ಉಗ್ರರ ದಾಳಿ ಭೀತಿ: ಅಯೋಧ್ಯೆಯಲ್ಲಿ ಹೈ ಅಲರ್ಟ್!

ಅಯೋಧ್ಯೆಉತ್ತರಪ್ರದೇಶದಲ್ಲಿರುವ ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಭದ್ರತಾ ಏಜೆನ್ಸಿಗಳು ಮತ್ತು ಗುಪ್ತಚರ ಇಲಾಖೆ ಉಗ್ರರು ದಾಳಿ ನಡೆಯುವ ಸಾಧ್ಯತೆಯಿದೆ ಎಂದು  ಮುನ್ಸೂಚನೆ ನೀಡಿದ ಬೆನ್ನಲ್ಲೇ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಗುಪ್ತಚರ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಉಗ್ರರು ನೇಪಾಳದಿಂದ ಉತ್ತರಪ್ರದೇಶವನ್ನು ತಲುಪುವ ಸಾಧ್ಯತೆಯಿದ್ದು, ಸಾರ್ವಜನಿಕ ಸ್ಥಳಗಳು, ರೈಲು ನಿಲ್ದಾಣಗಳು ಮತ್ತು ಬಸ್ಸುಗಳನ್ನು ಗುರಿಯಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬೆನ್ನಲ್ಲೇ ಅಯೋಧ್ಯೆಗೆ ಬರುವ ಎಲ್ಲಾ ವಾಹನಗಳು, ಅಲ್ಲಿನ ಹೋಟೆಲ್ ಮತ್ತು ಅತಿಥಿ ಗೃಹಗಳ ತಪಾಸಣೆ ನಡೆಸಲಾಗುತ್ತಿದೆ.

ಗಣ್ಯರು ವಾರಾಂತ್ಯದಲ್ಲಿ ರಾಮಮಂದಿರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಭಾನುವಾರ ಶಿವಸೇನೆಯ 18 ಸಂಸದರೊಂದಿಗೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಮಮದಿರಕ್ಕೆ ಭೇಟಿ ನೀಡಲಿದ್ದಾರೆ. ಮತ್ತೊಂದೆಡೆ ವಿಎಚ್‌ಪಿ ಶನಿವಾರ ರಾಮ್‌ಜನ್ಮಭೂಮಿ ನ್ಯಾಯಾಸ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ 81 ನೇ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದೆ.

ಈಗಾಗಲೇ ಭಯೋತ್ಪಾದಕರ ಇರುವಿಕೆ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲ್ಲಾಗಿದ್ದು, ಆ ವರದಿಯಲ್ಲಿ ಲಷ್ಕರ್-ಎ-ತೊಯ್ಬಾ ಸೇರಿದಂತೆ ಇತರ ಸಂಘಟನೆಗಳು ಉತ್ತ್ರಪ್ರದೆಶ್ದ ಫೈಜಾಬಾದ್ ಮತ್ತು ಗೋರಖ್’ಪುರದಲ್ಲಿ ರಹಸ್ಯವಾಗಿ ತಮ್ಮ ನೆಲೆಗಳನ್ನು ಸ್ಥಾಪಿಸುತ್ತಿವೆ. ಈ ನಗರಗಳಲ್ಲಿ ಭಯೋತ್ಪಾದಕ ನೆಲೆಗಳನ್ನು ಸ್ಥಾಪಿಸುವ ಮತ್ತು ಯುವಕರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಮೊಹಮ್ಮದ್ ಉಮರ್ ಮಡ್ನಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2005 ಉಗ್ರ ದಾಳಿ ಸಂಚಿನ ಪ್ರಕರಣದ ತೀರ್ಪು ಜೂನ್‌ 18 ರಂದು ಪ್ರಕಟವಾಗಲಿದೆ. 2005 ಜೂನ್‌ 5 ರಂದು ಅಯೋಧ್ಯೆಯಲ್ಲಿ ಉಗ್ರ ದಾಳಿ ಸಂಚನ್ನು ವಿಫ‌ಲಗೊಳಿಸಲಾಗಿತ್ತು. ಐವರು ಉಗ್ರರನ್ನು ಹತ್ಯೆಗೈದು, ನಾಲ್ವರು ಕಾಶ್ಮೀರಿ ಯುವಕರನ್ನು ಬಂಧಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ