ಮೈತ್ರಿ ಸರ್ಕಾರದ ಉಳಿವಿಗೆ ಬಾಕಿಯಿರುವುದು ಎರಡೇ ಬ್ರಹ್ಮಾಸ್ತ್ರ ?

ಬೆಂಗಳೂರು: ಸಮಯವಕಾಶ ಬಳಸಿಕೊಂಡು ಸರ್ಕಾರವನ್ನು ಉಳಿಸಲು ಮುಂದಾಗಿರುವ ದೋಸ್ತಿ ನಾಯಕರ ತಂತ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ ಹಿನ್ನಡೆ ತಂದಿದೆ. ಈ ಆದೇಶ ಬಂದರೂ ಸರ್ಕಾರ ಮೈತ್ರಿ ಸರ್ಕಾರದ ರಕ್ಷಣೆಗೆ ಎರಡು ಬ್ರಹ್ಮಾಸ್ತ್ರಗಳನ್ನು ನಾಯಕರು ಹೊಂದಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೇ ದಿನ ದೂಡಿ ಅವರನ್ನು ಮನ ಒಲಿಸುವ ತಂತ್ರಕ್ಕೆ ದೋಸ್ತಿ ನಾಯಕರು ಮುಂದಾಗಿದ್ದರು. ಆದರೆ ಅತೃಪ್ತರ ರಾಜೀನಾಮೆ ಬಗ್ಗೆ ಇಂದು ಸಂಜೆ ನಿರ್ಧಾರ ತಿಳಿಸಿ, ಶುಕ್ರವಾರ ವಿವರ ನೀಡಬೇಕು ಎಂದು ಸ್ಪೀಕರ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಆದೇಶದ ಮಧ್ಯೆಯೂ ಸರ್ಕಾರ ಉಳಿಸಲು ನಾಯಕರು ಎರಡು ತಂತ್ರವನ್ನು ಬಳಸಿ ಸರ್ಕಾರ ಉಳಿಸಲು ಮುಂದಾಗಿದ್ದಾರೆ.

ಹೌದು. ಒಂದನೆಯದಾಗಿ ಈ ಹಿಂದೆ ಬಿಡುಗಡೆಯಾಗಿದ್ದ ಆಪರೇಷನ್ ಆಡಿಯೋ ಬಗ್ಗೆ ಕ್ರಮಕೈಗೊಳ್ಳಲು ಸ್ಪೀಕರ್ ಅವರಿಗೆ ಒತ್ತಡ ಹಾಕಬಹುದು. ಇದರ ಜೊತೆ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆನಂದ್ ಸಿಂಗ್, ಪ್ರತಾಪ್ ಸಿಂಗ್ ಪಾಟೀಲ್ ಅನರ್ಹತೆಯನ್ನ ಕೋರಿ ದೂರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಮುಂದಾಗಬಹುದಾಗಿದೆ.

ಈಗಾಗಲೇ ಕಾನೂನು ನಿಯಮಗಳ ಅಡಿಯೇ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಸಂವಿಧಾನ ನಿಯಮಗಳ ಅಡಿ ಕಾರ್ಯನಿರ್ವಹಿಸುತ್ತೇನೆ ಎಂದು ಸ್ಪೀಕರ್ ಹೇಳಿದ್ದಾರೆ. ನಾಲ್ಕು ಕೈ ಶಾಸಕರ ಪೈಕಿ ಆನಂದ್ ಸಿಂಗ್ ಅವರ ಹೆಸರು ಇದ್ದು, ಆನಂದ್ ಸಿಂಗ್ ಬಗ್ಗೆ ಕಾಂಗ್ರೆಸ್ ನಾಯಕರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದು ಕೂಡ ಪ್ರಮುಖವಾಗಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಸಂಜೆ ವೇಳೆಗೆ ಸ್ಪಷ್ಟ ರೂಪ ಸಿಗುವ ಸಾಧ್ಯತೆ ಇದೆ. ಅಲ್ಲದೇ ನ್ಯಾಯಾಲಯ ಕೂಡ ಸ್ಪೀಕರ್ ಅವರ ವಾದ ಮಂಡನೆಗೆ ಅವಕಾಶ ನೀಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ