ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನತಾದರ್ಶನ

 

ಬೆಂಗಳೂರು, ಮೇ 29-ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜನತಾದರ್ಶನ ನಡೆಸಿದರು.
ಮುಖ್ಯಮಂತ್ರಿಯಾದ ಮೇಲೆ ಮೊದಲನೇ ಜನತಾದರ್ಶನ ಇದಾಗಿದ್ದು, ಬೆಳಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಜನತಾದರ್ಶನ ಮೂರು ಗಂಟೆ ತಡವಾಗಿ ಆರಂಭವಾಯಿತಾದರೂ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಮುಖ್ಯಮಂತ್ರಿಯವರಿಗೆ ತಮ್ಮ ಅಹವಾಲನ್ನು ಸಲ್ಲಿಸಿದರು.

ಅಂಗವಿಕಲರಿಗೆ ಅಹವಾಲು ಸಲ್ಲಿಸಲು ಪ್ರಥಮ ಆದ್ಯತೆ ನೀಡಲಾಯಿತು.
ರಾಜಾಜಿನಗರದ ಜಾನಕಮ್ಮ ಎಂಬ ವಿಕಲಚೇತನರು ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದರು. ತಲಕಾಡಿನ ಕವಿತಾ ಎಂಬುವರು ಅಭಿನಂದನೆ ಸಲ್ಲಿಸಿ ನಿಮ್ಮ ಆಡಳಿತ ಚೆನ್ನಾಗಿರಲಿ ಎಂದು ಹಾರೈಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ಕೆ.ಮಂಜು ಸೇರಿದಂತೆ ಹಲವು ಚಲನಚಿತ್ರರಂಗದ ಗಣ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಬೆಳಗ್ಗೆ 9 ಗಂಟೆಗೆ ಸಿಎಂ ಕುಮಾರಸ್ವಾಮಿ ಅವರನ್ನು ನೋಡಿ ಅಭಿನಂದಿಸಿ, ಅಹವಾಲು ಸಲ್ಲಿಸಲು ದೂರದ ಊರುಗಳಿಂದ ಬಂದಿದ್ದರು. ಕುಮಾರಸ್ವಾಮಿಯವರು ಬರುವುದು ತಡವಾಗಿದ್ದರಿಂದ ಬಂದವರಿಗೆ ನೀರು, ಮಜ್ಜಿಗೆ, ಬಿಸ್ಕೆಟ್, ಟೀ, ಕಾಫಿಯನ್ನು ಸಿಬ್ಬಂದಿ ವ್ಯವಸ್ಥೆ ಮಾಡಿದ್ದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆದಿಚುಂಚನಗಿರಿ ಮಠಕ್ಕೆ ತೆರಳಿರುವುದರಿಂದ ತಡವಾಗಿದೆ. ಬರುತ್ತಾರೆ ಎಂದು ತಿಳಿಸಿದ್ದರಿಂದ ಬಂದವರು ಯಾರೂ ವಾಪಸ್ ಹೋಗದೆ ಅವರನ್ನು ಭೇಟಿ ಮಾಡಲು ಅಲ್ಲೇ ಕಾಯುತ್ತಿದ್ದರು.
ಅಂಗವಿಕಲರು, ವಯೋವೃದ್ದರು, ಕ್ಯಾನ್ಸರ್‍ರೋಗಿಗಳು ಮುಖ್ಯಮಂತ್ರಿಗಳಿಗೆ ತಮ್ಮ ಮನವಿ ಸಲ್ಲಿಸಿದರು. ಮಂಡ್ಯ, ಮೈಸೂರು, ರಾಮನಗರ ಮುಂತಾದೆಡೆಯಿಂದ ಹಲವರು ಆಗಮಿಸಿ ಹೂಗುಚ್ಛ ನೀಡಿ ಅಭಿನಂದಿಸಿದರು.
ಅನುದಾನಿತ ಶಿಕ್ಷಣ ಸಂಸ್ಥೆ ಡಿ ಗ್ರೂಪ್‍ನ ಸುಮಾರು 540 ನೌಕರರನ್ನು ವೇತನಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿ ಮನವಿ ನೀಡಲು ಸಂಘದ ಪ್ರತಿನಿಧಿಗಳು ಬಂದಿದ್ದು, ಸಿಎಂಗೆ ಮನವಿ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ