ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ನಮಗೆ ಸಮಯವನ್ನು ನೀಡುತ್ತಿಲ್ಲ, ರಾಜ್ಯ ಜಿಲ್ಲಾ ಪಂಚಾಯತ್ ಸದಸ್ಯರ ಒಕ್ಕೂಟದ ಆಕ್ರೋಶ

ಬೆಂಗಳೂರು, ನ.22-ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಇಲಾಖೆ ಸಚಿವರು ನಮಗೆ ಸಮಯವನ್ನೇ ನೀಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಜಿಲ್ಲಾ ಪಂಚಾಯತ್ ಸದಸ್ಯರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಜಿ.ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷ ಕೆರೆಹಳ್ಳಿ ನವೀನ ಅವರು, ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಜೊತೆ ಮಾತುಕತೆ ನಡೆಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಜಿ.ಪಂ. ಅಧ್ಯಕ್ಷರು ಮುಖ್ಯಮಂತ್ರಿ ಭೇಟಿಗೆ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಪಂಚಾಯತ್ ರಾಜ್ ವ್ಯವಸ್ಥೆಯ ಬಲವೃದ್ಧಿಗೆ ರಮೇಶ್‍ಕುಮಾರ್ ಅವರ ಸಮಿತಿಯ 2015ರ ವರದಿ ಜಾರಿ ಯಾಗಬೇಕು, ಪ್ರತಿ ಜಿ.ಪಂ. ಕ್ಷೇತ್ರವಾರು ಅನುದಾನ ಹಂಚಿಕೆಯಾಗಬೇಕು, ಜಿ.ಪಂ. ಕ್ಷೇತ್ರ ಸ್ಥಾನದಲ್ಲಿ ಕಚೇರಿ ತೆರೆಯಬೇಕು, ಪ್ರತಿ ಜಿ.ಪಂ. ಕ್ಷೇತ್ರ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ನೀಡಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನುಭವಿ ಆಯ್ಕೆ ಸಮಿತಿಯಲ್ಲಿ ಜಿ.ಪಂ. ಸದಸ್ಯರು ಸದಸ್ಯರಾಗಿರಬೇಕು, ಬೆಂಗಳೂರಿನಲ್ಲಿ ಪಂಚಾಯತ್ ರಾಜ್‍ಭವನ ನಿರ್ಮಿಸಬೇಕು ಎಂಬ ಸುಮಾರು 15 ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಆದರೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿರಾಜು ಮಾತನಾಡಿ, ಮುಖ್ಯಮಂತ್ರಿ ಕಾರ್ಯಾಲಯದ ರಘು ಅವರು ಇಂದು ಬೆಳಗ್ಗೆ ಮನೆಗೆ ಬಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಹೇಳಿದರು. ಅದರಂತೆ ಮನೆಗೆ ಹೋಗಿದ್ದೆವು.ಅಲ್ಲಿ ಭೇಟಿ ಸಾಧ್ಯವಾಗಲಿಲ್ಲ. ಅಲ್ಲಿಂದ ವಿಧಾನಸೌಧಕ್ಕೆ ಬರಲು ಹೇಳಿದರು. ವಿಧಾನಸೌಧದಲ್ಲಿ ಪೆÇಲೀಸರು ಒಳಗೆ ಬಿಡಲು ಒಪ್ಪಲಿಲ್ಲ. ನಮ್ಮ ಗುರುತಿನ ಪತ್ರ ತೋರಿಸಿದರೆ ಬೇರೆಯವರ ಫೆÇೀಟೋ ಹಾಕಿದ್ದೀರ ಎಂದು ಸತಾಯಿಸುತ್ತಾರೆ. ಆಗೂ ಹೀಗೂ ಮಾಡಿ ಒಳ ಹೋದೆವು.ಅಲ್ಲಿ ಕೊಠಡಿಯೊಂದರಲ್ಲಿ ನಮ್ಮ ಕೂರಿಸಿದರು.ಅಲ್ಲಿಗೂ ಮುಖ್ಯಮಂತ್ರಿ ಬರಲಿಲ್ಲ. ನಂತರ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿನ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಅಲ್ಲಿ ಭೇಟಿ ಮಾಡಲು ಹೋದೆವು.ಆದರೆ ಮುಖ್ಯಮಂತ್ರಿಯವರು ನಮಗೆ ಸರಿಯಾಗಿ ಸ್ಪಂದಿಸದೆ ಸಿಟ್ಟಾಗಿ, ನಾನೇನು ಧರ್ಮಾತ್ಮನೇ.ನಿಮ್ಮ ಸಮಸ್ಯೆಗಳ ಚರ್ಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಭೇಟಿ ಮಾಡಿ ಎಂದು ಖಾರವಾಗಿ ಹೇಳಿ ಹೋಗಿದ್ದಾರೆ.

ನಾವು ಚುನಾಯಿತ ಸದಸ್ಯರು.ಜನ ನಮ್ಮನ್ನು ಬಂದು ಕೇಳುತ್ತಾರೆ. 40 ಸಾವಿರ ಜನರಿಗೆ ಒಬ್ಬ ಜಿ.ಪಂ. ಸದಸ್ಯ ಆಯ್ಕೆಯಾಗುತ್ತಾರೆ.ಆದರೆ ಅವರಿಗೆ ಯಾವುದೇ ಅನುದಾನಗಳು ಸಿಗುತ್ತಿಲ್ಲ. ಈ ಹಿಂದೆ ಕೊಡಲಾಗುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಈ ಮೊದಲು ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರು ಪ್ರತಿ ತಿಂಗಳಿಗೊಮ್ಮೆ ನಮ್ಮ ಜೊತೆ ಚರ್ಚೆ ಮಾಡಿ ಸಮಸ್ಯೆ ಕೇಳುತ್ತಿದ್ದರು. ಆದರೆ ಈಗಿನ ಸಚಿವರು ಹಲವಾರು ಬಾರಿ ಮನವಿ ಮಾಡಿ ಪತ್ರ ಬರೆದರೂ ಸ್ಪಂದಿಸಿಲ್ಲ. ಒಂದು ಸಭೆಯನ್ನೂ ಕರೆದಿಲ್ಲ. ಮುಖ್ಯಮಂತ್ರಿಯವರೂ ಭೇಟಿಗೂ ಸಿಗುತ್ತಿಲ್ಲ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.

ಇಂದೇ ನಮಗೆ ಸಿಎಂ ಭೇಟಿಗೆ ಸಮಯ ನೀಡದಿದ್ದರೆ ನೇರವಾಗಿ ನಾವು ಸಾಮಾನ್ಯ ಜನರಂತೆ ಜನತಾ ದರ್ಶನ ಸಾಲಿನಲ್ಲಿ ನಿಂತು ಮುಖ್ಯಮಂತ್ರಿಯವರನ್ನು ಭೇಟಿ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇದಕ್ಕೂ ಮುನ್ನ ಗೃಹ ಕಚೇರಿ ಕೃಷ್ಣಾ ಒಳಗೆ ತಮ್ಮನ್ನು ಬಿಡುತ್ತಿಲ್ಲ ಎಂದು ಜಿ.ಪಂ. ಸದಸ್ಯರು ಗಲಾಟೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ