ಕೊಯಮತ್ತೂರು, ಆ.8-ರೈಲ್ವೆ ಪಾರ್ಸಲ್ ಗೋದಾಮು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಶಿಥಿಲಾವಸ್ಥೆಯಲ್ಲಿದ್ದ ಗೋದಾಮು ಧಾರಾಕಾರ ಮಳೆಯಿಂದಾಗಿ ಕುಸಿದು ಬಿದ್ದು ಈ ಘಟನೆ ಸಂಭವಿಸಿದೆ. ಗಾಯಗೊಂಡ ಮತ್ತೊಬ್ಬ ಕಾರ್ಮಿಕನ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳೆ ಗೋದಾಮಿನ ಗೋಡೆಗಳು ಮತ್ತು ಜಿಂಕ್ ಶೀಟ್ ಮೇಲ್ಛಾವಣಿ ತೇವವಾಗಿತ್ತು. ಈ ಗೋಡೌನ್ನಲ್ಲಿ ಮೂವರು ಗುತ್ತಿಗೆ ಕೂಲಿ ಕಾರ್ಮಿಕರು ನಿದ್ರಿಸುತ್ತಿದ್ದಾಗ 3.30ರ ನಸುಕಿನಲ್ಲಿ ಇಡೀ ಗೋದಾಮು ಕುಸಿದಿದೆ.
ಈ ಘಟನೆಯಲ್ಲಿ ಫವೀಶಮುನಿ ಮತ್ತು ಇಬ್ರಾಹಿಂ ಮೃತಪಟ್ಟಿದ್ದು, ಗಾಯಾಳು ರಾಜು ಎಂಬುವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಶೋಚನೀಯವಾಗಿದೆ.