ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡರ ವಿರುದ್ಧ ಕೃಷ್ಣ ಬೈರೇಗೌಡ

ಬೆಂಗಳೂರುಕಾಂಗ್ರೆಸ್​-ಜೆಡಿಎಸ್​ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ನಂತರ ಇತ್ತೀಚೆಗಷ್ಟೇ ಎರಡೂ ಪಕ್ಷಗಳು ಲೋಕಸಭೆ ಸೀಟುಗಳನ್ನು ಹಂಚಿಕೆ ಮಾಡಿಕೊಂಡವು. ಕಾಂಗ್ರೆಸ್​ಗೆ 20 ಕ್ಷೇತ್ರ ಮತ್ತು ಜೆಡಿಎಸ್​ಗೆ 8 ಕ್ಷೇತ್ರಗಳು ಎಂದು ಎರಡೂ ಪಕ್ಷಗಳ ಮುಖಂಡರು ನಿರ್ಣಯಿಸಿದರು. ಆದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯ ಕೊರತೆಯಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್​ಗೆ ಮತ್ತೊಂದು ಕ್ಷೇತ್ರವನ್ನು ಜೆಡಿಎಸ್​ ಬಿಟ್ಟುಕೊಡುವಂತಾಯ್ತು.

ಒಂದು ಕ್ಷೇತ್ರ ಹೆಚ್ಚುವರಿಯಾಗಿ ಸಿಕ್ಕ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್​ ಶಾಸಕರು ಸಭೆ ನಡೆಸಿದರು.

ಸಿದ್ದರಾಮಯ್ಯ ಅವರ ನಿವಾಸದಲ್ಲಿ ಇವತ್ತು ನಡೆದ ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಹೆಸರು ಅಂತಿಮವಾಗಿದೆ.  ಕಾಂಗ್ರೆಸ್​ನ ಎಲ್ಲಾ ಶಾಸಕರೂ ಕೃಷ್ಣ ಭೈರೇಗೌಡರ ಹೆಸರನ್ನೇ ಶಿಫಾರಸು ಮಾಡಿದ್ದು, ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಿದರು. ಕೃಷ್ಣ ಭೈರೇಗೌಡರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿಲ್ಲ ಎಂದು ಹಿಂದೇಟು ಹಾಕಿದರೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಭೆಯಲ್ಲಿ ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಡಿಕೆ ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.

ಕೃಷ್ಣ ಬೈರೇಗೌಡರು ಉತ್ತರದಲ್ಲಿ ಅಭ್ಯರ್ಥಿಯಾಗುವುದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ನಾಳೆ ಬೈರೇಗೌಡರು ನಾಮಪತ್ರ ಸಲ್ಲಿಸಲಿದ್ದಾರೆ.

ಉತ್ತರ ಕ್ಷೇತ್ರಕ್ಕೆ ಬಿ.ಎಲ್​. ಶಂಕರ್​ ಅವರ ಹೆಸರೂ ಕೇಳಿ ಬರುತ್ತಿತ್ತು. ಆದರೆ ಸೋಮವಾರ ಎಮ್​.ಆರ್​. ಸೀತಾರಾಮ್​ ಅವರ ಮಗ ರಕ್ಷಾ ರಾಮಯ್ಯ ಅವರೂ ಟಿಕೆಟ್​ಗಾಗಿ ಯತ್ನ ಆರಂಭಿಸಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ರಕ್ಷಾ ರಾಮಯ್ಯ ಅಖಿಲ ಭಾರತ ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳ ಇನ್​ಚಾರ್ಜ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಯೂತ್​ ಕಾಂಗ್ರೆಸ್​ನಲ್ಲಿ ಉತ್ತಮವಾದ ಹೆಸರು ಗಳಿಸಿದ್ದಾರೆ. ಇದನ್ನೇ ಮಾನದಂಡವಾಗಿಸಿಕೊಂಡು ರಕ್ಷಾ ರಾಮಯ್ಯ ಅವರನ್ನು ಚುನಾವಣೆ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಯುವ ಕಾಂಗ್ರೆಸ್​ ನಾಯಕರು ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ