ವರುಣನ ಆರ್ಭಟ: ಸಿಡಿಲು ಹಾಗೂ ಮನೆಯ ಗೋಡೆ ಕುಸಿದು ಮೃತ

ಮಳವಳ್ಳಿ/ಶ್ರೀರಂಗಪಟ್ಟಣ, ಮೇ 29- ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಸಿಡಿಲು ಹಾಗೂ ಮನೆಯ ಗೋಡೆ ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಹಲಗೂರು ವರದಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗಿರಿಜಮ್ಮ (35) ಮೃತಪಟ್ಟ ಮಹಿಳೆ. ಈಕೆ ನಿನ್ನೆ ಮನೆಯ ಹಿಂಭಾಗವಿರುವ ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಮಳವಳ್ಳಿ ತಹಸೀಲ್ದಾರ್ ಉದಯ್‍ಕುಮಾರ್ ಹಾಗೂ ಹಲಗೂರು ಪೆÇಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ರೀರಂಗಪಟ್ಟಣ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಮಹದೇವಪುರ ಬೋರೆಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಮ್ಮ (55) ಮೃತಪಟ್ಟ ಮಹಿಳೆ. ಕಳೆದ ರಾತ್ರಿ ಗ್ರಾಮದಲ್ಲಿ ಸುರಿದ ಭಾರೀ ಮಳೆ-ಗಾಳಿಯಿಂದ ಲಕ್ಷ್ಮಮ್ಮ ವಾಸವಿದ್ದ ಮನೆಯ ಗೋಡೆ ಕುಸಿದಿದೆ.
ಲಕ್ಷ್ಮಮ್ಮನ ಪತಿ ಸೋಮಾಚಾರ್ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ