ಸಿಎಂ ವಿಶ್ವಾಸ ಮತಯಾಚನೆಗೆ ಹಿನ್ನಲೆ:ಬಿಜೆಪಿ ಪಾಳಯದಲ್ಲಿ ಸೃಷ್ಟಿಯಾದ ಆತಂಕ

ಬೆಂಗಳೂರು, ಜು.12-ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಲವಾದ ಆತ್ಮವಿಶ್ವಾಸದಿಂದ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಮುಂದಾದ ತಕ್ಷಣವೇ ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಯಾಗಿದೆ.
ಈಗಾಗಲೇ ಆಪರೇಷನ್ ಕಮಲ ನಡೆಸಿ 14 ಮಂದಿ ಕಾಂಗ್ರೆಸ್-ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಿರುವ ಬಿಜೆಪಿ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಮತ್ತು ಸ್ವತಃ ಸರ್ಕಾರ ರಚಿಸುವ ಆತ್ಮವಿಶ್ವಾಸದಲ್ಲಿತ್ತು.ಇದಕ್ಕೆ ಪೂರಕವಾಗಿ ರೋಷನ್‍ಬೇಗ್ ಮತ್ತು ರಾಮಲಿಂಗಾರೆಡ್ಡಿ ಕೂಡ ರಾಜೀನಾಮೆ ನೀಡಿರುವುದು ಬಿಜೆಪಿಗೆ ವರದಾನವಾಗಿತ್ತು.ಈ ಹಿನ್ನೆಲೆಯಲ್ಲಿ ಬಿಜೆಪಿ ಅತಿಯಾದ ಆತ್ಮವಿಶ್ವಾಸದಲ್ಲಿದ್ದು, 6ನೇ ಬಾರಿ ಕಾರ್ಯಾಚರಣೆ ಮಾಡುತ್ತಿರುವ ಆಪರೇಷನ್ ಕಮಲ ಯಶಸ್ವಿಯಾಗಲಿದೆ ಎಂಬ ನಿರೀಕ್ಷೆಯಲ್ಲಿದೆ.
ಶಾಸಕರ ಸಂಖ್ಯಾಬಲದ ಕೊರತೆ ಮೇಲ್ನೋಟಕ್ಕೆ ಕಂಡು ಬಂದರೂ ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆಗೆ ಮುಂದಾಗಿರುವುದು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಮೂಲಗಳ ಪ್ರಕಾರ ರಾಜೀನಾಮೆ ನೀಡಿ ಬಿಜೆಪಿ ಹಿಡಿತದಲ್ಲಿ ಸಿಲುಕಿರುವ 14 ಮಂದಿ ಶಾಸಕರ ಪೈಕಿ ಕೆಲ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಬಂದಾಗ ಅವರು ಮುಲಾಜಿಲ್ಲದೆ ವಾಪಸ್ ಬರುತ್ತಾರೆ ಎಂಬ ವದಂತಿಗಳಿವೆ.
ಬಿಜೆಪಿ ಬಹಿರಂಗವಾಗಿ ಹೇಳಿಕೊಂಡು ಜಗಜ್ಜಾಹೀರಾಗಿ ಸರ್ಕಾರ ರಚಿಸಲು ಮುಂದಾಗಿದೆ.ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕಾಂಗ್ರೆಸ್ ಹಿರಿಯ ನಾಯಕರ ಸಲಹೆ ಮೇರೆಗೆ ಶಾಂತಿಯಿಂದ ಇದ್ದು, ಒಳಗೊಳಗೇ ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಿವರ್ಸ್ ಆಪರೇಷನ್ ಕಾರ್ಯಾಚರಣೆ ಈಗಾಗಲೇ ನಡೆದಿದ್ದು, ವಿಶ್ವಾಸ ಮತಯಾಚನೆಗೆ ಸಮಯ ಸಿಕ್ಕರೆ ಬಿಜೆಪಿ ಕೆಲ ಶಾಸಕರು ಸದನಕ್ಕೆ ಗೈರು ಹಾಜರಾಗಲಿದ್ದಾರೆ ಎಂಬ ಮಾಹಿತಿ ಇದೆ. ರಿವರ್ಸ್ ಆಪರೇಷನ್ ಯಶಸ್ವಿಯಾಗಿರುವುದರಿಂದಲೇ ಕುಮಾರಸ್ವಾಮಿಯವರು ಆತ್ಮವಿಶ್ವಾಸದಿಂದ ಧೈರ್ಯವಾಗಿ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಿವರ್ಸ್ ಆಪರೇಷನ್‍ಗೆ ಸಿಲುಕಿರುವ ಶಾಸಕರ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ. ವಿಶ್ವಾಸಮತಯಾಚನೆ ದಿನ ಅನಿರೀಕ್ಷಿತವಾಗಿ ಕೆಲವು ಬೆಳವಣಿಗೆಗಳು ನಡೆಯಲಿದೆ. ಕುಮಾರಸ್ವಾಮಿ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುತ್ತಾರೆ.ಆರನೇ ಬಾರಿಯೂ ಆಪರೇಷನ್ ಕಮಲ ವಿಫಲವಾಗಲಿದೆ.ರಾಜೀನಾಮೆ ಕೊಟ್ಟು , ಪಕ್ಷ ದ್ರೋಹ ಮಾಡಿ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜಕೀಯ ಭವಿಷ್ಯ ತ್ರಿಶಂಕು ಸ್ಥಿತಿಯಂತಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಆದರೆ ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರಮಟ್ಟದ ನಾಯಕರುಗಳಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದು, ಶತಾಯಗತಾಯ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವುದು ಖಚಿತ. ಕುಮಾರಸ್ವಾಮಿ ಏನೇ ಲೆಕ್ಕಾಚಾರ ಹಾಕಿ ಕಾರ್ಯಾಚರಣೆ ನಡೆಸಿದರೂ ಅದು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಬಿಜೆಪಿ ನಾಯಕರು ಜಿದ್ದಾಜಿದ್ದಿಗೆ ಬಿದ್ದು ಸೆಡ್ಡು ಹೊಡೆದಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ.
ಕುಮಾರಸ್ವಾಮಿ ಕೈ ಮೇಲಾಗುವುದೋ, ಇಲ್ಲ ಯಡಿಯೂರಪ್ಪ ಯಶಸ್ವಿಯಾಗುವರೋ ಎಂಬ ಚರ್ಚೆಗಳು ಬಿರುಸಿನಿಂದ ನಡೆದಿವೆ.
ಸ್ಪೀಕರ್ ರಮೇಶ್‍ಕುಮಾರ್ ಅವರು ವಿಶ್ವಾಸ ಮತಯಾಚನೆಗೆ ಯಾವ ದಿನ ನಿಗದಿ ಮಾಡುತ್ತಾರೆ ಎಂಬುದು ಕೂಡ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ