ಕದ್ದ ಸೈಕಲ್‍ಗಳನ್ನು ಮಾರಾಟ ಮಾಡುತ್ತಿದ್ದ ಕಳ್ಳನನ್ನು ಬಂಧಿಸಿದ ಪೊಲೀಸರು

ಮೈಸೂರು, ಫೆ.5- ಕಳ್ಳತನ ಮಾಡಿದ್ದ ಸೈಕಲ್ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಳ್ಳನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳು ನಿವಾಸಿ ವೆಂಕಟೇಶ್ (30) ಬಂಧಿತ ಆರೋಪಿ.

ಈತ ಮೂಲತಃ ಹಾಸನ ಜಿಲ್ಲೆ ಹಳ್ಳಿ ಕಟ್ಟೆ ಗ್ರಾಮದ ನಿವಾಸಿಯಾಗಿದ್ದು , ಕಳೆದ ಆರು ತಿಂಗಳಿನಿಂದ ವಿಜಯನಗರ ಹಾಗೂ ನಗರದ ವಿವಿಧೆಡೆ ಮನೆ ಮುಂದೆ ಹಾಗೂ ಕಾಂಪೌಂಡ್‍ಗಳಲ್ಲಿ ನಿಲ್ಲಿಸುತ್ತಿದ್ದ ಸೈಕಲ್‍ಗಳನ್ನು ಕದ್ದು ಪರಾರಿಯಾಗುತ್ತಿದ್ದನು.

ಹೆಬ್ಬಾಳದ ಸೂರ್ಯ ಬೇಕರಿ ಬಳಿ ವೆಂಕಟೇಶ್ ಕದ್ದ ಸೈಕಲ್ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

ಬಂಧಿತನಿಂದ ಎರಡು ಲಕ್ಷ ರೂ. ಮೌಲ್ಯದ 19 ಸೈಕಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಎನ್.ಆರ್.ವಿಭಾಗದ ಎಸಿಪಿ ಗೋಪಾಲ್ ನೇತೃತ್ವದಲ್ಲಿ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್, ಎಎಸ್‍ಐ ವೆಂಕಟೇಶ್‍ಗೌಡ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ