ಹಂಪಿಯಲ್ಲಿ ಕಿಡಿಗೇಡಿಗಳ ಉಪಟಳ; ನೆಲಕ್ಕುರುಳುತ್ತಿವೆ ಪುರಾತನ ಅಮೂಲ್ಯ ಸ್ಮಾರಕಗಳು

ಬಳ್ಳಾರಿ: ಇತ್ತೀಚಿಗೆ ಹಂಪಿಗೆ ಭೇಟಿ ನೀಡಿದ ಕಿಡಿಗೇಡಿಗಳ ಗುಂಪೊಂದು ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯ ಆವರಣದ ಬೃಹತ್ ಕಲ್ಲಿನ‌ ಕಂಬಗಳನ್ನು ನೆಲಕ್ಕುರುಳಿಸಿ ಹಾನಿ ಉಂಟು ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಈ ಕೃತ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗರ್ಭಗೃಹ ಮುಂಭಾಗದ ಬೃಹತ್ ಗಾತ್ರದ ಕಲ್ಲಿನ ಕಂಭಗಳನ್ನು ಹಾಡ ಹಗಲೇ ಕೈಯಿಂದ ತಳ್ಳಿ ನೆಲಕ್ಕುರುಳಿಸುತ್ತಿರುವ ಕಿಡಿಗೇಡಿಗಳ ಕೃತ್ಯವನ್ನು ಪ್ರವಾಸಿಗರೊಬ್ಬರು, ತಮ್ಮ‌ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟಿದ್ದರು. ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಿದ್ದರೂ, ಹಂಪಿಯ ಸ್ಮಾರಕಗಳಿಗೆ ಹಾನಿ‌ ಮಾಡುತ್ತಿರುವ ಘಟನೆಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಹಂಪಿ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಹಲವು ಇಲಾಖೆಗಳು ಇದ್ದರೂ, ಇಂತಹ ಕೃತ್ಯಗಳನ್ನು ತಡೆಯುವಲ್ಲಿ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ. ಈ ಹಿಂದೆ ಅಚ್ಚುತ ಬಜಾರ್ ಕಲ್ಲುಕಂಭಗಳನ್ನು ಹಾಗೂ ಮಾಲ್ಯವಂತ ರಘುನಾಥ ಸ್ವಾಮಿ ದೇವಸ್ಥಾನದ ಮುಂಭಾಗದ ಗಾಳಿ ಗೋಪುರವನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆಗಳು ಕಣ್ಮುಂದೆ ಇರುವಾಗ ಸ್ಮಾರಕಗಳು ಪದೇ ಪದೇ, ಹಾನಿಗೊಳಾಗುತ್ತಿರುವುದು ಇಲಾಖೆಗಳ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಇದನ್ನು ಅಲ್ಲೆಗೆಳೆದಿರುವ ಅಧಿಕಾರಿಗಳು ಈ ವಿಡಿಯೋದಲ್ಲಿನ ಕೃತ್ಯ ಹಂಪಿಯದಲ್ಲ ಎಂದು ಹೇಳುವ ಮೂಲಕ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ಹೊಂದಿರುವ ಹಂಪಿಯಲ್ಲಿ ಸ್ಮಾರಕಗಳು ಮುಂದಿನ ಪೀಳಿಗೆಗೆ ಉಳಿಯಬೇಕೆಂಬ ಉದ್ದೇಶದಿಂದ ವಿವಿಧ ಇಲಾಖೆಗಳಿಂದ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಹಂಪಿಯ ಸ್ಮಾರಕಗಳ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯಗಳ ಸಂರಕ್ಷಣಾ ಇಲಾಖೆ ಕೆಲಸ ಮಾಡುತ್ತಿದ್ದರೂ ಇಂಥ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸ.
ಈ ಕೃತ್ಯ ಎಸಗುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ (ಫೆ. 4) ಪ್ರತಿಭಟನೆ ನಡೆಸಲಾಗುವುದು ಹಾಗೂ ಎಎಸ್‌ಐ ಕಚೇರಿ ಮತ್ತು ಪೊಲೀಸ್ ಉಪ ವಿಭಾಗದ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಸಂಚಾಲಕ ಕಮಲಾಪುರದ ಡಾ. ವಿಶ್ವನಾಥ ಮಾಳಿಗೆ ತಿಳಿಸಿದ್ದಾರೆ.

ಏಷ್ಯದ ಅಗ್ರ 5 ಪ್ರವಾಸಿ ತಾಣಗಳಲ್ಲಿ ಹಂಪಿ ಸಹ ಒಂದಾಗಿದ್ದು, 2019ರ ಏಷ್ಯ ಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪಾರಂಪರಿಕ ತಾಣವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಇನ್ನೊಂದಡೆ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ವಿಶ್ವದ 52 ಪ್ರೇಕ್ಷಣಿಯ ಸ್ಥಳದಲ್ಲಿ ಹಂಪಿಗೆ ಎರಡನೇ ಸ್ಥಾನ ಸಿಕ್ಕಿದೆ. ಆದರೆ ವಿಶ್ವ ಮಟ್ಟದಲ್ಲಿ ಗಮನಸೆಳೆಯುತ್ತಿರುವ ಹಂಪಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ದುರ್ದೈವದ ಸಂಗತಿಯಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ