ಕಾಂಗ್ರೆಸ್‍ನ ಕೆಲ ಶಾಸಕರು ಕಣ್ಣಾಮುಚ್ಚಾಲೆ- ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲು ತಯಾರಿ

ಬೆಂಗಳೂರು, ಮೇ 16- ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯ ಕಸರತ್ತು ನಡೆಸುತ್ತಿರುವ ನಡುವೆಯೇ ಬಿಜೆಪಿಯ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ತಯಾರಿ ನಡೆಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದೆ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಕ್ಷಣಕ್ಷಣಕ್ಕೂ ಕುತುಹಲಕಾರಿ ಬೆಳವಣಿಗೆಗಳು ನಡೆದವು. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೂರು ಪಕ್ಷಗಳು ಬೆಳಗ್ಗೆಯಿಂದಲೂ ಶಾಸಕಾಂಗ ಸಭೆ ನಡೆಸಿ ತನ್ನ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಸಿದವು. ಬಿಜೆಪಿ ಮತ್ತು ಜೆಡಿಎಸ್‍ನ ಎಲ್ಲಾ ಶಾಸಕರು ಶಾಸಕಾಂಗಸಭೆಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಎರಡು ಪಕ್ಷಗಳಲ್ಲೂ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಿತು. ಬಿಜೆಪಿಯಲ್ಲಿ ಯಡಿಯೂರಪ್ಪ, ಜೆಡಿಎಸ್‍ನಲ್ಲಿ ಎಚ್.ಡಿ.ಕುಮಾರಸ್ವಾಮಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಕಾಂಗ್ರೆಸ್‍ನ ಕೆಲ ಶಾಸಕರು ಕಣ್ಣಾಮುಚ್ಚಾಲೆ ಆಟವಾಡಿದ್ದರಿಂದ ಕಾಂಗ್ರೆಸ್‍ನಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿಲ್ಲ.

ಜೆಡಿಎಸ್ ಶಾಸಕರು ನಗರದಲ್ಲಿರುವ ಖಾಸಗಿ ಸ್ಟಾರ್ ಹೊಟೇಲ್‍ನಲ್ಲಿ ತಂಗಿದ್ದಾರೆ. ಖುದ್ದು ಕುಮಾರಸ್ವಾಮಿಯವರೆ ತಮ್ಮ ಪಕ್ಷದ ಶಾಸಕರ ಕಾವಲಿಗಿದ್ದಾರೆ. ಇನ್ನೂ ಬಿಜೆಪಿ ಶಾಸಕರು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಸಂಜೆಯ ನಂತರ ಬಿಜೆಪಿಯ ಸಭೆ ಸದಾಶಿವನಗರದಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಸ್ಥಳಾಂತರಗೊಂಡಿತ್ತು.

ಕಾಂಗ್ರೆಸ್ ಏಳು ಮಂದಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಶಾಸಕರನ್ನು ಖಾಸಗಿ ಬಸ್‍ನಲ್ಲಿ ಬೆಂಗಳೂರಿನ ಹೊರ ವಲಯದಲ್ಲಿರುವ ರೆಸಾರ್ಟ್‍ಗೆ ಕರೆದೊಯ್ಯಲಾಯಿತ್ತು. ಬಳ್ಳಾರಿಯ ಆನಂದ್‍ಸಿಂಗ್ ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೆ ಆಟವಾಡಿಸಿದ್ದು, ಅವರ ನಡೆ ಅನುಮಾನ ಮೂಡಿಸಿದೆ. ಬಳ್ಳಾರಿಯ ಇನ್ನಿಬ್ಬರು ಶಾಸಕರಾದ ಬಿ.ನಾಗೇಂದ್ರ ಮತ್ತು ಅರ ಸಂಬಂಧಿ ಶಾಸಕ ಜೆ.ಎನ್.ಗಣೇಶ್ ಅವರು ಸಂಜೆಯ ವೇಳೆಗೆ ಕಾಂಗ್ರೆಸ್ ಪಾಳೇಯ ಸೇರಿಕೊಂಡರು. ಆನಂದ್ ಸಿಂಗ್ ಈಗ-ಆಗ ಎಂದು ಹೇಳಿ ಕಾಲಹರಣ ಮಾಡತೊಡಿದ್ದರು. ಕೊನೆಗೆ ಜಮೀರ್ ಅಹಮದ್ ಖಾನ್ ಮತ್ತು ನಾಗೇಂದ್ರ ಅವರನ್ನು ಜೊತೆ ಮಾಡಿ ಆನಂದ್ ಸಿಂಗ್‍ರನ್ನು ಕರೆತರಲು ಕಳುಹಿಸಲಾಯಿತು. ಅವರಿಬ್ಬರು ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಆ ಕಡೆಯಿಂದ ಸಂದೇಶ ರವಾನಿಸಿದ ಆನಂದ್ ಸಿಂಗ್ ನನ್ನನ್ನು ಕರೆದುಕೊಂಡು ಯಾರು ಬರುವ ಅಗತ್ಯ ಇಲ್ಲ ಎಂದು ಸಂದೇಶ ರವಾನಿಸಿದರು. ಇದರಿಂದ ವಿಮಾನ ನಿಲ್ದಾಣ ತಲುಪಿದ ಇಬ್ಬರು ಶಾಸಕರು ಬರಿ ಕೈನಲ್ಲಿ ವಾಪಾಸ್‍ಸಾದರು.

ಬೆಳಗಾವಿಯ ಶಾಸಕರಾದ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಮಹೇಶ್ ಕಮಟಹಳ್ಳಿ ಮತ್ತು ಗಣೇಶ್ ಹುಕ್ಕೇರಿ ಅವರು ತಡವಾಗಿ ಕಾಂಗ್ರೆಸ್ ಕಚೇರಿ ತಲುಪಿದ್ದರು. ಅವರಿಗಾಗಿ ಕಾದು ಕುಳಿತಿದ್ದ ಹಿರಿಯ ನಾಯಕರು ಕೊನೆಗೆ ರಾತ್ರಿ 8 ಗಂಟೆ ವೇಳೆಗೆ ಮೊದಲ ಹಂತದಲ್ಲಿ 49 ಮಂದಿ ಶಾಸಕರು ರೆಸಾರ್ಟ್‍ಗೆ ತೆರಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ