ಚರ್ಚೆ ವೇಳೆ ಮೌನಕ್ಕೆ ಶರಣಾಗಿರುವ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜು.22- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲಿ ಧ್ವನಿಯೆತ್ತಿದರೆ ಸಾಕು ಸರಕಾರವೇ ನಡುಗುವಂತಹ ಕಾಲವೊಂದಿತ್ತು.ಅವರ ವಾಕ್‍ಚಾತುರ್ಯ, ಗಡಸು ಧ್ವನಿಯ ವಾಗ್ದಾಳಿಗೆ ಅಧಿಕಾರದಲ್ಲಿದ್ದ ಪಕ್ಷದ ನಾಯಕರು ಪತರಗುಟ್ಟುತ್ತಿದ್ದರು.ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ನುಡಿಗಟ್ಟೇ ಹುಟ್ಟಿಕೊಂಡಿತ್ತು.
ಹೀಗಿದ್ದ ಯಡಿಯೂರಪ್ಪ ಕಳೆದ ಎರಡು ದಿನಗಳ ಕಾಲ ಮೈತ್ರಿ ಸರಕಾರದ ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆ ವೇಳೆ ತುಟಿಪಿಟಕ್ ಎನ್ನದೆ ಮೌನಕ್ಕೆ ಶರಣಾಗಿದ್ದರು.

ಪ್ರಸ್ತುತ ನಡೆಯುತ್ತಿರುವ ನಡೆದ ಚರ್ಚೆಯಲ್ಲಿ ಅವರು ಮಾತನಾಡಿದ್ದು, ಕೆಲವೇ ಸೆಕೆಂಡ್‍ಗಳ ಕಾಲ ಅಷ್ಟೆ.ಅವರ ಮೌನಕ್ಕೆ ಕಾರಣವೂ ಇದೆ. ವಿಧಾನಸಭೆಯಲ್ಲಿ ಬಿಜೆಪಿ ಅನುಸರಿಸಬೇಕಾದ ಕಾರ್ಯತಂತ್ರದ ಭಾಗವಾಗಿ ಸಾಕಷ್ಟು ಯೋಚಿಸಿಯೇ ಅವರು ಮೌನ ತಾಳಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಮೈತ್ರಿಕೂಟದ ನಾಯಕರು ಕೆಸರೆರಚುವ ಮೂಲಕ, ವೈಯಕ್ತಿಕ ನಿಂದನೆಗಳ ಮೂಲಕ ನಮ್ಮನ್ನು ಕೆರಳಿಸಲು ಹವಣಿಸುತ್ತಿದ್ದಾರೆ.ನಾವು ಸಹನೆ ಕಳೆದುಕೊಂಡು ಪ್ರತಿಕ್ರಿಯಿಸಿದರೆ ಅದನ್ನೇ ನೆಪವಾಗಿಟ್ಟುಕೊಂಡು ಸ್ಪೀಕರ್ ಅಧಿಕಾರ ಬಳಸಿ ಪ್ರತಿಪಕ್ಷ ಸದಸ್ಯರನ್ನು ಕಲಾಪದಿಂದ ಹೊರಗಿಟ್ಟು ವಿಶ್ವಾಸಮತ ಸಾಬೀತುಪಡಿಸಬಹುದು ಎಂಬ ಎಣಿಕೆ ಮೈತ್ರಿ ನಾಯಕರದ್ದು.ನಾವು ಅಂತಹ ತಂತ್ರಗಳಿಗೆ ಅವಕಾಶ ನೀಡುವುದಿಲ್ಲ. ಅವರ ಬಲೆಗೆ ಬೀಳುವುದೂ ಇಲ್ಲ ಎಂದು ಪಕ್ಷದ ಪ್ರಮುಖರು ಹೇಳುತ್ತಾರೆ.

ವಾಸ್ತವದಲ್ಲಿ ಎರಡು ದಿನಗಳ ಚರ್ಚೆಯಲ್ಲಿ ಬಿಜೆಪಿ ನಾಯಕರು ಸಂಘಟಿತವಾಗಿ ಕೆಲವೇ ನಿುಷಗಳಷ್ಟು ಮಾತ್ರ ಮಾತನಾಡಿದ್ದಾರೆ.ಪಕ್ಷ 105 ಶಾಸಕರ ಪೈಕಿ ಮೂವರು ಮಾತ್ರ ಆಡಳಿತ ಮೈತ್ರಿಕೂಟದ ವಾಗ್ದಾಳಿಗೆ ಪ್ರತಿದಾಳಿ ನಡೆಸಿದ್ದಾರೆ.ಇವೆಲ್ಲವೂ ಪೂರ್ವಯೋಜಿತ ಕಾರ್ಯತಂತ್ರದಂತೆಯೇ ನಡೆದಿದೆ.
ಈ ಸರಕಾರದ ಪತನ ಖಚಿತ.ಈಗ ಕೊನೆಯುಸಿರು ಎಳೆಯುತ್ತಿದೆ ಅಷ್ಟೆ.ಇಂತಹ ಸನ್ನಿವೇಶದಲ್ಲಿ ಅನಗತ್ಯ ಚರ್ಚೆಗಳನ್ನು ನಡೆಸುವ ಮೂಲಕ ಸಾಯುತ್ತಿರುವ ಸರಕಾರಕ್ಕೆ ಆಕ್ಸಿಜನ್ ಪೂರೈಸಲು ನಾವು ಸಿದ್ಧರಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳುತ್ತಾರೆ.

ಸದನದಲ್ಲಿ ಯಾವುದೇ ರೀತಿಯ ವೈಯಕ್ತಿಕ ದಾಳಿ, ಪ್ರಚೋದನೆ ಬಂದರೂ ಕೆರಳದೆ ಸುಮ್ಮನಿರುವಂತೆ ಸದಸ್ಯರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೆಸರು ಬರಂಗ ಪಡಿಸಲು ಇಚ್ಚಿಸದ ನಾಯಕರೊಬ್ಬರು ತಿಳಿಸಿದ್ದಾರೆ.

ಪೂರ್ವ ಯೋಜನೆಯಂತೆ ಜೆ.ಸಿ.ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ ಮತ್ತು ಎಸ್.ಸುರೇಶ್‍ಕುಮಾರ್ ಮಾತ್ರ (ಸಂಧಾನ ಮತ್ತು ನಿಯಮಾವಳಿಗಳ ಬಗ್ಗೆ ಸಂಪೂರ್ಣ ಜ್ಞಾನವುಳ್ಳವರು) ಮಾತನಾಡಲು ಮುಕ್ತ ಅವಕಾಶ ನೀಡಲಾಗಿದೆ.
ಕಾಂಗ್ರೆಸ್ ಘಟಾನುಘಟಿಗಳಾದ ಸಿದ್ದರಾಮಯ್ಯ, ಎಚ್.ಕೆ ಪಾಟೀಲ್ ಮತ್ತು ಕೃಷ್ಣಬೈರೇಗೌಡರ ವಾಗ್ದಾಳಿಗಳಿಗೆ ಪ್ರತಿದಾಳಿ ನಡೆಸುವ ಹೊಣೆಯನ್ನು ಮಾಧುಸ್ವಾಮಿ ಅವರಿಗೆ ವಹಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ