ಮೊದಲು ಪಟ್ಟಿ ಬಿಡುಗಡೆಯಾಗಲಿ, ನಂತರ ಸ್ಪರ್ಧೆ ಬಗ್ಗೆ ಹೇಳಿಕೆ ನೀಡುತ್ತೇನೆ: ಮಂಡ್ಯದಲ್ಲಿ ಸ್ಪರ್ಧೆ ಕುರಿತು ಅಂಬರೀಶ್ ಮೊದಲ ಪ್ರತಿಕ್ರಿಯೆ

ಬೆಂಗಳೂರು:ಏ-೧೦: ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀದಿರುವ ನಟ ಅಂಬರೀಶ್, ಮಂಡ್ಯದಲ್ಲಿ ಸ್ಪರ್ಧಿಸುವ ಸಂಬಂಧ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ನಮ್ಮೊಂದಿಗೆ ಮಾತಾಡಿದ್ದು ನಿಜ. ಆದರೆ ಅವರೇನೂ ವಾರ್ನ್ ಮಾಡಿಲ್ಲ. ಮೊದಲು ಪಟ್ಟಿ ಬಿಡುಗಡೆಯಾಗಲಿ, ನಂತರ ಸ್ಪರ್ಧೆ ಬಗ್ಗೆ ಹೇಳಿಕೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಸ್ಪರ್ಧೆ ಕುರಿತು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌ ನನ್ನ ಜೊತೆ ಮಾತಾಡಿದ್ದಾರೆ. ಮೊದಲು ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿ ಆಮೇಲೆ ನೋಡೋಣ. ಕಾಂಗ್ರೆಸ್‌ನಲ್ಲಿ ಹೆಂಗಂತಾ ಗೊತ್ತಲ್ಲ, ಬಿ ಫಾರಂ ಡಿಸಿಗೆ ಕೊಡೊವರೆಗೂ ಗ್ಯಾರಂಟಿ ಇದೆಯಾ ಹೇಳಿ ಎಂದು ತಮ್ಮದೇ ಧಾಟಿಯಲ್ಲಿಯೇ ಸ್ಪಷ್ಟೀಕರಣ ನೀಡಿದರು.

ಹೈಕಮಾಂಡ್ ಬಳಿ ಏನೆಲ್ಲಾ ಚರ್ಚೆಯಾಗುತ್ತೆ ನೋಡೋಣ. ಚುನಾವಣಾ ದಿನಾಂಕ ನಿಗದಿಯಾಗಿದೆ. ಅಭ್ಯರ್ಥಿಗಳ ಘೋಷಣೆ ಆಗ್ಬೇಕು ಅಲ್ವಾ, ವಾಸ್ತವಾಂಶ ಏನಿದೆ ಅಂತಾ ನಂಗೆ ಗೊತ್ತು. ಯಾರು ಏನೇ ಹೇಳಿದರೂ ನೀವು ಹಾಕ್ಬಿಡ್ತೀರಾ ? ಹೇಳೋರು ಯಾರು? ಅವರ ಬಯೋಡೇಟಾ ಏನು ಅನ್ನೋದನ್ನ ನೋಡಿ ನೀವು ಸುದ್ದಿ ಮಾಡ್ಬೇಕು. ಟಿಕೆಟ್ ಕೊಡ್ಲಿ ಮೊದಲು. ಕೊಟ್ಟ ಮೇಲೆ ಸಿಎಂ ಜೊತೆ, ಅಧ್ಯಕ್ಷರ ಜೊತೆ ಚರ್ಚೆ ಮಾತಾಡ್ತೇನೆ. ಯಾಕೆಂದರೆ ಈಗಿನ ಚುನಾವಣೆ ಅಷ್ಟು ಸರಳ ಅಲ್ಲ ಎಂದು ಸ್ಪರ್ಧೆ ಬಗ್ಗೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದರು.

ಸಿಎಂ ಮೈಸೂರಿಂದ ಬರೋವಾಗ ಭೇಟಿ ಮಾಡ್ತಿನಿ ಅಂದಿದ್ದರು. ಆದರೆ ಅವರಿಗೆ ಲೇಟಾಯ್ತು ಮತ್ತು ಅವರ ತಲೆಗೆ ಪೆಟ್ಟಾಗಿತ್ತು. ಅದಕ್ಕೆ ಭೇಟಿಯಾಗಲಿಲ್ಲ. ಈಗ ಸಿಎಂ ಹಾಗೂ ಪರಮೇಶ್ವರ್ ದೆಹಲಿಯಿಂದ ಬರಲಿ, ನಂತರ ಈ ಬಗ್ಗೆ ಮಾತನಾಡುತ್ತೇನೆ. ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಲಿ. ಮೊದಲು ಹೈ ಕಮಾಂಡ್ ಎಲ್ಲವೂ ನಿರ್ಧಾರ ಮಾಡಲಿದೆ ಎಂದರು.

ಇನ್ನು ಅಮರಾವತಿ ಚಂದ್ರಶೇಖರ್‌ಗೆ ಚೇರ್ಮನ್ ಹುದ್ದೆ ಕೊಡಬೇಕಿತ್ತು. ಕೊಡಲೇ ಇಲ್ಲ ಎಂದು ಕೈ ನಾಯಕರ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

assembly election,Ambaresh,mandya

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ