ತೆಲಂಗಾಣ, ರಾಜಸ್ತಾನದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ: ನಾಳೆ ಮತದಾನ

ಬೆಂಗಳೂರುದೇಶದಲ್ಲಿಯೇ ಪಂಚರಾಜ್ಯ ಚುನಾವಣೆಗಳ ಪೈಕಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ತೆಲಂಗಾಣ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಒಂದು ದಿನ ಬಾಕಿ ಉಳಿದಿದೆ. ಉಭಯ ರಾಜ್ಯಗಳಲ್ಲಿ ಈಗಾಗಲೇ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಡಿಸೆಂಬರ್ 7ರಂದು ಚುನಾವಣೆ ನಡೆಯಲಿದ್ದು, ಇದೇ ತಿಂಗಳ ಡಿ.11 ರಂದು ಚುನಾವಣಾ ಫಲಿತಾಂಶವೂ ಕೂಡ ಹೊರಬೀಳಲಿದೆ. ಅಲ್ಲದೇ ಈ ಸಂದರ್ಭದಲ್ಲಿಯೇ ಅಭ್ಯರ್ಥಿಗಳ ಭವಿಷ್ಯ ಗೊತ್ತಾಗಲಿದೆ.

ಇತ್ತ ರಾಜಸ್ಥಾನದಲ್ಲಿ ಬಿಜೆಪಿ, ಅತ್ತ ತೆಲಂಗಾಣದಲ್ಲಿ ಕಾಂಗ್ರೆಸ್​ ಅಬ್ಬರದ ಪ್ರಚಾರ ನಡೆಸಿವೆ. ಇಂದೂ ಕೂಡ ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಾಲುಸಾಲು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಜೊತೆಗೆ ಕಾಂಗ್ರೆಸ್​ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದೆಡೆ ತೆಲಂಗಾಣದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ.

ಎರಡೂ ರಾಜ್ಯದಲ್ಲಿಯೂ ಡಿಸೆಂಬರ್ 7 ಶುಕ್ರವಾರದಂದು ಚುನಾವಣೆ ನಡೆಯಲಿದೆ. ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೊದಲಿಗೆ ಸಿಎಂ ಕೆಸಿಆರ್ ನೇತೃತ್ವದ ಸಂಪುಟ ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ತೀರ್ಮಾನ ಕೈಗೊಂಡಿತ್ತು. ಅದಾದ ಬಳಿಕ ಚಂದ್ರಶೇಖರ್ ರಾವ್ ಅವರು ರಾಜ್ಯಪಾಲ ಇಎಸ್​ಎಲ್ ನರಸಿಂಹನ್ ಅವರನ್ನು ಭೇಟಿಯಾಗಿ ಈ ಕುರಿತು ಮಾಹಿತಿ ನೀಡಿದ್ದರು. ಬಳಿಕ ಸಿಎಂ ಪ್ರಸ್ತಾವನೆಗೆ ರಾಜ್ಯಪಾಲರೂ ಒಪ್ಪಿಕೊಂಡಿದ್ದು, ವಿಧಾನಸಭೆಯನ್ನು ಅಧಿಕೃತವಾಗಿ ವಿಸರ್ಜಿಸಿದರು.ಕಳೆದ 2014ರ ಚುನಾವಣೆಯಲ್ಲಿ ಕೆ.ಚಂದ್ರಶೇಖರರಾವ್ ನೇತೃತ್ವದ ಟಿಆರ್‌ಎಸ್ 63 ಕ್ಷೇತ್ರಗಳಲ್ಲಿ ಗೆದ್ದಿತ್ತು. 119 ಕ್ಷೇತ್ರಗಳ ಪೈಕಿ 63 ಗೆಲ್ಲುವ ಮೂಲಕ ಬಹುಮತ ಪಡೆದು ಸರ್ಕಾರ ರಚನೆ ಮಾಡಿತ್ತು. ಆದರೆ, ಇದೀಗ ಅವಧಿಗೂ ಮೊದಲೇ ವಿಧಾನಸಭೆಯನ್ನು ವಿಸರ್ಜನೆ ಮಾಡಲಾಗಿದೆ. ಸಿಎಂ ಚಂದ್ರಶೇಖರರಾವ್ ಆಶಯದಂತೆಯೇ ತೆಲಂಗಾಣ ಚುನಾವಣೆ ನಡೆಯುತ್ತಿದೆ ಎನ್ನಲಾಗಿದೆ.

ಇನ್ನೊಂದೆಡೆ ರಾಜಸ್ಥಾನದಲ್ಲಿ 200 ವಿಧಾನಸಭಾ ಕ್ಷೇತ್ರಗಳಿಗೆ ಇದೇ ತಿಂಗಳು ಡಿಸೆಂಬರ್ 7ರಂದೇ ಚುನಾವಣೆ ನಡೆಯಲಿದೆ. ಕಳೆದ 2013ರಲ್ಲಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಯಾರು ಗೆಲ್ಲಲಿದ್ದಾರೆ ಎಂಬುದು ಫಲಿತಾಂಶದ ದಿನ ಡಿಸೆಂಬರ್ 11ರಂದೇ ಗೊತ್ತಾಗಲಿದೆ.

ರಾಜಸ್ಥಾನ ಮತ್ತು ತೆಲಂಗಾಣ ಎರಡು ರಾಜ್ಯಗಳಲ್ಲಿಯೂ ಘಟಾನುಘಟಿ ನಾಯಕರು ಭಾರೀ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿಗಳ ಪರವಾಗಿ ಮತಯಾನೆಯೂ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ 15ಕ್ಕೂ ಅಧಿಕ ಸಮಾವೇಶ ನಡೆಸಿದ್ದಾರೆ. ಇದಕ್ಕೆ ಅಮಿತ್ ಶಾ, ಯೋಗಿ ಆದಿತ್ಯನಾಥ್ ಅವರು ಕೂಡ ಕೈಜೋಡಿಸಿದ್ದಾರೆ. ಅಲ್ಲದೇ ತೆಲಂಗಾಣದಲ್ಲಿ ಕಾಂಗ್ರೆಸ್‌ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಕೂಡ ಕಾಂಗ್ರೆಸ್​ ಬಹುತೇಕ ಲಕ್ಷಣಗಳಿದ್ದೂ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಂಟಿಯಾಗಿ ಪ್ರಚಾರ ನಡೆಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ