ರೈತರ ಸಾಲ ಮನ್ನಾಗೆ ರಾಜ್ಯ ಸರ್ಕಾರ ಬದ್ಧವಾಗಿದೆ; ಸಾಲಮನ್ನ ಯೋಜನೆಗೆ ಕೇಂದ್ರ ಶೇ. 50%ರಷ್ಟು ನೆರವು ನೀಡಬೇಕು: ಸಿಎಂ ಹೆಚ್ ಡಿ ಕುಮಾರಸ್ವಾಮಿ

ನವದೆಹಲಿ:ಜೂ-17:ಕರ್ನಾಟಕದಲ್ಲಿ ಸುಮಾರು 85 ಲಕ್ಷ ಮಂದಿ ರೈತರು ವಿವಿಧ ಬ್ಯಾಂಕುಗಳಲ್ಲಿ ಕೃಷಿ ಸಾಲ ತೆಗೆದುಕೊಂಡಿದ್ದು, ಆದರೆ ಸತತ ಬರಗಾಲ, ಬೆಳೆನಾಶಗಳಿಂದ ಇಳುವರಿ ಬಾರದೆ ರೈತರು ಸಾಲದ ಸುಳಿಗೆ ಸಿಲುಕಿಕೊಂಡು ಸಾಲ ಹಿಂತಿರುಗಿಸಲಾಗದೆ ಆತ್ಮಹತ್ಯೆಹಾದಿಹಿಡಿದಿದ್ದಾರೆ. ರಾಜ್ಯದ ನೂತನ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾಗೆ ಸಿದ್ದವಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸಾಲ ಮನ್ನಾದ ಶೇಕಡಾ 50ರಷ್ಟು ಭಾಗವನ್ನು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗ ಮಂಡಳಿಯ ನಾಲ್ಕನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮಿಂದಲೂ ಕೇಂದ್ರ ಸರಕಾರಕ್ಕೆ ಸಂಪೂರ್ಣ ಸಹಕಾರ ಸಿಗಲಿದೆ ಎಂದ ಅವರು, ರೈತರ ಸಾಲಮನ್ನಕ್ಕಾಗಿ ನಮ್ಮ ಸರಕಾರ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ 85 ಲಕ್ಷ ರೈತರು ಸಾಲ ಪಡೆದಿದ್ದಾರೆ. ರಾಜ್ಯದ ಸಾಲಮನ್ನ ಯೋಜನೆಗೆ ಕೇಂದ್ರ ಶೇ. 50%ರಷ್ಟು ನೆರವು ನೀಡಬೇಕು ಎಂದರು.

ರಾಜ್ಯದ ಸುಧಾರಣೆಗೆ ಕೇಂದ್ರದ ನೆರವು ಅತ್ಯಂತ ಅಗತ್ಯ. ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಯದ ನಡುವೆಯೇ ರಾಜ್ಯದ ಅಭಿವೃದ್ಧಿಗೆ ಕೇಂದ್ರ ನೆರವು ನೀಡಬೇಕಿದೆ ಎಂದು ಮನವಿ ಮಾಡಿದರು.

ಕೃಷಿ ಮಾರುಕಟ್ಟೆ ಸುಧಾರಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕರ್ನಾಟಕ ಕೃಷಿ ಮಾರುಕಟ್ಟೆ ನೀತಿ 2013 ಹಲವು ಸುಧಾರಣೆಗಳನ್ನು ತಂದಿದೆ. ಸಮಾನ ಮಾರುಕಟ್ಟೆ ವೇದಿಕೆ (ಯುಪಿಎಮ್) ರೈತರಿಗೆ ಬಹಳ ಉಪಕಾರಿಯಾಗಿದ್ದು ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ನಿಗದಿಪಡಿಸಲಾಗುತ್ತದೆ ಎಂದರು,

ಕೃಷಿ ವಲಯದಲ್ಲಿ ಹವಾಮಾನ ಬದಲಾವಣೆ ಮುಖ್ಯವಾಗುತ್ತದೆ. ದೇಶದಲ್ಲಿ ಹವಾಮಾನ ಚೇತರಿಕೆ ಕೃಷಿ ಕ್ರಾಂತಿಯನ್ನು ತರಲು ತಜ್ಞರ ನೆರವು ಪಡೆದು ವಿಸ್ತಾರ ಚೌಕಟ್ಟು ಮತ್ತು ಪದ್ದತಿಯನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಇಂದು ಕೃಷಿ ಸೇರಿದಂತೆ ಬೇರೆ ವಲಯಗಳಲ್ಲಿ ನೀರಿನ ಅಭಾವ ಉಂಟಾಗುತ್ತಿದ್ದು ಅದನ್ನು ಬಗೆಹರಿಸಲು ಕರ್ನಾಟಕ ಸರ್ಕಾರ ಕೆರೆ ಸಂಜೀವಿನಿಯಂತಹ ಕ್ರಮಗಳನ್ನು ಅನುಸರಿಸಿದೆ. ಒಂದು ದಶಕವನ್ನಿಡೀ ನೀರಿನ ಸಂರಕ್ಷಣೆಗೆ ಬಳಸಬೇಕು. ಅದನ್ನು ನೀರಿನ ದಶಕ ಎಂದು ಕರೆಯೋಣ. ಅದು ಜನತೆಯ ಚಳವಳಿಯಾಗಿ ಮಾರ್ಪಡಬೇಕು. ಇದಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದರು.

Niti Aayog council meets,Central government,H D kumaraswamy,PM Narendramodi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ