ರಾಜ್ಯದಲ್ಲಿ ಬಿಜೆಪಿ ನಿಶ್ಯಕ್ತವಾಗಿದ್ದು, ಟಾನಿಕ್ ನೀಡಲು ಪ್ರಧಾನಿ ಮೋದಿ ದೆಹಲಿಯಿಂದ ಬಂದಿದ್ದಾರೆ: ಮಲ್ಲಿಕಾರ್ಜುನ್ ಖರ್ಗೆ ವ್ಯಂಗ್ಯ

ಕಲಬುರಗಿ:ಮೇ-1: ಪ್ರಧಾನಿ ಮೋದಿ ಸರ್ಕಾರದ ಮೇಲೆ ಜನರಿಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ರಾಜ್ಯಕ್ಕೆ ಯಾವ ಮುಖ ಹೊತ್ತು ಮೋದಿ ಬಂದಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಖರ್ಗೆ, ಬಿಜೆಪಿಯವರ ಬಳಿ ಹೇಳಿ ಕೊಳ್ಳಲು ಏನೂ ಇಲ್ಲ. ಐದು ವರ್ಷದಲ್ಲಿ ಮೂವರು ಸಿಎಂ ಆಗಿದ್ದಾರೆ. ಸಿಎಂ ಆದವರೇ ಜೈಲಿಗೆ ಹೋಗಿ ಬಂದಿದ್ದಾರೆ. ರಾಜ್ಯ ಬಿಜೆಪಿ ಈಗ ಆಸ್ಪತ್ರೆಯಲ್ಲಿದ್ದು, ಮೋದಿ ಟಾನಿಕ್ ನೆಚ್ಚಿಕೊಂಡಿದ್ದಾರೆ. ನಿಶಕ್ತವಾಗಿರುವ ಬಿಜೆಪಿಗೆ ಟಾನಿಕ್ ಕೊಡಲು ದೆಹಲಿಯಿಂದ ಮೋದಿ ರಾಜ್ಯಕ್ಕೆ ಬಂದಿದ್ದಾರೆ. ಅವರು ಟಾನಿಕ್ ಕೊಟ್ಟಮೇಲೆ ಮುಂದೆ ಯಾವ ಮಾತ್ರೆ ಕೊಡಬೇಕು ನಮಗೆ ಗೊತ್ತಿದೆ ಎಂದು ಚಾಟಿ ಬೀಸಿದರು.

ಯಡಿಯೂರಪ್ಪ ಈಗ ಪಕ್ಷದ ಅಭ್ಯರ್ಥಿ ಅಷ್ಟೆ. ಈಗಲೇ ಪ್ರಮಾಣ ವಚನ ಸ್ವೀಕಾರ ದಿನಾಂಕ ನಿಗದಿ ಮಾಡಿರುವುದು ಅಪ್ರಬುದ್ಧ ನಡೆಯಾಗಿದೆ. ಜೈಲಿಗೆ ಹೋಗಿ ಬಂದವರನ್ನು ಸಿಎಂ ಎಂದು ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.

ಯಡಿಯೂರಪ್ಪರ ಮುಖವನ್ನು ಮುಂದೆ ಇಟ್ಟಕೊಂಡು ಕೆಜೆಪಿ ಓಟು ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಎಲ್ಲ ಪಕ್ಷಗಳು ಒಂದಾಗಿ ಆಡಳಿತದಿಂದ ಬಿಜೆಪಿಯನ್ನು ದೂರ ಇಡುತ್ತೇವೆ. ಮೋದಿ ರಾಜ್ಯದಲ್ಲಿ ಪ್ರವಾಸ ಬೆಳೆಸಿದರೂ ಯಾವುದೇ ಹಾನಿ ನಮಗೆ ಆಗುವುದಿಲ್ಲ. ಐದು ವರ್ಷ ಜನಪರ ಆಡಳಿತ ನೀಡಿದ್ದೆ ಶ್ರೀರಕ್ಷೆಯಾಗಲಿದೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

karnataka assembly election,PM Modi,Mallikarjuna kharge

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ