ಸಿಎಂ ಬಿಎಸ್​ವೈ ಭೇಟಿ ಮಾಡಿದ ಬಿ.ಎಲ್.ಸಂತೋಷ್; ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ

ಬೆಂಗಳೂರು: ದಾವೋಸ್ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿರುವ ಬಿ.ಎಸ್​. ಯಡಿಯೂರಪ್ಪನವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್ಭೇಟಿಯಾಗಿದ್ದಾರೆ. ಇಂದು ಡಾಲರ್ಸ್​​ ಕಾಲೋನಿಯ ಸಿಎಂ  ನಿವಾಸಕ್ಕೆ ಆಗಮಿಸಿರುವ ಅವರು, ಬಿಎಸ್ವೈ ಅವರ ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಸಂಪುಟ ವಿಸ್ತರಣೆ ಕುರಿತಾಗಿ ಪರಸ್ಪರ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಬಿಎಸ್​​ ಯಡಿಯೂರಪ್ಪ ದೆಹಲಿಗೆ ತೆರಳುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೂಚನೆ ಮೇರೆಗೆ ಬಿ.ಎಲ್​. ಸಂತೋಷ್​​ ಭೇಟಿಯಾಗಿದ್ದಾರೆ. ಸಿಎಂ ಜೊತೆ 15 ನಿಮಿಷಗಳ ಕಾಲ ಮಾತನಾಡಿದ ಸಂತೋಷ್​, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂಬುದರ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಇದೇ ವೇಳೆ, ಬಿ.ಎಲ್​.ಸಂತೋಷ್​ ಸಿಎಂ ಬಳಿ ಸಿದ್ಧವಿರುವ ಸಚಿವ ಸಂಪುಟದ ಪಟ್ಟಿಯನ್ನು ಪಡೆದರು. ಜೊತೆಗೆ ಪಕ್ಷದ ಶಾಸಕರನ್ನು ಸೇರಿಸಿಕೊಳ್ಳುವ ಬಗ್ಗೆ ಹಾಗೂ ಸಂಪುಟ ವಿಸ್ತರಣೆ ದಿನಾಂಕದ ಬಗ್ಗೆಯೂ ಮಾತುಕತೆ ನಡೆಸಿದರು.

ಸಿಎಂ ಬಿಎಸ್​ವೈ​​ ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್​ ನಾಯಕರನ್ನು ಭೇಟಿ ಮಾಡಲಿದ್ದಾರೆ. ಹೈಕಮಾಂಡ್​ ನಾಯಕರೊಂದಿಗೆ ಚರ್ಚಿಸಿ ಯಾರಿಗೆ ಮಂತ್ರಿಗಿರಿ ನೀಡಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.

ಇನ್ನು, ಮೂರು ದಿನದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ನಿನ್ನೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಹೇಳಿದ್ದರು. ಅಲ್ಲದೆ, ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಮಂತ್ರಿಸ್ಥಾನ ನೀಡಲಾಗುವುದು. ಸೋತವರಿಗೆ ಸಚಿವ ಸ್ಥಾನ ನೀಡುವ ಮಾತೇ ಇಲ್ಲ ಎಂದಿದ್ದರು. ಹೀಗಾಗಿ ಎಂಟಿಬಿ ನಾಗರಾಜ್ ಹಾಗೂ ಹೆಚ್​. ವಿಶ್ವನಾಥ್ ರಾಜಕೀಯ ಭವಿಷ್ಯ ಇದೀಗ ತೂಗುಗತ್ತಿಯ ಮೇಲೆ ನಿಂತಿದೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ