ಲಖನೌ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ವರ್ಗಾವಣೆ: ಸುಷ್ಮಾಸ್ವರಾಜ್ ವಿರುದ್ಧ ಆರ್‌ಎಸ್‌ಎಸ್ ನ ರಾಜೀವ್‌ ತುಲಿ ಕಿಡಿ

ನವದೆಹಲಿ:ಜೂ-೨೪: ಹಿಂದೂ–ಮುಸ್ಲಿಂ ದಂಪತಿಗೆ ಅವಮಾನ ಮಾಡಿದ ಆರೋಪಕ್ಕಾಗಿ ಲಖನೌ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿಯನ್ನು ವರ್ಗಾವಣೆ ಮಾಡಿರುವ ಘಟನೆ ಚರ್ಚೆಗೆ ಗ್ರಾಸವಾಗಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಕಾನೂನುಗಿಂತ ದೊಡ್ಡವರಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ರಾಜೀವ್‌ ತುಲಿ ಹೇಳಿದ್ದಾರೆ.

ದೆಹಲಿಯ ಆರ್‌ಎಸ್‌ಎಸ್‌ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿರುವ ರಾಜೀವ್ ಟುಲಿ ಅವರು ವರ್ಗಾವಣೆಗೊಂಡಿರುವ ಲಖನೌ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ಮಿಕಾಸ್‌ ಮಿಶ್ರಾ ಅವರಿಗೆ ನ್ಯಾಯಸಿಗಬೇಕು ಎಂದು ಟ್ವೀಟ್ ಮಾಡಿದ್ದಾರೆ. ವಿದೇಶಾಂಗ ಸಚಿವರು ಘಟನೆ ಕುರಿತಂತೆ ಮಿಕಾಸ್‌ ಮಿಶ್ರಾ ಅವರ ಹೇಳಿಕೆಗೆ ಅವಕಾಶ ನೀಡಬೇಕಿತ್ತು. ವಿದೇಶಾಂಗ ಸಚಿವರು ಕಾನೂನಿಗಿಂತ ದೊಡ್ಡವರಲ್ಲ, ಈ ಘಟನೆ ಕುರಿತಂತೆ ತನಿಖೆ ನಡೆಯಬೇಕು ಎಂದು ರಾಜೀವ್ ತುಲಿ ಟ್ವೀಟ್‌ ಮಾಡಿದ್ದಾರೆ.

ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ಮಿಕಾಸ್‌ ಮಿಶ್ರಾ ಅವರ ವಾದವನ್ನು ಆಲಿಸದೇ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂಬ ದಾಟಿಯಲ್ಲಿ ಹೇಳಿಕೆ ನೀಡಿದ್ದಾರೆ. ನನ್ನ ಈ ಟ್ವೀಟ್‌ ವೈಯಕ್ತಿಕವಾದುದು, ಇದಕ್ಕೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ರಾಜೀವ್ ತುಲಿ ತಿಳಿಸಿದ್ದಾರೆ.

12 ವರ್ಷಗಳ ಹಿಂದೆ ಸಿದ್ದಿಕಿ ಮತ್ತು ತನ್ವಿ ಸೇಥ್‌ ವಿವಾಹವಾಗಿದ್ದಾರೆ. ಬುಧವಾರ ಹೊಸ ಪಾಸ್‌ಪೋರ್ಟ್‌ ಪಡೆಯುವ ಸಂಬಂಧ ಇಲ್ಲಿನ ಕಚೇರಿಗೆ ತೆರಳಿದ್ದಾಗ ಮಿಶ್ರಾ ಅವರು ಅವಮಾನ ಮಾಡಿ ಪಾಸ್‌ಪೋರ್ಟ್‌ ಅರ್ಜಿಯನ್ನು ತಡೆಹಿಡಿದಿದ್ದರು ಎಂದು ದೂರಲಾಗಿತ್ತು.

ದಂಪತಿಗೆ ಪಾಸ್‌ಪೋರ್ಟ್‌ ನೀಡಲಾಗಿದೆ. ವಿದೇಶಾಂಗ ಸಚಿವಾಲಯಕ್ಕೆ ಈ ಘಟನೆ ಕುರಿತು ವರದಿ ಕಳುಹಿಸಲಾಗಿದೆ. ಈ ಅಹಿತಕರ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮತ್ತೆ ಈ ರೀತಿ ಮರುಕಳಿಸದಂತೆ ಎಚ್ಚರವಹಿಸುತ್ತೇವೆ’ ಎಂದು ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಪೀಯೂಷ್‌ ವರ್ಮಾ ತಿಳಿಸಿದ್ದರು.

ಸಕಾಲಕ್ಕೆ ಕ್ರಮಕೈಗೊಂಡಿದ್ದಕ್ಕೆ ತನ್ವಿ ಸೇಥ್‌ ಅವರು ಸುಷ್ಮಾ ಸ್ವರಾಜ್‌ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಗುರುವಾರ ಬೆಳಿಗ್ಗೆ ಪಾಸ್‌ಪೋರ್ಟ್‌ ಕಚೇರಿಗೆ ತೆರಳಿದಾಗ ಪೀಯೂಷ್‌ ವರ್ಮಾ ಮತ್ತು ಇತರ ಅಧಿಕಾರಿಗಳು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬುಧವಾರ ನಡೆದ ಘಟನೆಯ ಬಗ್ಗೆ ಕ್ಷಮೆಯಾಚಿಸಿದರು. ದಾಖಲೆಗಳನ್ನು ಪರಿಶೀಲಿಸಿ ತಕ್ಷಣವೇ ಪಾಸ್‌ಪೋರ್ಟ್‌ ನೀಡಿದರು ಎಂದು ತನ್ವಿ ಸೇಥ್‌ ಟ್ವೀಟ್‌ ಮಾಡಿದ್ದಾರೆ.

ಪತ್ನಿಗೆ ಹೊಸ ಪಾಸ್‌ಪೋರ್ಟ್‌ ಮತ್ತು ನನ್ನ ಪಾಸ್‌ಪೋರ್ಟ್‌ ನವೀಕರಣ ಮಾಡಿಸಿಕೊಳ್ಳಲು ತೆರಳಿದ್ದಾಗ ಈ ಅಹಿತಕರ ಘಟನೆ ನಡೆಯಿತು. ನನ್ನ ಧರ್ಮ ಮತ್ತು ಹೆಸರು ಬದಲಾಯಿಸಿಕೊಂಡರೆ ಮಾತ್ರ ಪಾಸ್‌ಪೋರ್ಟ್ ನೀಡುವುದಾಗಿ ಅಧಿಕಾರಿ ತಿಳಿಸಿದರು ಎಂದು ಸಿದ್ದಿಕಿ ತಿಳಿಸಿದ್ದಾರೆ.

ಸಿದ್ದಿಕಿ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಪಾಸ್‌ಪೋರ್ಟ್‌ ಅಧಿಕಾರಿ ವಿಕಾಸ್‌ ಮಿಶ್ರಾ, ನಾನು ಜಾತ್ಯತೀತ. ನಾನು ಅಂತರ್ಜಾತಿ ವಿವಾಹವಾಗಿದ್ದೇನೆ. ತನ್ವಿ ಸೇಥ್‌ ಅವರ ಮದುವೆಯ ಸಂದರ್ಭದಲ್ಲಿನ ಹೆಸರು ಶಾಝಿಯಾ ಅನಾಸ್‌ ಎಂದು ತೋರಿಸಲಾಗಿದೆ. ಕಡತಗಳಲ್ಲಿ ಇದೇ ಹೆಸರನ್ನು ನಮೂದಿಸಿ ಎಂದು ಸೂಚಿಸಿದೆ. ಆದರೆ, ಅವರು ನಿರಾಕರಿಸಿದರು. ಆ ಹೆಸರನ್ನೇ ನಮೂದಿಸಿದ್ದರೆ ಕಡತಗಳಲ್ಲಿ ಬದಲಾವಣೆ ಮಾಡಲು ಕಳುಹಿಸಲಾಗುತ್ತಿತ್ತು. ಪಾಸ್‌ಪೋರ್ಟ್‌ ಅನ್ನು ಯಾರು, ಯಾವ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ ಎನ್ನುವುದು ಸಹ ಮುಖ್ಯವಾಗುತ್ತದೆ ಎಂದು ವಿವರಿಸಿದ್ದಾರೆ.

Sushma Swaraj,Passport,RSS,Rajeev tuli

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ