು ಸಾಧ್ಯವೇ ಇಲ್ಲ. ಕಾರಣ ಅಂದು ಅವರ ಮಾಡಿದ್ದ ಒಂದು ಒಂದು ಎಡವಟ್ಟು ಅವರನ್ನು ನಿಷೇಧದ ಅಂಚಿಗೆ ತಂದು ನಿಲ್ಲಿಸಿತ್ತು. ಇದೀಗ ಆ ಕಹಿ ಘಟನೆ ಕೊಹ್ಲಿ ನೆನಪಿಸಿಕೊಂಡಿದ್ದಾರೆ.
ಹೌದು.. 2012ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಸಿಡ್ನಿಯಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ವೇಳೆ ಕಾಂಗರೂ ಪಡೆ ಬ್ಯಾಟಿಂಗ್ ನಡೆಸುತ್ತಿತ್ತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದಾಗ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸಿಸ್ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿಯನ್ನು ಛೇಡಿಸಿದ್ದರು. ಕೊಹ್ಲಿಯನ್ನು ಅಸಹ್ಯವಾಗಿ ನಿಂದಿಸುತ್ತಿದ್ದರು. ಕೆಲ ಕ್ಷಣಗಳ ಬಳಿಕ ಅಸಮಾಧಾನಗೊಂಡ ವಿರಾಟ್ ಕೊಹ್ಲಿ, ಮೈದಾನದಲ್ಲಿಯೇ ಪ್ರೇಕ್ಷಕರಿಗೆ ತಮ್ಮ ಮಧ್ಯದ ಬೆರಳು ತೋರಿ ಅಸಭ್ಯ ವರ್ತನೆ ತೋರಿದ್ದರು.
ಈ ವೇಳೆ ಅಲ್ಲಿದ್ದ ಕೆಲವರು ಅದನ್ನು ಫೋಟೋ ತೆಗೆದುಕೊಂಡಿದ್ದರು. ಅಲ್ಲದೆ ಬಳಿಕ ಈ ವಿಚಾರ ಸುದ್ದಿ ಪತ್ರಿಕೆಗಳಲ್ಲೂ ಪ್ರಸಾರವಾಗಿತ್ತು. ಇದನ್ನು ಗಮನಿಸಿದ್ದ ಅಂದಿನ ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು, ತಮ್ಮ ಕೊಠಡಿಗೆ ವಿರಾಟ್ ಕೊಹ್ಲಿ ಅವರನ್ನು ಕರೆಸಿಕೊಂಡಿದ್ದರು. ಬಳಿಕ ವಿರಾಟ್ ಕೊಹ್ಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ಮೈದಾನದಲ್ಲಿ ಏನಾಯಿತು ಎಂದು ಕೇಳಿದರು. ಈ ವೇಳೆ ಕೊಹ್ಲಿ ಏನೂ ಆಗಿಲ್ಲ. ಕೇವಲ ಪ್ರೇಕ್ಷಕರು ಕಿರುಚಾಡುತ್ತಿದ್ದರು ಎಂದು ಹೇಳಿದರು. ಕೊಹ್ಲಿ ಉತ್ತರಕ್ಕೆ ತೀವ್ರ ಅಸಮಾಧಾನಗೊಂಡ ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು ತಮ್ಮ ಬಳಿ ಇದ್ದ ಸುದ್ದಿ ಪತ್ರಿಕೆಯನ್ನು ಕೊಹ್ಲಿಯತ್ತ ಎಸೆದರು.
ಪತ್ರಿಕೆಯಲ್ಲಿ ಕೊಹ್ಲಿ ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿಸುತ್ತಿರುವ ಚಿತ್ರ ಪ್ರಕಟವಾಗಿತ್ತು. ಕೂಡಲೇ ನಾನು ನನ್ನ ತಪ್ಪಿನ ಅರಿವಾಗಿ ಅಂದಿನ ಕ್ಷಣಗಳ ಮಾಹಿತಿ ನೀಡಿದೆ. ಅಲ್ಲದೆ ನನ್ನನ್ನು ಕ್ಷಮಿಸಿ, ನನ್ನನ್ನು ನಿಷೇಧಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದೆ. ಅಂದಿನ ಪರಿಸ್ಥಿತಿ ಅರ್ಥ ಮಾಡಿಕೊಂಡ ರಂಜನ್ ಮದುಗಲೆ ಯಾವುದೇ ಕಠಿಣ ನಿರ್ಧಾರ ತಳೆಯಲಿಲ್ಲ. ನನ್ನ ವಯಸ್ಸನ್ನು ಪರಿಗಣಿಸಿದ್ದ ರಂಜನ್ ಅವರು ಮೃದು ಧೋರಣೆ ತಳೆದಿದ್ದರು. ಅಂತೆಯೇ ಕೊಹ್ಲಿ ಇದೇ ವೇಳೆ ತಮ್ಮ ಆಪ್ತ ಸ್ನೇಹಿತ ಮತ್ತು ಕೋಚ್ ರಾಜ್ ಕುಮಾರ್ ಶರ್ಮಾ ಅವರನ್ನು ನೆನೆಯುತ್ತಾ ನನ್ನ ವೃತ್ತಿ ಜೀವನವನ್ನು ಸರಿಯಾದ ರೀತಿಯಲ್ಲಿ ಕೆತ್ತಿದ ಶಿಲ್ಪಿ ಈತ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಬಳಿಕ ನನ್ನ ತಂಗಿ, ನನ್ನ ಅಕ್ಕ, ನನ್ನ ತಾಯಿ ಕುರಿತು ಅಸಭ್ಯವಾಗಿ ಮಾತನಾಡಿದಾಗ ನಾನು ಶಾಂತವಾಗಿರಲು ಹೇಗೆ ಸಾಧ್ಯ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ