ತಪ್ಪಿತು ಮಹಾ ದುರಂತ; ಭಾರತೀಯ ಸೈನಿಕರ ಬಸ್​ ಸ್ಫೋಟಿಸಲು ದೂರವಾಣಿ ಮೂಲಕವೇ ಬಂದಿತ್ತು ಆದೇಶ!

ನವದೆಹಲಿ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಸೈನಿಕರು ಸಂಚಾರ ನಡೆಸುತ್ತಿದ್ದ ಬಸ್​ ಸ್ಫೋಟಿಸುವ ವಿಫಲ ಪ್ರಯತ್ನವೊಂದು ನಡೆದಿತ್ತು. ಆತ್ಮಾಹುತಿ ದಾಳಿ ಮೂಲಕ ಸೈನಿಕರನ್ನು ಹತ್ಯೆ ಮಾಡಲು ಮುಂದಾಗಿದ್ದ ಉಗ್ರನನ್ನು ಪೊಲೀಸರು ಬಂಧಿಸಿದ್ದು, ಆತಂಕಕಾರಿ ವಿಚಾರವೊಂದನ್ನು ಹೇಳಿಕೊಂಡಿದ್ದಾನೆ.

ಸೈನಿಕರು ಸಂಚಾರ ನಡೆಸುತ್ತಿದ್ದ ಬಸ್​ಗೆ ಕಾರನ್ನು ಗುದ್ದಿಸುವುದು ಈತನ ಟಾಸ್ಕ್​​ ಆಗಿತ್ತು. ಅಷ್ಟೇ ಅಲ್ಲ, ಈ ವೇಳೆ ಆತನಿಗೆ ಕೊಟ್ಟಿದ್ದ ಮಷಿನ್​ ಒಂದರ ಬಟನ್​ ಒತ್ತಬೇಕಿತ್ತಂತೆ. “ಸೈನಿಕರು ಸಂಚಾರ ಮಾಡುತ್ತಿದ್ದ ವಾಹನ ಸ್ಫೋಟಿಸುವಂತೆ ನನಗೆ ದೂರವಾಣಿ ಮೂಲಕ ಆದೇಶ ಬಂತು. ಅವರು ನೀಡಿದ್ದ ಕಾರನ್ನು ತೆಗೆದುಕೊಂಡು ಹೋಗಿ ಬಸ್​ಗೆ ಗುದ್ದುವುದು ನನ್ನ ಟಾಸ್ಕ್​ ಆಗಿತ್ತು. ಅಂತೆಯೇ ಬಸ್​ಗೆ ಕಾರನ್ನು ಗುದ್ದಲು ಪ್ರಯತ್ನಿಸಿದೆ. ಬಟನ್ ಕೂಡ​ ಒತ್ತಿದೆ,” ಎಂದಿದ್ದಾನೆ ಬಂಧಿತ ಉಗ್ರ ಓವೈಸ್​ ಅಮಿನ್​.

ಜವಾಹಾರ್​ ಸುರಂಗದ ಸಮೀಪ ಕಾರು ಸ್ಫೋಟಗೊಂಡಿತ್ತು. ಸೈನಿಕರು ಸಂಚಾರ ಮಾಡುತ್ತಿದ್ದ ಬಸ್​ ಹಾದು ಹೋದ ಕೆಲವೇ ಕ್ಷಣಗಳಲ್ಲಿ ಈ ಸ್ಫೋಟ ಸಂಭವಿಸಿದೆ. ಹಾಗಾಗಿ, ಬಸ್​ಗೆ ಜಾಸ್ತಿ ಹಾನಿ ಉಂಟಾಗಿಲ್ಲ. ಕಾರು ಸ್ಫೋಟಗೋಳ್ಳುವುದಕ್ಕೂ ಮೊದಲು ಉಗ್ರ ಕಾರಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದ. ಹಾಗಾಗಿ, ಆತನನ್ನು ಬಂಧಿಸಲಾಗಿದೆ.

ಉಗ್ರನ ಬಳಿ ಇದ್ದ ದಾಖಲೆಗಳಿಂದ ಆತ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಪುಲ್ವಾಮಾದಲ್ಲಿ ನಡೆದ ದಾಳಿ ಮಾದರಿಯಲ್ಲೇ ಈ ದಾಳಿ ನಡೆಸುವುದು ಆತನ ಉದ್ದೇಶವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ