ಬಸ್ತಿಕೆರೆಯಲ್ಲಿ ಕೊಚ್ಚಿ ಹೋಗಿರುವ ಯುವಕನ ಶವ ಪತ್ತೆ

ಚಿಕ್ಕಮಗಳೂರು, ಜು.12- ಭಾರೀ ಮಳೆಯಿಂದ ಕೊಪ್ಪ ತಾಲೂಕಿನ ಬಸ್ತಿಕೆರೆಯಲ್ಲಿ ಕೊಚ್ಚಿ ಹೋಗಿರುವ ಯುವಕನ ಶವ ಪತ್ತೆ ಕಾರ್ಯಾಚರಣೆಗೆ ಮುಂದುವರಿದಿದ್ದು ವರುಣನ ಅಡ್ಡಿ ಎದುರಾಗಿದೆ.
ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದ ನಿವಾಸಿ ಅಶೋಕ್, ನಿನ್ನೆ ಸಂಜೆ ಬೈಕ್‍ನಲ್ಲಿ ಹೋಗುವಾಗ ಕೆರೆ ಕೋಡಿಯ ರಭಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಇದನ್ನು ಕಂಡ ಸ್ಥಳೀಯರು ಆತನ ರಕ್ಷಣೆಗೆ ಮುಂದಾದರೂ ಅದು ಸಾಧ್ಯವಾಗಲಿಲ್ಲ. ಸ್ಥಳದಲ್ಲಿ ಎನ್‍ಡಿಆರ್‍ಎಫ್ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ತಡರಾತ್ರಿವರೆಗೂ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಹುಡುಕಾಟ ಶುರುವಾದಾಗ ಬಿರುಸು ಮಳೆ ಸುರಿಯುತ್ತಿದೆ. ಇದರಿಂದಾಗಿ ಕಾರ್ಯಾಚರಣೆಗೆ ತೊಡಕಾಗುತ್ತಿದ್ದು, ಆದರೂ ಛಲ ಬಿಡದೆ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಅವರ ಸುರಕ್ಷತೆಗೂ ಮುನ್ನೆಚ್ಚರಿಕೆ ವಹಿಸಬೇಕಾಗಿರುವುದರಿಂದ ವಿರಾಮ ನೀಡಿ ಮಳೆ ನಿಂತ ಸಂದರ್ಭದಲ್ಲಿ ಮಾತ್ರ ಮುಂದುವರಿಯಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ