ದುಷ್ಕರ್ಮಿಗಳಿಂದ ರೌಡಿಯ ಬರ್ಬರ ಕೊಲೆ

ತುಮಕೂರು, ಮಾ.7- ಬೈಕ್‍ನಲ್ಲಿ ಹೋಗುತ್ತಿದ್ದ ರೌಡಿ ಶೀಟರ್‍ನನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿದ ಗುಂಪೋoದು ಮನಬಂದಂತೆ ಚಾಕುವಿನಿಂದ ಇರಿದು ನಡುರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಿಲಕ್‍ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸದಾಶಿವನಗರದ ನಿವಾಸಿ ಅಜ್ಗರ್ ಅಲಿಯಾಸ್ ಅಜ್ಜು (32) ಕೊಲೆಯಾದ ರೌಡಿಶೀಟರ್.

ಆಟೋಚಾಲಕ ವೃತ್ತಿ ಮಾಡುತ್ತಿದ್ದ ಅಜ್ಗರ್ ಅನಾರೋಗ್ಯದ ನಿಮಿತ್ತ ಇಂದು ಬೆಳಗ್ಗೆ 10.30ರಲ್ಲಿ ಆಸ್ಪತ್ರೆಗೆ ತೆರಳಿ ಬೈಕ್‍ನಲ್ಲಿ ಮನೆಗೆ ಹಿಂದಿರುಗುತ್ತಿದ್ದನು. ಈ ವೇಳೆ ಮೂರು ಬೈಕ್‍ಗಳಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಕುಣಿಗಲ್ ರಸ್ತೆಯ ಸ್ಮಶಾನದ ಬಳಿ ಬೈಕ್ ಅಡ್ಡಗಟ್ಟಿ ಕೆಳಗೆ ಬೀಳಿಸಿ ಪೈಪ್‍ಗಳಿಂದ ಹಲ್ಲೆ ನಡೆಸಿ ನಡುರಸ್ತೆಯಲ್ಲೇ ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ನೋಡ ನೋಡುತ್ತಿದ್ದಂತೆ ವ್ಯಕ್ತಿಯನ್ನು ಕೊಲೆ ಮಾಡಿದ್ದನ್ನು ಕಂಡ ದಾರಿಹೋಕರು ಒಂದು ಕ್ಷಣ ನಿಬ್ಬೆರಗಾದರು.

ಸುದ್ದಿ ತಿಳಿದ ಜಯನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ನವೀನ್, ತಿಲಕ್‍ಪಾರ್ಕ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್‍ಪಿ ತಿಪ್ಪೆಸ್ವಾಮಿ, ವೃತ್ತ ನಿರೀಕ್ಷಕ ರಾಧಾಕೃಷ್ಣ ಭೇಟಿ ನೀಡಿದ್ದರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಎಸ್‍ಪಿ, ಘಟನೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಹಳೆ ದ್ವೇಷದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ