ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆ-ಹಿರಿಯ ಅಧಿಕಾರಗಳ ತುರ್ತು ಸಭೆ ಕರೆದ ಗೃಹ ಸಚಿವ

ನವದೆಹಲಿ, ಫೆ.27- ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿರುವುದರಿಂದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.

ಇಂದು ಬೆಳಗ್ಗೆ ಪಾಕಿಸ್ತಾನಕ್ಕೆ ಸೇರಿದ ಎಫ್16 ಯುದ್ಧ ವಿಮಾನವನ್ನು ಗಡಿನಿಯಂತ್ರಣ ರೇಖೆ ಬಳಿ ಇರುವ ಲಾಮಾ ವ್ಯಾಲಿ ಎಂಬಲ್ಲಿ ಹೊಡೆದುರುಳಿಸಿತು.

ಈ ಬೆನ್ನಲ್ಲೇ ರಾಜನಾಥ್ ಸಿಂಗ್ ಹಿರಿಯ ಅಧಿಕಾರಿಗಳ ಸಭೆ ಕರೆದು ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭೂಸೇನೆ, ವಾಯುಸೇನೆ, ನೌಕಾಪಡೆ, ಗುಪ್ತಚರ ವಿಭಾಗ, ರಾ ವಿಭಾಗ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಪರಿಸ್ಥಿತಿ ಬಗ್ಗೆ ಪರಾಮರ್ಶಿಸಿದರು.

ಪಾಕ್‍ಗೆ ಎಫ್16 ಯುದ್ಧ ವಿಮಾನ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿತು. ಇನ್ನೊಂದೆಡೆ ಬುದ್ಗಾವ್‍ನಲ್ಲಿ ಎಂ-17 ಸರಕು ಸಾಗಾಣಿಕೆ ವಿಮಾನ ತಾಂತ್ರಿಕ ಕಾರಣದಿಂದ ಸ್ಫೋಟಗೊಂಡು ಇಬ್ಬರು ಪೈಲೆಟ್‍ಗಳು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ.

ಈ ವಿಮಾನವನ್ನು ನಾವೇ ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಹೀಗಾಗಿ ಕಣಿವೆ ರಾಜ್ಯದ ಪರಿಸ್ಥಿತಿ ಕುರಿತಂತೆ ಅಧಿಕಾರಿಗಳ ಜೊತೆ ರಾಜನಾಥ್ ಸಿಂಗ್ ಮಾಹಿತಿ ಪಡೆದಿದ್ದಾರೆ.

ಇತ್ತ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಕೂಡ ಮೂರು ಪಡೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಭದ್ರತೆ ಬಗ್ಗೆ ಮಾಹಿತಿ ಪಡೆದರು.

ರಕ್ಷಣಾ ಪಡೆಯ ಎಲ್ಲ ಪೈಲೆಟ್‍ಗಳು ಸನ್ನದ್ಧವಾಗಿರಬೇಕು. ರಜೆ ತೆಗೆದುಕೊಂಡಿರುವ ಸೈನಿಕರಿಗೂ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಇನ್ನು ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಧಾವೋಲ್ ಕ್ಷಣ ಕ್ಷಣಕ್ಕೂ ಮಾಹಿತಿಯನ್ನು ರವಾನಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ