ಏಕಶ್ರೇಣಿ ಏಕ ಪಿಂಚಣಿ ಯೋಜನೆ, ರಕ್ಷಣಾ ವಲಯಕ್ಕೆ ಆದ್ಯತೆ; ಬಜೆಟ್​​ನಲ್ಲಿ ಭರ್ಜರಿ ಅನುದಾನ

ನವದೆಹಲಿ : ಕೇಂದ್ರ ಎನ್​​ಡಿಎ ಸರ್ಕಾರದ ಕೊನೆಯ ಹಾಗೂ ಮಧ್ಯಂತರ ಬಜೆಟ್​ನಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಕ್ಷಣಾ ಇಲಾಖೆಗೆ ಬರೋಬ್ಬರಿ 3 ಲಕ್ಷ ಕೋಟಿ ಮೀಸಲಿಡಲಾಗಿದೆ. ಅಲ್ಲದೇ ಏಕಶ್ರೇಣಿ ಏಕ ಪಿಂಚಣಿ(OROP) ಯೋಜನೆಗೆ 35 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ.

ಯೋಧರ ನಾಲ್ಕು ದಶಕದ ಬೇಡಿಕೆಗೆ ಸ್ಪಂದಿಸಿ (OROP) ಜಾರಿಗೊಳಿಸಿದ್ದ ಸರ್ಕಾರ ಬಜೆಟ್​ನಲ್ಲಿ ಬಾರಿ ಅನುದಾನ ಮೀಸಲಿಟ್ಟು ಸೈನಿಕರ ನಿವೃತ್ತಿ ಜೀವನಕ್ಕೆ ನೆರವಾಗಲು ಮುಂದಾಗಿದೆ. ಸಧ್ಯ ಭಾರತ ಜಾಗತಿಕ ಮಟ್ಟದಲ್ಲಿ ರಕ್ಷಣಾ ಇಲಾಖೆಗೆ ಅತಿ ಹೆಚ್ಚು ವ್ಯಯಿಸುವ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಎನ್​​ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಭದ್ರತೆಯ ವಿಷಯದಲ್ಲಿ ಸರ್ಕಾರ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿತ್ತು. ಇದೀಗ ಬಜೆಟ್​​ನಲ್ಲಿ ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿ ಮೀಸಲಿಟ್ಟಿರುವುದರಿಂದ ಶಸ್ತಾಸ್ತ್ರ ಆಧುನೀಕರಣ, ಗಡಿ ತಡೆಗೋಡೆ ನಿರ್ಮಿಸಲು  ಉಪಯೋಗವಾಗಲಿದೆ. ಕಾಶ್ಮೀರ ಭಾಗದಲ್ಲಿ ಪಾಕ್ ಉಗ್ರರ ಒಳನುಸುಳುವಿಕೆ ತಡೆಗಟ್ಟಲು ಸಹಕಾರಿಯಾಗಲಿದೆ.ಜೊತೆಗೆ ಚೀನಾ ಹಾಗೂ ಬಾಂಗ್ಲಾದೇಶದ ಗಡಿ ಪ್ರದೇಶದಲ್ಲಿ ಸೋಲಾರ್ ತಂತಿಬೇಲಿ, ಹೆಲಿಪ್ಯಾಡ್​​, ರಡಾರ್​ ನಿರ್ಮಾಣದಂತಹ ಕಾರ್ಯಗಳಿಗೆ ನೆರವಾಗಲಿದೆ. ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ರಸ್ತೆ ಹಾಗೂ ಮೂಲಸೌಲಭ್ಯ ನಿರ್ಮಿಸಲು ಇದರಿಂದ ನೆರವಾಗಲಿದೆ. ವಿದೇಶದಿಂದ ಶಸ್ತಾಸ್ತ್ರ ಆಮದು ಕಡಿತಗೊಳಿಸಿ, ದೇಶದಲ್ಲೇ ಶಸ್ತಾಸ್ತ್ರ ನಿರ್ಮಿಸಲು ಉತ್ತೇಜನ ನೀಡಲು ಬಜೆಟ್​ ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ