ಆರ್ಥಿಕ ಸೈಬರ್ ಅಪರಾಧಗಳಿಗೆ ಜಾರ್ಖಂಡ್ ನ ಜಮ್ತಾರ ಗ್ರಾಮ ಭಾರತದ ರಾಜಧಾನಿ: ಡಿವೈಎಸ್‍ಪಿ ಶರತ್

ಬೆಂಗಳೂರು, ಸೆ.29- ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಸೈಬರ್ ಅಪರಾಧಗಳಿಗೆ ನೈಜೀರಿಯ ವಿಶ್ವದ ರಾಜಧಾನಿಯಾಗಿದ್ದರೆ, ಜಾರ್ಖಂಡ್ ರಾಜ್ಯದ ಜಮ್ತಾರ ಗ್ರಾಮ ಭಾರತದ ರಾಜಧಾನಿಯಾಗಿದೆ ಎಂದು ಸೈಬರ್‍ಕ್ರೈಂ ವಿಭಾಗದ ಡಿವೈಎಸ್‍ಪಿ ಶರತ್ ಹೇಳಿದರು.
ನಗರದ ಪೆÇಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಮಹಿಳಾ ಸುರಕ್ಷತೆ ಕುರಿತು ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಸೈಬರ್ ಸೆಕ್ಯೂರಿಟಿ ವಿಷಯ ಕುರಿತು ಮಾತನಾಡಿದ ಅವರು, ಸಾಮಾನ್ಯ ಜನರಿಗೆ ದಿನಕ್ಕೊಮ್ಮೆಯಾದರೂ ವೈಯಕ್ತಿಕ ಖಾತೆಗಳ ಒಟಿಪಿ ಹೇಳುವಂತೆ ಮತ್ತು ಎಟಿಎಂ ಕಾರ್ಡ್ ಬಗ್ಗೆ ಮಾಹಿತಿ ಹೇಳುವಂತೆ ಫೆÇೀನ್ ಕರೆಗಳು ಬರುತ್ತವೆ. ಯಾವುದೇ ಬ್ಯಾಂಕುಗಳು ಈ ರೀತಿಯ ಮಾಹಿತಿ ಕೇಳುವುದಿಲ್ಲ. ಕರೆ ಮಾಡಿದ ವಂಚಕರು ಅನಗತ್ಯವಾದ ಭಯ ಹುಟ್ಟಿಸಿ ಒಟಿಪಿ ಸಂಖ್ಯೆ ಹೇಳುವಂತೆ ಒತ್ತಾಯಿಸುತ್ತಾರೆ. ಸರಿಯಾದ ಮಾಹಿತಿ ಇಲ್ಲದವರು ಒಟಿಪಿಹೇಳಿದಾಕ್ಷಣ ಹಣ ಲಪಟಾಯಿಸುವುದು ಸೇರಿದಂತೆ ಹಲವಾರು ವಂಚನೆಗಳನ್ನು ಮಾಡುತ್ತಾರೆ ಎಂದರು.

ಜಮ್ತಾರ ಅತ್ಯಂತ ಕುಗ್ರಾಮವಾಗಿದ್ದು, ಅದು ಭಾರತದ ಸೈಬರ್ ಅಪರಾಧಗಳ ರಾಜಧಾನಿಯಾಗಿ ಬದಲಾವಣೆಯಾಗಿದೆ. ಅಲ್ಲಿನ ಯುವಕರು ಪ್ರತಿ ದಿನ ಕನಿಷ್ಠ 2ರಿಂದ 3 ಲಕ್ಷ ಇಲ್ಲದೆ ಮನೆಗೆ ಹೋಗುವುದಿಲ್ಲ. ಅಮಾಯಕರಿಗೆ ಕರೆ ಮಾಡಿ ಈ ರೀತಿ ವಂಚನೆ ಮಾಡುವುದು ಅಲ್ಲಿನ ಬಹುತೇಕರ ಉದ್ಯೋಗವಾಗಿದೆ ಎಂದು ಹೇಳಿದರು.

ಜನಸಮಾನ್ಯರು ಯಾರೊಂದಿಗೂ ಒಟಿಪಿಗಳನ್ನು ಹಂಚಿಕೊಳ್ಳಬಾರದು ಮತ್ತು ಆನ್‍ಲೈನ್ ವಹಿವಾಟು ಬಹುತೇಕ ಅಸುರಕ್ಷಿತವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಗಳಾಗುವ ಸಂಭವವಿದೆ. ಈ ಹಿಂದೆ ನೈಜೀರಿಯಾ ಪ್ರಜೆಗಳು ಬೆಂಗಳೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಸಂಚರಿಸಿ ಅಲ್ಲಿರುವ ಎಟಿಎಂಗಳಿಗೆ ಎಟಿಎಂ ಕಾರ್ಡ್‍ಗಳ ದತ್ತಾಂಶ ಸಂಗ್ರಹಿಸುವ ಸಲಕರಣೆಗಳನ್ನು ಅಳವಡಿಸಿದ್ದರು. ಸಂಜೆ ಆ ಸಲಕರಣೆಗಳನ್ನು ವಾಪಸ್ ತೆಗೆದುಕೊಂಡು ಎಲ್ಲಾ ದತ್ತಾಂಶವನ್ನು ರಷ್ಯಾದ ವ್ಯಕ್ತಿಗೆ ಇ- ಮೇಲ್ ಮೂಲಕ ಕಳುಹಿಸಿದ್ದರು. ರಷ್ಯಾದಲ್ಲಿ ಕುಳಿತ ವ್ಯಕ್ತಿ ಈ ದತ್ತಾಂಶ ಆಧರಿಸಿ ನಕಲಿ ಎಟಿಎಂ ಕಾರ್ಡ್‍ಗಳನ್ನು ಸೃಷ್ಟಿಸಿ ನೂರಾರು ಕೋಟಿ ಲಪಟಾಯಿಸಿದ್ದರು. ಈ ರೀತಿಯ ಅಪರಾಧಗಳು ದಿನಕ್ಕೆ ನೂರಾರು ನಡೆಯುತ್ತಿವೆ. ಜನ ಸಾಮಾನ್ಯರು ತಮಗೆ ಅರಿವಿಲ್ಲದಂತೆ ವಂಚನೆಗೊಳಗಾಗುತ್ತಾರೆ. ಹಾಗಾಗಿ ಪ್ರತಿ ಕ್ಷಣ ಆನ್‍ಲೈನ್ ವಹಿವಾಟು ನಡೆಸುವವರು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು.

ಇನ್ನೂ ಕೆಲವರು ಕ್ಯಾಮೆರಾ ಇರುವ ಲ್ಯಾಪ್‍ಟಾಪ್‍ಅನ್ನು ಆನ್‍ಲೈನ್‍ನಲ್ಲಿಟ್ಟು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಹ್ಯಾಕರ್‍ಗಳು ನಿಮಗೇ ಗೊತ್ತಿಲ್ಲದಂತೆ ನಿಮ್ಮ ಆನ್‍ಲೈನ್‍ಗೆ ನುಗ್ಗಿ ಖಾಸಗಿಯಾಗಿ ನಡೆಯುವ ನಿಮ್ಮ ಎಲ್ಲಾ ಚಟುವಟಿಕೆಗಳ ಚಲನವಲನಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ಗಳನ್ನು ಆನ್‍ಲೈನ್‍ನಲ್ಲಿಟ್ಟು ಖಾಸಗಿ ಚಟುವಟಿಕೆಗಳಲ್ಲಿ ತೊಡಗಬೇಡಿ ಎಂದು ಶರತ್ ಎಚ್ಚರಿಸಿದರು.
ಇತ್ತೀಚಿಗೆ ಚಿಪ್ ಆಧಾರಿತ ಎಟಿಎಂಗಳನ್ನು ನಿರ್ಮಿಸಲಾಗಿದೆ. ಇದುದ್ದರಲ್ಲಿ ಅವು ಸ್ವಲ್ಪ ಸುಕ್ಷಿತವಾಗಿದ್ದು, ಗ್ರಾಹಕರು ಹೆಚ್ಚಾಗಿ ಅವುಗಳನ್ನು ಬಳಸುವುದು ಸೂಕ್ತ ಎಂದು ಹೇಳಿದರು.
ದೇಶದಲ್ಲಿ ಆನ್‍ಲೈನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸಾಮಾನ್ಯ ವೆಬ್‍ಸೈಟ್‍ಗಳಿಗಿಂತಲೂ ಅಶ್ಲೀಲ ವೆಬ್‍ಸೈಟ್‍ಗಳ ವೀಕ್ಷಣೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರು ಸ್ವಯಂ ನಿಯಂತ್ರಣ ಇರಿಸಿಕೊಳ್ಳುವುದು ಸೂಕ್ತ ಎಂದರು.
ಮಾಜಿ ಸಚಿವೆ ರಾಣಿಸತೀಶ್ ಸೇರಿದಂತೆ ಪೆÇಲೀಸ್ ಹಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ