ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರ ಹತ್ಯೆಗೆ ಕರೆ-ತಮಿಳು ವಿದ್ವಾಂಸ ಮತ್ತು ವಾಗ್ಮಿ ನೆಲ್ಮೈ ಕಣ್ಣನ್ ಬಂಧನ

ಚೆನ್ನೈ, ಜ.2- ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ತಮಿಳು ವಿದ್ವಾಂಸ ಮತ್ತು ವಾಗ್ಮಿ ನೆಲ್ಮೈ ಕಣ್ಣನ್ ಅವರನ್ನು ಪೋಲೀಸರು ಬಂಧಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತ ಕಣ್ಣನ್, ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ್ದರು.

ಅಮಿತ್ ಷಾ ಅವರು ಪ್ರಧಾನಿ ಮೋದಿಯವರ ಮಿದುಳು ಇದ್ದಂತೆ. ಅಮಿತ್ ಷಾ ಕರೆ ಮುಗಿದರೆ ಮೋದಿಯವರ ಕತೆ ಮುಗಿದಂತೆ. ಅಷ್ಟಾದರೂ ಕೂಡ ಯಾವ ಮುಸ್ಲಿಮರೂ ಇನ್ನು ಅವರಿಬ್ಬರನ್ನು ಹತ್ಯೆ ಮಾಡಲು ಮುಂದಾಗುತ್ತಿಲ್ಲ. ಇದು ನನಗೆ ಅಚ್ಚರಿ ತಂದಿದೆ ಎಂದು ಹೇಳುವ ವಿವಾದ ಸೃಷ್ಟಿಸಿದ್ದರು.

ನೆಲ್ಮೈಕಣ್ಣನ್ ಅವರ ಮಾತುಗಳು ಹಿಂಸೆಯನ್ನು ಪ್ರಚೋದಿಸುವಂತಿದೆ ಎಂದು ಪ್ರತಿಪಾದಿಸಿ ಒಟ್ಟು 15 ದೂರುಗಳು ದಾಖಲಾಗಿದ್ದವು. ಪೋಲೀಸರು ಪ್ರತ್ಯೇಕ ಎಫ್‍ಐಆರ್ ಕೂಡ ದಾಖಲಿಸಿದ್ದರು. ಬಿಜೆಪಿ ಹಿರಿಯ ನಾಯಕರಾದ ಪಾನ್ ರಾಧಾಕೃಷ್ಣನ್, ಸಿ.ಪಿ.ರಾಧಾಕೃಷ್ಣನ್, ಎಲ್.ಗಣೇಶನ್ ಹಾಗೂ ಎಚ್.ರಾಜಾ ಅವರು ಮರೀನಾ ಬೀಚ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುವ ಮೂಲಕ ನೆಲ್ಮೈ ಕಣ್ಣನ್ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಪ್ರಧಾನಿ ಹಾಗೂ ಗೃಹ ಸಚಿವರ ಹತ್ಯೆಗೆ ಕರೆ ನೀಡಿದ ಆರೋಪ ಮಾಡಿ ಬಿಜೆಪಿ ಮುಖಂಡರೋರ್ವರು ಪೋಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೋಲೀಸರು ಇದೀಗ ಪೆರಂಬಲೂರ್‍ನಲ್ಲಿ ಕಣ್ಣನ್ ಅವರನ್ನು ಬಂಧಿಸಿದ್ದಾರೆ.

ನೆಲ್ಮೈ ಕಣ್ಣನ್ ಬಂಧನವಾಗುತ್ತಿದ್ದಂತೆ ಬಿಜೆಪಿ ನಾಯಕ ಎಚ್.ರಾಜಾ ಅವರು ಟ್ವೀಟ್ ಮಾಡಿ, ನೆಲ್ಮೈ ವಿರುದ್ಧ ದೂರು ದಾಖಲಿಸಿದ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲ ಬಿಜೆಪಿ ಕಾರ್ಯಕರ್ತರು, ನಾಯಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರತಿಭಟನೆ ವೇಳೆ ಪ್ರಚಾದನಾತ್ಮಕ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸಿದ ಆರೋಪದ ಮೇಲೆ ದೇಶದ ಹಲವೆಡೆ ಇನ್ನು ಕೆಲವರನ್ನು ಬಂಧಿಸಲು ಪೋಲೀಸರು ಮುಂದಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ