ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಎಚ್ ಎಂ ರೇವಣ್ಣ ಅಸಮಾಧಾನ

ಬೆಂಗಳೂರು, ಜೂ.6- ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಎಚ್ ಎಂ ರೇವಣ್ಣ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಮಂಗಳವಾರ ರಾತ್ರಿ 11 ಗಂಟೆ ವರೆಗೆ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ ಮಧ್ಯರಾತ್ರಿ ವೇಳೆಗೆ ಬದಲಾಗಿದೆ. ನಾನು ಕುರುಬ ಸಮಾಜ ಹಾಗು ಪಕ್ಷ ಕಟ್ಟಲು ಪ್ರಾಮಾಣಿಕವಾಗಿ ದುಡಿದಿದ್ದಕ್ಕೆ ಪಕ್ಷ ನನಗೆ ನೀಡಿದ ಗೌರವ ಎಂದು ತಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೊರ ಹಾಕಿದ್ದಾರೆ.
ಕುಮಾರಸ್ವಾಮಿ ಸಂಪುಟದಲ್ಲಿ ಕುರುಬ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣೆನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕುರುಬ ಸಮುದಾಯದ ಶಾಸಕರು ಸಿಡಿದೆದ್ದು ಆಕ್ರೋಶ ವ್ಯಕ್ತಡಿಸಿದ್ದಾರೆ. ಕುರುಬರಿಗೆ ಅನ್ಯಾಯ ಮಾಡಲಾಗಿದೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಗೆ ನೀಡಿದ್ದಾರೆ. ಅಲ್ಲದೇ ಮುಂದೇನು ಮಾಡಬೇಕೆಂಬ ಬಗ್ಗೆ ಚಿಂತನೆ ನಡೆಸಲು ಸದ್ಯದಲ್ಲೇ ಸಭೆ ನಡೆಸಲು ತಿರ್ಮಾನಿಸಿದ್ದಾರೆ.
ಕುರುಬ ಹಾಗೂ ಮುಸ್ಲಿಂ ಸಮುದಾಯ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪರವಾಗಿ ಮತ ನೀಡಿದೆ. ಈ ಎರಡೂ ಸಮುದಾಯಗಳಿಗೆ ಸಚಿವ ಸ್ಥಾನ ದೊರಕದಿರುವುದು ಅತೃಪ್ತಿ ತಂದಿದೆ. ಈ ಎರಡು ಸಮಾಜಗಳನ್ನು ತುಳಿಯಲು ಕಾಣದ ಕೈಗಳು ಕೆಲಸ ಮಾಡಿವೆ. ಕುರುಬ ಹಾಗೂ ಮುಸ್ಲಿಂ ಸಮುದಾಯಗಳಿಗೆ ಈ ಬೆಳವಣಿಗೆ ಆಘಾತ ತಂದಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಪಕ್ಷದ ಗತಿಯೇನು ಎಂದು ರೇವಣ್ಣ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ