ಮುಖ್ಯಮಂತ್ರಿಯವರು ಬಜೆಟ್ ಪುಸ್ತಕವನ್ನು ಓದಿದ ನಂತರ ಶಾಸಕರಿಗೆ ಪ್ರತಿಗಳ ವಿತರ: ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಫೆ.7-ಬಜೆಟ್ ಮಂಡನೆ ಕಾರ್ಯಕಲಾಪದ ವೇಳೆ ಲೋಕಸಭೆಯ ಮಾದರಿಯನ್ನೇ ಅನುಸರಿಸಲು ಮುಂದಾಗಿರುವ ವಿಧಾನಸಭೆಯ ಅಧ್ಯಕ್ಷರು, ಮುಖ್ಯಮಂತ್ರಿಯವರು ಬಜೆಟ್ ಭಾಷಣದ ಪೂರ್ತಿ ಪ್ರತಿ ಓದಿ ಮುಗಿಸುವವರೆಗೂ ಬಜೆಟ್ ಪುಸ್ತಕಗಳನ್ನು ಶಾಸಕರಿಗೆ ನೀಡದಿರುವ ನಿರ್ಧಾರ ಮಾಡಿದ್ದಾರೆ.

ಇಂದು ಬೆಳಗ್ಗೆ ಈ ಬಗ್ಗೆ ಎಲ್ಲಾ ಶಾಸಕರಿಗೂ ಸುತ್ತೋಲೆ ಕಳುಹಿಸಲಾಗಿದ್ದು, ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಜೆಟ್ ಪುಸ್ತಕವನ್ನು ಪೂರ್ತಿಯಾಗಿ ಓದಿ ಮುಗಿಸಿದ ನಂತರ ಶಾಸಕರಿಗೆ ಪ್ರತಿಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಮಾದರಿಯನ್ನು ಲೋಕಸಭೆಯಲ್ಲಿ ಅನುಸರಿಸಲಾಗುತ್ತಿದೆ.ಅದೇ ಪದ್ದತಿಗಳನ್ನು ರಾಜ್ಯ ವಿಧಾನಸಭೆಯಲ್ಲೂ ಆಚರಣೆಗೆ ತರಲು ಸ್ಪೀಕರ್ ರಮೇಶ್‍ಕುಮಾರ್ ನಿರ್ಧರಿಸಿದ್ದು, ವಿಧಾನಪರಿಷತ್‍ನಲ್ಲೂ ಇದೇ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗಿದೆ.

ಈವರೆಗಿನ ಸಂಪ್ರದಾಯದಂತೆ ಹಣಕಾಸು ಸಚಿವರು ಬಜೆಟ್ ಓದಲು ಆರಂಭಿಸುತ್ತಿದ್ದಂತೆ ಬಜೆಟ್‍ನ ಪ್ರತಿಗಳನ್ನು ಶಾಸಕರಿಗೆ ಮತ್ತು ಮಾಧ್ಯಮದವರಿಗೆ ನೀಡಲಾಗುತ್ತಿತ್ತು. ಹಣಕಾಸು ಸಚಿವರು ಬಜೆಟ್ ಓದುತ್ತಿದ್ದಂತೆ ಬಜೆಟ್ ಪುಸ್ತಕವನ್ನು ಓದಿಕೊಂಡು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತಿತ್ತು. ಇದೇ ಮೊದಲ ಬಾರಿ ಹೊಸ ಸಂಪ್ರದಾಯ ಹುಟ್ಟು ಹಾಕುವ ಮೂಲಕ ಬಜೆಟ್ ಭಾಷಣ ಕೇಳುವ ಅವಕಾಶ ಮಾಡಿಕೊಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ