ರಾಜ್ಯ ಸರ್ಕಾರ ಸ್ಪಂದಿಸಿದರೆ ಕಂಟೈನರ್ ಮತ್ತು ಗೂಡ್‍ಶೆಡ್ ಸ್ಥಳಾಂತರ-ಕೇಂದ್ರ ಸಚಿವ ಸುರೇಶ್ ಅಂಗಡಿ

ಬೆಂಗಳೂರು, ಜೂ.29-ವೈಟ್‍ಫೀಲ್ಡ್‍ನಲ್ಲಿರುವ ಗೂಡ್‍ಶೆಡ್ ಮತ್ತು ಕಂಟೈನರ್‍ಗಳನ್ನು ಸ್ಥಳಾಂತರಿಸಲು ಕೇಂದ್ರ ರೈಲ್ವೆ ಇಲಾಖೆ ಸಿದ್ಧವಿದೆ. ರಾಜ್ಯ ಸರ್ಕಾರ ಜಾಗ ಕೊಟ್ಟರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಭರವಸೆ ನೀಡಿದರು.

ನಗರದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 3ನೇ ಪ್ರವೇಶ ದ್ವಾರದ ಉದ್ಘಾಟನೆ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸ್ಪಂದಿಸಿದರೆ ಕಂಟೈನರ್ ಮತ್ತು ಗೂಡ್‍ಶೆಡ್‍ನ್ನು ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರಿಸಲು ರೈಲ್ವೆ ಇಲಾಖೆ ಸಿದ್ಧ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಸಂಸದ ಪಿ.ಸಿ.ಮೋಹನ್, ನನ್ನ ಕ್ಷೇತ್ರ ವೈಟ್‍ಫೀಲ್ಡ್‍ನಲ್ಲಿ ಗೂಡ್‍ಶೆಡ್ ಮತ್ತು ಕಂಟೈನರ್ ಜಾಗ ಇದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಲಾರಿಗಳು ಸಂಚರಿಸುತ್ತವೆ. ಐಟಿ ಹಬ್ ಆಗುತ್ತಿರುವ ವೈಟ್‍ಫೀಲ್ಡ್‍ನಲ್ಲಿ ಇದರಿಂದ ಸಂಚಾರ ದಟ್ಟಣೆ ತೀವ್ರಗೊಂಡಿದೆ. ಅದನ್ನು ಹೊಸಕೋಟೆಗೆ ಸ್ಥಳಾಂತರಿಸಿದರೆ ಬೆಂಗಳೂರಿನ ಸಂಚಾರ ದಟ್ಟಣೆ ಅರ್ಧಕ್ಕರ್ಧ ಕಡಿಮೆಯಾಗಲಿದೆ ಎಂದು ಹೇಳೀದರು.

ಮುಂದಿನ ದಿನಗಳಲ್ಲಿ ಸಬರ್ಬನ್ ರೈಲು ನಿಲ್ದಾಣ ಸೇರಿದಂತೆ ಹಲವಾರು ಸೌಲಭ್ಯಗಳಿಗೆ ಹೊಸಕೋಟೆ ಬಳಿ ರಾಜ್ಯ ಸರ್ಕಾರ 300 ಎಕರೆ ಜಾಗ ಒದಗಿಸಬೇಕಿದೆ ಎಂದು ಅವರು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ