ನನಗೆ ಎಲ್ಲ ಅವಕಾಶಗಳು ಅನಿರೀಕ್ಷಿತವಾಗಿ ಸಿಕ್ಕಿದೆ-ಡಿಸಿಎಂ ಲಕ್ಷ್ಮಣ ಸವದಿ

ಬಳ್ಳಾರಿ, ಸೆ.17- ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಯಾರಿಗೂ ಅಸಮಾಧಾನವಿಲ್ಲ. ನಾನು ಶ್ರೀರಾಮುಲು ಜೊತೆ ಮಾತನಾಡಿದ್ದೇವೆ. ಅವರು ಸಂತೋಷವಾಗಿ ಬಳ್ಳಾರಿಗೆ ಆಹ್ವಾನ ನೀಡಿದ್ದಾರೆ. ಅಣ್ಣ ರಾಮುಲು ಇರುವ ಕಡೆ ತಮ್ಮ ಲಕ್ಷ್ಮಣನಿಗೆ ಯಾವುದೇ ತೊಂದರೆ ಇಲ್ಲ. ನಮ್ಮೆಲ್ಲರ ಉದ್ದೇಶ ರಾಜ್ಯದ ಅಭಿವೃದ್ಧಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕಲ್ಯಾಣ ಕರ್ನಾಟಕ ದಿನಾಚರಣೆ ಹಿನ್ನೆಲೆ ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾರ್ಪಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ನನಗೆ ಎಲ್ಲ ಅವಕಾಶಗಳು ಅನಿರೀಕ್ಷಿತವಾಗಿ ಸಿಕ್ಕಿದೆ. ನಾನು ಡಿಸಿಎಂ ಆಗಿದ್ದು, ರಾಜಕೀಯಕ್ಕೆ ಬಂದಿದ್ದು ಅನಿರೀಕ್ಷಿತ. ಪ್ರಧಾನಿ ಮೋದಿ, ಅಮಿತ್ ಶಾ ಗುಜರಾತ್‍ನಲ್ಲಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡದೆ ಬೇರೆಯವರಿಗೆ ಅವಕಾಶ ನೀಡುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದ್ದರು. ಈಗ ಕರ್ನಾಟಕ ರಾಜ್ಯದಲ್ಲಿ ಸಹ ಇದೇ ಪ್ರಯೋಗ ಅನುಸರಿಸಿದ್ದಾರೆ. ಬಳ್ಳಾರಿ ಉಸ್ತುವಾರಿ ನನಗೆ ಸಿಕ್ಕಿದ್ದಕ್ಕೆ ಶ್ರೀರಾಮುಲುಗೂ ಸಂತಸ ತಂದಿದೆ. ರಾಮ ಲಕ್ಷ್ಮಣ ಸಹೋದರು, ಅದೇ ರೀತಿ ಅಣ್ಣ ಅಲ್ಲಿ ಹೋದರೆ ತಮ್ಮ ಇಲ್ಲಿಗೆ ಬಂದಿದ್ದಾನೆ ಎಂದರು.

ರಾಜ್ಯದಲ್ಲಿ ಅನೇಕ ಕಡೆ ಗೋಶಾಲೆಗಳನ್ನು ಮುಚ್ಚಲಾಗುತ್ತಿದೆ ಎನ್ನುವುದು ಗಮನಕ್ಕೆ ಬಂದಿದೆ. ಕೂಡಲೇ ಅಂತಹ ಗೋಶಾಲೆಗಳ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಯಾವುದೇ ಗೋಶಾಲೆಗಳನ್ನು ಮುಚ್ಚುವುದಿಲ್ಲ. ಅಗತ್ಯ ಬಿದ್ದರೆ ಸರ್ಕಾರವೇ ಗೋಶಾಲೆ ನಡೆಸಲಿದೆ ಎಂದು ತಿಳಿಸಿದರು.

ಶಾಸಕರಾದ ಸೋಮಶೇಖರ್ ರೆಡ್ಡಿ, ಇ ತುಕಾರಾಂ, ಸಂಸದ ದೇವೇಂದ್ರಪ್ಪ ಭಾಗಿಯಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ