ಮಧ್ಯಪ್ರಾಚ್ಯ-ಯುರೋಪ್ ಕಡೆಗೆ ಹಬ್ಬದ ಭಾರತೀಯ ಸಾಮ್ರಾಜ್ಯಗಳು : ಕಾರಣಗಳೇನು?

(-VINAY DANTKAL)

ಬಹುತೇಕರಲ್ಲಿ ಇಂತದ್ದೊಂದು ಕುತೂಹಲ ಇರುವುದು ಸಹಜವೇ.. ಭಾರತದಲ್ಲಿ ಆಳಿದ ರಾಜರುಗಳು, ಸಾಮ್ರಾಜ್ಯಗಳ ಆಳ್ವಿಕೆಯತ್ತ ಕಣ್ಣು ಹಾಯಿಸಿದರೆ ಅವುಗಳು ಭಾರತದಲ್ಲಿ ಮಾತ್ರ ಸಾಮ್ರಾಜ್ಯ ಕಟ್ಟಿ ಮೆರೆದಿರುವುದು ಕಣ್ಣಿಗೆ ಬೀಳುತ್ತದೆ. ಎಲ್ಲೋ ಒಂದಿಬ್ಬರು ಮಾತ್ರ ಪಕ್ಕದ ಬರ್ಮಾ ಕಡೆಗೋ ಅಥವಾ ಅದರಾಚೆಗಿರುವ ಕಂಪೂಚಿಯಾ (ಈಗಿನ ಕಾಂಬೋಡಿಯಾ) ದಾಟಿ ಸಾಮ್ರಾಜ್ಯ ನಿರ್ಮಾಣ ಮಾಡಿರುವುದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ತಿಳಿದು ಬರುತ್ತದೆ.
ಭಾರತದ ರಾಜರು ಅರಬ್ ಕಡೆಗೋ, ಯೂರೋಪ್ ಕಡೆಗೋ ಅಥವಾ ಚೀನಾ ಕಡೆಗೋ ಮುಖ ಮಾಡಬಹುದಿತ್ತು ಎನ್ನುವುದು ಎಲ್ಲರಂತೆ ನನ್ನನ್ನೂ ಕಾಡಿದ ಪ್ರಶ್ನೆ. ಈ ಪ್ರದೇಶಗಳಿಗೆ ಭಾರತದ ರಾಜರು ಸಾಮ್ರಾಜ್ಯ ವಿಸ್ತರಿಸಿ ಹೋಗಿದ್ದರೆ ಅಲ್ಲಿಯೂ ಕೂಡ ಭಾರತೀಯ ಸಂಸ್ಕೃತಿ ಇರಬಹುದಿತ್ತು ಎನ್ನುವ ಭಾವನೆ ನನ್ನನ್ನು ಕಾಡದೇ ಇರಲಿಲ್ಲ. ಹೀಗೆಕೆ ಎಂದು ಆಲೋಚಿಸುತ್ತಿದ್ದಾಗಲೇ ಕೆಲವು ಮಾಹಿತಿಗಳು ನನಗೆ ಸಿಕ್ಕವು. ಅವನ್ನು ನಿಮ್ಮ ಮುಂದೆ ಇಟ್ಟರೆ ನನ್ನ ಸಂದೇಹಗಳಿಗೆ ಸಿಕ್ಕ ಉತ್ತರ ನಿಮಗೂ ಸಿಗಬಹುದು.
ಭಾರತದ ಇತಿಹಾಸವನ್ನು ಗಮನಿಸಿದರೆ ಅಲೆಕ್ಸಾಂಡರ್, ಮೊಹಮ್ಮದ್ ಘಝ್ನಿ, ಮೊಹಮ್ಮದ್ ಘೋರಿ, ಬಾಬರ್, ಮಂಗೋಲಿಯನ್ನರು ಹೀಗೆ ಅದೆಷ್ಟೋ ಜನರು ಭಾರತದ ಮೇಲೆ ದಂಡೆತ್ತಿ ಬಂದರು ಎನ್ನುವುದನ್ನು ನಾವು ಗಮನಿಸುತ್ತೇವೆ. 10ಕ್ಕೂ ಹೆಚ್ಚಿನ ಸಾರಿ ಘಝ್ನಿ ಹಾಗೂ ಘೋರಿಗಳು ಭಾರತದ ಮೇಲೆ ಧಾಳಿ ಮಾಡಿದರು ಎಂದೆಲ್ಲ ಓದಿದ್ದೇವೆ. ಆದರೆ ಭಾರತದ ಅರಸರು ಮಾತ್ರ ಯೂರೋಪ್ ಮೇಲೆ ಧಾಳಿ ಮಾಡಿದರು, ಚೀನಾ ಮೇಲೆ ದಾಳಿ ಮಾಡಿದರು, ಮಂಗೋಲಿಯಾ, ಅರಬ್ ಹೀಗೆ ಭಾರತ ಉಪಖಂಡವನ್ನು ಹೊರತು ಪಡಿಸಿ ಉಳಿದ ಕಡೆಗೆ ದಾಳಿ ಮಾಡಿದರು ಎಂಬ ಅಂಶಗಳನ್ನು ಕೇಳಿಯೇ ಇಲ್ಲ. ಭಾರತವನ್ನು ಯೂರೋಪಿನಿಂದ ಬಂದವರು ವಸಾಹತುವನ್ನಾಗಿ ಮಾಡಿಕೊಂಡಿದ್ದರು ಎಂಬ ವಿಷಯವನ್ನು ಕೇಳಿದಾಗಲೆಲ್ಲ , ಭಾರತವೂ ಯೂರೋಪನ್ನು ವಸಾಹತು ಮಾಡಿಕೊಳ್ಳಬಹುದಿತ್ತು. ಆದರೆ ಯಾಕೆ ಹಾಗೆ ಮಾಡಿಕೊಳ್ಳಲಿಲ್ಲ ಎನ್ನುವ ಅಂಶಗಳು ಕಾಡಿದ್ದವು. ಅವುಗಳನ್ನು ನಾನು ನನ್ನದೇ ಆದ ರೀತಿಯಲ್ಲಿ ತರ್ಕಿಸಲು ಆರಂಭಿಸಿದೆ. ಈ ಕುರಿತಂತೆ ಜಾಲತಾಣವನ್ನು ಜಾಲಾಡಿದಾಗ ಹಲವು ಮಾಹಿತಿಗಳೂ ಸಿಕ್ಕವು. ಅವುಗಳನ್ನು ನಿಮ್ಮ ಮುಂದೆ ಇಡುವ ಯತ್ನ ಮಾಡುತ್ತೇನೆ.
1) ಚಿಕ್ಕ ಚಿಕ್ಕ ರಾಜಮನೆತನಗಳು
ಭಾರತದ ರಾಜಮನೆತನಗಳು ಬಹಳ ಚಿಕ್ಕವು. ಭಾರತಕ್ಕೆ ಹೋಲಿಸಿದರೆ ಪಾಶ್ಚಿಮಾತ್ಯದ ರಾಜರುಗಳು ಪ್ರಭಲರು ಹಾಗೂ ದೊಡ್ಡ ದೊಡ್ಡ ಸಾಮ್ರಾಜ್ಯವನ್ನು ಹೊಂದಿರುವವರು ಎಂದರೆ ತಪ್ಪಾಗಲಿಕ್ಕಿಲ್ಲ. ಚಿಕ್ಕ ಮನೆತನಗಳು, ತಮ್ಮ ಅಕ್ಕ-ಪಕ್ಕದ ರಾಜ್ಯಗಳನ್ನು ಸೋಲಿಸಿ, ಅವುಗಳ ಮೇಲೆ ನಿಯಂತ್ರಣ ಹೇರುವುದಕ್ಕಷ್ಟೇ ಸೀಮಿತವಾಗಿದ್ದವು. ಇಂತಹ ರಾಜ್ಯಗಳ ಚುಕ್ಕಾಣಿ ಹಿಡಿದಿದ್ದ ರಾಜರುಗಳಿಗೆ ದೂರದ ಯೂರೋಪ್, ಚೀನಾ, ಮಧ್ಯಪ್ರಾಚ್ಯಗಳ ಕಡೆಗೆ ಗಮನ ಹರಿಸುವ ಆಲೋಚನೆಯೇ ಬರಲಿಲ್ಲ ಬಿಡಿ.

2) ಸಣ್ಣ ಸೈನ್ಯ :
ರಾಜ್ಯಗಳು ಸಣ್ಣವು. ಅದಕ್ಕೆ ತಕ್ಕಂತೆ ಇಲ್ಲಿಂದ ಸೈನ್ಯಗಳೂ ಕೂಡ ಚಿಕ್ಕವು. ಆನೆಗಳು ಹೇರಳವಾಗಿದ್ದರೂ ಅಶ್ವದಳಕ್ಕೋ ಅಥವಾ ಇನ್ಯಾವುದಕ್ಕೋ ಬೇರೆ ಬೇರೆ ದೇಶಗಳ ಕಡೆಗೆ ಮುಖ ಮಾಡುವ ಅನಿವಾರ್ಯತೆ ಭಾರತದ ರಾಜರಿಗಿತ್ತು. ಭಾರತದ ವಾತಾವರಣಕ್ಕೆ ಹೊಂದಿಕೊಂಡ ಪದಾತಿದಳ (ಕಾಲಾಳು)ಗಳು, ಗಜಪಡೆ ಇತ್ಯಾದಿಗಳು ಉಪಖಂಡದಿಂದ ಹೊರ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳುವುದು ಸಾಧ್ಯವಿಲ್ಲ ಬಿಡಿ. ಹೀಗಾಗಿ ದೊಡ್ಡ ಸೈನ್ಯ ಕಟ್ಟಬೇಕು, ಸಾಮ್ರಾಜ್ಯ ದೊಡ್ಡದು ಮಾಡಬೇಕೆಂಬ ಉಸಾಬರಿಗೆ ಹೋಗಲಿಲ್ಲ. ಭಾರತದ ಸೈನಿಕರು ಪರಾಕ್ರಮಿಗಳೇನೋ ಹೌದು. ಆದರೆ ಬಹುದೊಡ್ಡ ಸೈನ್ಯದ ಎದುರು ಜಯಗಳಿಸುವಷ್ಟು ಸಂಖ್ಯೆ ಇರಲಿಲ್ಲ ಎನ್ನಲೇ ಬಹುದು.

3) ಶ್ರೀಮಂತ ರಾಜ್ಯಗಳು
ಭಾರತದಲ್ಲಿದ್ದ ಸಣ್ಣ ಪುಟ್ಟ ರಾಜ್ಯಗಳು ಭೌಗೋಳಿಕವಾಗಿ ಚಿಕ್ಕದೇ ಆಗಿದ್ದರೂ ಕೂಡ ಸಾಕಷ್ಟು ಶ್ರೀಮಂತವಾಗಿದ್ದವು. ಹಣಕಾಸು, ವೈಭೋಗದಲ್ಲಿ ಭಾರತದ ರಾಜಸಂಸ್ಥಾನಗಳನ್ನು ಮೀರಿಸಲು ಸಾಧ್ಯವೇ ಇರಲಿಲ್ಲ ಬಿಡಿ. ಭಾರತದ ಉಪಖಂಡವನ್ನು ದಾಟಿದರೆ ಸಿಗಬಹುದಾದ ಪ್ರದೇಶಗಳೆಲ್ಲ ಬಡತನದಿಂದಲೇ ಕೂಡಿದ್ದವು. ಅರೆಬಿಯಾ ಇರಲಿ, ಮಧ್ಯ ಏಷ್ಯಾ ಇರಲಿ ಭಾರತದ ಚಿಕ್ಕ ಸಂಸ್ಥಾನದ ಅರ್ಧದಷ್ಟೂ ಸಂಪತ್ತನ್ನು ಹೊಂದಿರಲಿಕ್ಕೆ ಸಾಧ್ಯವೇ ಇಲ್ಲ ಬಿಡಿ. ಶ್ರೀಮಂತವಾಗಿರುವ ರಾಜ್ಯಗಳ ಕಣ್ಣು ಬಡ ಸಂಸ್ಥಾನಗಳ ಮೇಲೆ ಬೀಳುವುದಿಲ್ಲ. ಭಾರತದ ರಾಜರುಗಳಿಗೂ ಆಗಿದ್ದು ಇದೇ. ಹೀಗಾಗಿ ಭಾರತದ ರಾಜರುಗಳು ಉಪಖಂಡದ ಆಚೆಗೆ ದೃಷ್ಟಿ ಹಾಯಿಸಲಿಲ್ಲ ಎನ್ನಬಹುದು.

4) ಭೌಗೋಳಿಕ ಅಡೆತಡೆಗಳು
ಭಾರತದ ರಾಜರುಗಳು ಯೂರೋಪಿಗೋ ಅಥವಾ ಅರೆಬಿಯಾಕ್ಕೋ ಅಥವಾ ಮಧ್ಯಪ್ರಾಚ್ಯಕ್ಕೋ ಹೋಗಬೇಕೆಂದರೆ ಭಾರಿ ಪ್ರಮಾಣದ ಭೌಗೋಳೀಕ ಅಡೆತಡೆಗಳನ್ನು ಎದುರಿಸಲೇಬೇಕಿತ್ತು. ಈ ಭಾಗದಲ್ಲಿ ನಡುವೆ ಸಿಗುವ ವಿಶಾಲವಾದ ಮರಳುಗಾಡು (ಥಾರ್ ಇತ್ಯಾದಿ), ಹಿಂದು-ಕುಶ್ ಪರ್ವತ ಶ್ರೇಣಿಗಳು, ಅರೆಬಿಯಾದ ಮರಳುಗಾಡು ಇತ್ಯಾದಿಗಳು ಭಾರತದ ರಾಜರುಗಳಿಗೆ, ಸೈನಿಕರಿಗೆ ಸುಲಭವಂತೂ ಆಗಿರಲಿಲ್ಲ. ಅಲ್ಲದೇ ಆಗಿನ ಗಾಂಧಾರ, ಈಗಿನ ಅಫ್ಘಾನಿಸ್ಥಾನದ ಆಚೆಗಿನ ಗುಡ್ಡಗಾಡು, ಖಾಲಿ ಖಾಲಿ ಪ್ರದೇಶಗಳು, ಜನವಸತಿ ರಹಿತ ಗುಡ್ಡಗಾಡುಗಳು ಯಾವುದಕ್ಕೂ ನಿರುಪಯುಕ್ತ ಎನ್ನುವಂತಾಗಿದ್ದವು. ಮಧ್ಯ ಏಷ್ಯಾದವರಿಗೆ, ಅರಬ್ಬರಿಗೆ, ಅಥವಾ ಖೀಲ್ಜಿ, ಘೋರಿ ಘಜ್ನಿಗಳಂತಹ ಮುಸಲ್ಮಾನ ದೊರೆಗಳಿಗೆ ಭಾರತದ ಸಂಪತ್ತಿನ ಮೇಲೆ ಕಣ್ಣಿತ್ತು. ಆದರೆ ಭಾರತದ ರಾಜರುಗಳು ಕಣ್ಣಿಡಲು ಮಧ್ಯ ಏಷ್ಯಾದಲ್ಲಿ ಏನೂ ಇರಲಿಲ್ಲ. ಮಧ್ಯ ಏಷ್ಯಾದ ರಾಜರುಗಳು ಖೈಬರ್ ಹಾಗೂ ಬೋಲಾನ್ ಕಣವೆಗಳನ್ನು ಬಳಸಿಕೊಂಡು ಹಿಂದು-ಕುಷ್ ಪರ್ವತ ದಾಟಿ ಭಾರತಕ್ಕೇನೋ ಬಂದರು. ಆದರೆ ಭಾರತೀಯ ಅರಸರಿಗೆ ಅದರ ಅಗತ್ಯವೇ ಇರಲಿಲ್ಲ.
ಇವು ಪ್ರಮುಖ ಕಾರಣಗಳು ಎನ್ನಬಹುದಾದರೂ ಚಿಕ್ಕಪುಟ್ಟ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಭಾರತದ ಅರಸೊತ್ತಿಗೆಗಳ ಬಳಿ ಕುದುರೆಗಳು ಕಡಿಮೆ ಇದ್ದವು. ಮರಳುಗಾಡಿನ ಹಡಗುಗಳಾದ ಒಂಟೆಗಳ ಸಂಖ್ಯೆ ವಿರಳವಾಗಿತ್ತು. ಇವುಗಳೂ ಕೂಡ ಮುಖ್ಯ ಕಾರಣಗಳೆನ್ನಿಸಿಕೊಳ್ಳುತ್ತವೆ.
ಇಷ್ಟಾದರೂ ಕೂಡ ಭಾರತ ಸಾಂಸ್ಕೃತಿಕವಾಗಿ ಯೂರೋಪ್, ಚೀನಾ, ಅರೆಬಿಯಾಗಳ ಮೇಲೆ ಆಳ್ವಿಕೆ ನಡೆಸಿತು ಎನ್ನಬಹುದು. ಬೌದ್ಧ ಧರ್ಮವನ್ನು ಚೀನಾ ಹಾಗೂ ಇಂಡೋಚೀನಾ ಕಡೆಗಳಲ್ಲಿ ಬೆಳೆಸಿತು. ಇಂಡೋ-ಚೀನಾಗಳಲ್ಲಿ ಹಿಂದೂ ಧರ್ಮವನ್ನು ಬೆಳೆಸಿತು. ಇನ್ನು ಅರೆಬಿಯಾಗಳಿಗೆ ಭಾರತದ ಅಂಕಿಗಳನ್ನೂ, ಪ್ರಮೇಯಗಳನ್ನೂ ನೀಡಿತು. ಯೂರೋಪ್ ರಾಷ್ಟ್ರಗಳಗೆ ಕಾಳೂಮೆಣಸು ಮುಂತಾದ ಸಾಂಬಾರ ಪದಾರ್ಥಗಳನ್ನು ನೀಡುವ ಮೂಲಕ ಅವರನ್ನು ಅಂಕೆಯಲ್ಲಿ ಇರಿಸಿಕೊಂಡಿತು. ಇಂತಹ ರಾಷ್ಟ್ರದ ಮೇಲೆ ವಿದೇಶಿಗರು ಆಕ್ರಮಣ ಮಾಡಿದ ನಂತರ ಭಾರತದಲ್ಲಿ ಏನೇನಾಯ್ತು ಎನ್ನುವುದು ಎಲ್ಲಿರಿಗೂ ತಿಳಿದಿದ್ದೇ….

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ