ಸಿಆರ್‌ಪಿಎಫ್‌ ವಾಹನದ ಮೇಲೆ ಪ್ರತಿಭಟನಾಕಾರರಿಂದ ಕಲ್ಲು ತೂರಾಟ: ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ವಾಹನದ ಚಕ್ರಕ್ಕೆ ಸಿಲುಕಿ ಓರ್ವ ವ್ಯಕ್ತಿ ಸಾವು

ಶ್ರೀನಗರ:ಜೂ-೨; ಶ್ರೀನಗರದ ಜಾಮಿಯ ಮಸೀದಿ ರಸ್ತೆಯಲ್ಲಿ ಜನರ ಗುಂಪೊಂದು ಆ ದಾರಿಯಾಗಿ ಬರುತ್ತಿದ್ದ ಸಿಆರ್‌ಪಿಎಫ್‌ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದು, ಈ ವೇಳೆ ಜನರ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸಿಆರ್‌ಪಿಎಫ್‌ ವಾಹನದ ಚಾಲಕ ಪ್ರಯತ್ನಿಸಿದಾಗ ಪ್ರತಿಭಟನಾಕಾರರಲ್ಲಿ ಓರ್ವ ವ್ಯಕ್ತಿ ಚಕ್ರದೆಡೆಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಇನ್ನೊಬ್ಬ ವ್ಯಕ್ತಿಗೆ ತೀವ್ರ ಗಾಯಗಳಾಗಿವೆ.

ವಾಹನದ ಚಕ್ರಕ್ಕೆ ಸಿಲುಕಿ ಯೋನಿಸ್ ಅಹಮದ್ ಮತ್ತು ಕೈಸರ್ ಅಹಮದ್ ಎಂಬವರಿಗೆ ತೀವ್ರ ಗಾಯಗಳಾಗಿತ್ತು. ಇವರಲ್ಲಿ ಕೈಸರ್ ನಿನ್ನೆ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಜನರ ಗುಂಪು ಭಾರತ ವಿರೋಧಿ ಘೋಷಣೆ ಕೂಗಿ ಪೊಲೀಸರ ಜತೆ ಘರ್ಷಣೆಗಿಳಿದಿತ್ತು. ಆ ವೇಳೆ ಆ ದಾರಿಯಾಗಿ ಬರುತ್ತಿದ್ದ ಸಿಆರ್‌‍ಪಿಎಫ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿತ್ತು.

ಪ್ರತಿಭಟನಾಕಾರರು ವಾಹನದ ತುಂಬಾ ಹತ್ತಿರ ಬಂದಿದ್ದರು. ಕೆಲವರು ವಾಹನದ ಮೇಲೆ ಹತ್ತಿದ್ದರು. ವಾಹನದೊಳಗೆ ಇದ್ದವರನ್ನು ಹತ್ಯೆ ಮಾಡುವ ರೋಷ ಆ ಪ್ರತಿಭಟನಾಕಾರರಲ್ಲಿತ್ತು. ಆ ಪರಿಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಯನ್ನು ರಕ್ಷಿಸಲು ವಾಹನ ಚಲಾಯಿಸಿದ್ದು ಈ ವೇಳೆ ಪ್ರತಿಭಟನಾಕಾರರು ವಾಹನದ ಚಕ್ರದಡಿ ಬಿದ್ದಿರಬಹುದು ಸಿಆರ್‌ಪಿಎಫ್‌ ಪಿಆರ್‍ಒ ಸಂಜಯ್ ಶರ್ಮಾ ತಿಳಿಸಿದ್ದಾರೆ. ಆದರೆ ಯೋಧರು ಬೇಕೆಂದು ಪ್ರತಿಭಟನಾಕಾರರ ಮೇಲೆ ಹರಿಸಿಲ್ಲ ಎಂದಿದ್ದಾರೆ.

ವಾಹನದಲ್ಲಿ 28 ಬೆಟಾಲಿಯನ್ ಸೆಕೆಂಡ್ ಇನ್ ಕಮಾಂಡ್ ಎಸ್. ಎಸ್ ಯಾದವ್ ಅವರು ಇದ್ದರು ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ